ಸಹಜ, ಸರಳ ಭಾಷೆಯ ಕವಿತೆಗಳು ಶ್ರೇಷ್ಠವಾಗಿರುತ್ತವೆ: ಡಾ. ಸತ್ಯಮಂಗಲ ಮಹಾದೇವ

KannadaprabhaNewsNetwork |  
Published : Nov 11, 2024, 01:02 AM IST
9 | Kannada Prabha

ಸಾರಾಂಶ

ಕುಟುಂಬಕ್ಕಾಗಿ, ಸಮಾಜಕ್ಕಾಗಿ ಬದುಕುತ್ತಲೇ ಹೆಣ್ಣು ತನ್ನ ಇರುವಿಕೆಯನ್ನೂ ಸಾಬೀತು ಪಡಿಸುತ್ತಾಳೆ. ಎಲ್ಲರಿಗೂ ಬೆಳಕಾಗುತ್ತಾಳೆ. ಸಮಾಜ ಸೃಷ್ಟಿಸಿದ ಎಲ್ಲೆಗಳನ್ನು ಮೀರಿ ಜಗತ್ತನ್ನು ಅರಿಯುವ ಹೆಣ್ಣಿನ ಭಾವನೆಗಳನ್ನು ಬಯಲು ದೀಪ ಕೃತಿ ಹೊರಹೊಮ್ಮಿಸುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಹಜ ಮತ್ತು ಸರಳ ಭಾಷೆಯಲ್ಲಿ ನಿರೂಪಿತವಾದ ಕವಿತೆಗಳು ಶ್ರೇಷ್ಠವಾಗಿರುತ್ತವೆ ಎಂದು ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಕವಿ ಡಾ. ಸತ್ಯಮಂಗಲ ಮಹಾದೇವ ತಿಳಿಸಿದರು.

ನಗರದ ರಂಗಾಯಣದ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ದೇಸಿರಂಗ ಸಾಂಸ್ಕೃತಿಕ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಡಾ.ಬಿ.ಎಸ್. ದಿನಮಣಿ ಅವರ ಬಯಲು ದೀಪ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಕುರಿತು ಮಾತನಾಡಿದ ಅವರು, ಈ ಕೃತಿಯಲ್ಲಿ 50 ಕವನಗಳಿವೆ. ಎಲ್ಲವೂ ಬೇರೆ ಬೇರೆ ವಿಚಾರಗಳನ್ನು ಒಳಗೊಂಡಿವೆ. ಇವು ಸಹಜ ಕವಿತೆಗಳಾಗಿವೆ ಎಂದರು.

ಕುಟುಂಬಕ್ಕಾಗಿ, ಸಮಾಜಕ್ಕಾಗಿ ಬದುಕುತ್ತಲೇ ಹೆಣ್ಣು ತನ್ನ ಇರುವಿಕೆಯನ್ನೂ ಸಾಬೀತು ಪಡಿಸುತ್ತಾಳೆ. ಎಲ್ಲರಿಗೂ ಬೆಳಕಾಗುತ್ತಾಳೆ. ಸಮಾಜ ಸೃಷ್ಟಿಸಿದ ಎಲ್ಲೆಗಳನ್ನು ಮೀರಿ ಜಗತ್ತನ್ನು ಅರಿಯುವ ಹೆಣ್ಣಿನ ಭಾವನೆಗಳನ್ನು ಬಯಲು ದೀಪ ಕೃತಿ ಹೊರಹೊಮ್ಮಿಸುತ್ತದೆ ಎಂದರು.

ಪ್ರಭುತ್ವವನ್ನು ಪ್ರಶ್ನಿಸುವ ಕವನವೂ ಇಲ್ಲಿದೆ. ಸಂವಿಧಾನವನ್ನು ಮೂಲೆಗಿರಿಸಿ, ಬಡವರ ಬದುಕಿಗೆ ಬೆಂಕಿಯನ್ನಿರಿಸಿ ಬೆಚ್ಚಗಿರುವ ರಾಜನ ಬಗ್ಗೆ ಇಲ್ಲಿ ಆಕ್ರೋಶವಿದೆ. ಇಲ್ಲಿನ ಪ್ರತಿ ಕವಿತೆಗಳಲ್ಲೂ ಅಂತಹ ಅನುಭೂತಿಯಿದೆ. ಇವರ ಬರವಣಿಗೆಗೆ ಇನ್ನಷ್ಟು ವಿಸ್ತರಿಸುವ ಸಾಧ್ಯತೆಗಳೂ ಇವೆ ಎಂದರು.

ಈಗಿನ ಸಾಮಾಜಿಕ ಜಾಲತಾಣಗಳಿಂದಾಗಿ ಪ್ರೀತಿ ಮಹತ್ವ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿದ್ದೇವೆ. ನಮ್ಮ ಮಾತು ಕಡಿಮೆ ಆಗಿದೆ. ನಮ್ಮ ಮಾತನ್ನು ನಾವೇ ಕೇಳಿಸಿಕೊಳ್ಳದ ಪರಿಸ್ಥಿತಿಯಲ್ಲಿದ್ದೇವೆ ಎಂದರು.

ಕಾವ್ಯ ಶಿಲ್ಪವೂ ಅಪರೂಪ:

ಕೃತಿ ಬಿಡುಗಡೆಗೊಳಿಸಿದ ಲೇಖಕ, ಪತ್ರಕರ್ತ ರಘುನಾಥ ಚ.ಹ ಮಾತನಾಡಿ, ಜನಪರ ಬರವಣಿಗೆಯಿಂದ ಲೇಖಕ, ಕವಿ ಹುಟ್ಟುತ್ತಾನೆ. ಮಹಿಳೆಯರು ಇಂದು ಸಾಹಿತ್ಯ ಕೃಷಿಯಲ್ಲಿ ಹೆಚ್ಚು ತೊಡಗಿದ್ದು, ಬೌದ್ಧಿಕ ವಲಯದ ಪ್ರಗತಿ ಸೂಚಿಸುತ್ತದೆ. ಈ ಕೃತಿ ಹೆಣ್ಣಿನ ಅಂತರಂಗವನ್ನು ತೆರೆದಿಡುತ್ತದೆ ಎಂದರು.

ಲೇಖಕ, ಕವಿಗಳು ತನ್ನ ಭಾಷೆಗೆ ಮರಳು ಆಗುತ್ತಾನೆ. ಅದನ್ನು ಮೀರುವ ಮೂಲಕ ಯಶಸ್ಸು ಸಾಧಿಸಬೇಕು. ಈ ನಿಟ್ಟಿನಲ್ಲಿ ದಿನಮಣಿ ಅವರು ಯಶಸ್ವಿಯಾಗಿದ್ದಾರೆ. ಪ್ರಸ್ತುತ ಕಾವ್ಯ ಶಿಲ್ಪವೂ ಅಪರೂಪ ಆಗುತ್ತಿದೆ. ಆ ಕಾರಣಕ್ಕಾಗಿ ಈ ಕೃತಿ ತುಂಬಾ ಮುಖ್ಯವಾಗಿದೆ ಎಂದರು.

ಲೇಖಕ ವಿಕ್ರಂ ಚದುರಂಗ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಬುಕ್ ಏಜೆನ್ಸಿ ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ಕವಿ ಡಾ.ಬಿ.ಎಸ್. ದಿನಮಣಿ ಇದ್ದರು. ಟ್ರಸ್ಟ್ ಸಂಸ್ಥಾಪಕ ಕೃಷ್ಣ ಜನಮನ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ