ಆಳ್ವಾಸ್‌ನಲ್ಲಿ ‘ಇನ್ಸ್‌ಫೇರಿಯಾ- 2025’ ರಾಷ್ಟ್ರೀಯ ವಿಚಾರ ಸಂಕಿರಣ

KannadaprabhaNewsNetwork | Published : Feb 21, 2025 11:45 PM

ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‌ ವಿಭಾಗದ ವತಿಯಿಂದ ‘ಇನ್ಸ್‌ಫೇರಿಯಾ-2025’ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್‌ ವಿಭಾಗದ ವತಿಯಿಂದ ‘ಇನ್ಸ್‌ಫೇರಿಯಾ-2025’ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು.

ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನ್ ಮೂಲದ ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಯುಚಿ ನಗಾನೊ ಮುಖ್ಯ ಅತಿಥಿಯಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಇನ್ನಿತರ ತಂತ್ರಜ್ಞಾನಗಳ ಪ್ರಗತಿಯೊಂದಿಗೆ ಆರೋಗ್ಯ ನಿರ್ವಹಣಾ ಕ್ಷೇತ್ರವು ಬಹಳಷ್ಟು ಮುಂದುವರಿದಿದೆ. ಆಸ್ಪತ್ರೆ ನಿರ್ವಹಣೆಯ ಕುರಿತು ಸೂಕ್ಷ್ಮದೃಷ್ಟಿ ಬೆಳೆಸಿಕೊಳ್ಳಲು ನಮ್ಮಲ್ಲಿರುವ ಜ್ಞಾನ, ಕನಸುಗಳು ಹಾಗೂ ಆಶಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹೆಚ್ಚಿನ ಆಸ್ಪತ್ರೆಗಳನ್ನು ಕಾರ್ಪೋರೇಟ್ ಸಂಸ್ಥೆಗಳು ನಿರ್ವಹಿಸುವುದರಿಂದ ಜನಸಾಮಾನ್ಯರಿಗೆ ವ್ಯವಸ್ಥೆಗಳು ಬಳಸಿಕೊಳ್ಳಲು ಅನುಕೂಲಕರವಾಗಿಲ್ಲ. ಆಸ್ಪತ್ರೆಯ ನಿರ್ವಾಹಕರು ರೋಗಿಗಳ ಮೇಲೆ ಸಹಾನುಭೂತಿಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಆಸ್ಪತ್ರೆ ನಿರ್ವಹಣೆಯಲ್ಲಿ ನೈತಿಕ ನಾಯಕತ್ವ ವಿಷಯದ ಕುರಿತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ಅಜಿತ್ ಎಂ. ಮಿನೇಜಸ್, ಆರೋಗ್ಯ ನಿರ್ವಹಣಾ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಿಯಾತ್ಮಕ ಬದಲಾವಣೆಯ ಕುರಿತು ಎ.ಜೆ. ಹಾಸ್ಪಿಟಲ್‌ನ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲಾ ಕೆ., ನಾಯಕತ್ವದಲ್ಲಿ ನಾವಿನ್ಯತೆಯ ಕುರಿತು ಯೇನೆಪೋಯಾ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್‌ನ ಡೀನ್ ಡಾ. ಸುನಿತಾ ಸಲ್ದಾನ, ಆಸ್ಪತ್ರೆ ನಿರ್ವಹಣೆ ಹಾಗೂ ಮಂಡಳಿಯ ನಾಯಕತ್ವದ ಕುರಿತು ಬೆಂಗಳೂರಿನ ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಪಸಂಗ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾಹೆಯ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಮುಖ್ಯಸ್ಥೆ ಡಾ.ಉಷಾರಾಣಿ, ಸಕ್ರಾ ವಲ್ಡ್ ಹಾಸ್ಪಿಟಲ್‌ನ ನಿರ್ದೇಶಕಿ ನೀತಾ ವೇಗಸ್ ಇದ್ದರು. ರಾಷ್ಟ್ರದ ವಿವಿಧ ಭಾಗಗಳಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡರು.

ಸಮಾರೋಪ ಕಾರ‍್ಯಕ್ರಮದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀ ರೋಗ ತಜ್ಞೆ ಡಾ.ಹನಾ ಶೆಟ್ಟಿ, ಉದ್ಯಮಿ ರಾಹುಲ್ ಇದ್ದರು.ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯ ಸ್ನಾತಕೋತ್ತರ ವಿಭಾಗದಲ್ಲಿ ಡಾ.ಟೋಬಿ ಟಾಮ್ ಪ್ರಥಮ, ಅಪರ್ಣ ವಿ.ಕೆ. ದ್ವಿತೀಯ, ಸ್ನಾತಕ ವಿಭಾಗದಲ್ಲಿ ತುಳಸಿ ಪ್ರಥಮ, ಫಾತಿಮಾ ಸೈಮಾ ದ್ವಿತೀಯ ಸ್ಥಾನ ಪಡೆದರು.ಕಾರ್ಯಕ್ರಮದಲ್ಲಿ ವಿಭಾಗ ಮುಖ್ಯಸ್ಥ ಪ್ರೊ.ಆದರ್ಶ ಹೆಗ್ಡೆ ಅವರ ‘ಲೀಡ್ ಟು ಹೀಲ್’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಉಪನ್ಯಾಸಕಿ ನಿಧಿ ವಂದಿಸಿದರು. ವಿದ್ಯಾರ್ಥಿನಿ ವರ್ಷಿಣಿ ಕಾರ್ಯಕ್ರಮ ನಿರೂಪಿಸಿದರು.