ಮೊದಲ ಬಾರಿಗೆ ಶಾಸಕರಾದವರ ಪೈಕಿ ಇವರೂ ಒಬ್ಬರು ।
ಡಿ.ಕೆ.ಶಿವಕುಮಾರ್ ಅವರ ನೂತನ ಸಚಿವ ಸಂಪುಟದಲ್ಲಿ ಯುವ ಮುಖಂಡರಿಗೆ ಆದ್ಯತೆ ನೀಡಬೇಕೆಂದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಜೋರಾಗಿರುವ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಯುವ ನಾಯಕಿ ಹಾಗೂ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ ನಯನಾ ಮೋಟಮ್ಮ ಹೆಸರು ಮುಂಚೂಣಿಗೆ ಬಂದಿದೆ.
ಮೊದಲ ಬಾರಿಗೆ ಶಾಸಕರಾದವರ ಪೈಕಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರೂ ಒಬ್ಬರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಬೇರು ಮಟ್ಟದಲ್ಲಿ ಬಲ ಪಡಿಸಬೇಕು. ಹೀಗಾಗಿ, ಯುವ ನಾಯಕತ್ವಕ್ಕೆ ಆದ್ಯತೆ ನೀಡಬೇಕೆಂಬ ಚರ್ಚೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಬಿರುಸಾಗಿದೆ. ಹೀಗಾಗಿ, ಯುವ ಸಮರ್ಥ ಶಾಸಕರ ಪಟ್ಟಿಯನ್ನು ಹೈಕಮಾಂಡ್ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಶಾಸಕಿ ನಯನಾ ಮೋಟಮ್ಮ ಅವರ ಹೆಸರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಕೇರಳ ಚುನಾವಣೆಯಲ್ಲಿ ನಯನಾ ಯಶಸ್ವಿ
ಇತ್ತೀಚಿಗೆ ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಯನಾ ಮೋಟಮ್ಮ ಅವರು ಕುನ್ನತುನಾಡ್ ವಿಧಾನಸಭಾ ಕ್ಷೇತ್ರದ ವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಪಕ್ಷ ಸಂಘಟನೆ ಮತ್ತು ಅಭ್ಯರ್ಥಿಗೆ ಗೆಲುವಿಗೆ ಶ್ರಮಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೈಕಮಾಂಡ್ ಮಟ್ಟದಲ್ಲೂ ಅವರಿಗೆ ಸಚಿವ ನೀಡುವ ಬಗ್ಗೆ ಪ್ರಸ್ತಾಪ ಆಗುತ್ತಿದೆ. ಇನ್ನೂ ಮಹಿಳಾ ಕೋಟಾ ಮತ್ತು ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿಯೂ ಅವಕಾಶಗಳು ನಯನಾ ಮೋಟಮ್ಮ ಪರವಾಗಿವೆ ಎನ್ನಲಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ, ಅದಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಯುವ ಮತದಾರರನ್ನು ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಯನಾ ಮೋಟಮ್ಮಗೆ ಸಚಿವ ಸ್ಥಾನ ನೀಡಲಿದೆ. ಜತೆಗೆ, ನಯನಾ ಮೋಟಮ್ಮ ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಚಾಣಾಕ್ಷ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸಚಿವ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ.--ಬಾಕ್ಸ್---
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಉಳಿದ ಯಾವುದೇ ಮಹಿಳೆಯರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಈ ಬಾರಿ ಮಹಿಳೆರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡ ಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದ್ದು, ಈ ಲೆಕ್ಕಾಚಾರದಲ್ಲಿಯೂ ಶಾಸಕಿ ನಯನಾ ಮೋಟಮ್ಮ ಅವರ ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ.- ಕೋಟ್-
- ದೀಕ್ಷಿತ್ ಕಣಚೂರು, ವಕೀಲರು, ಚಿಕ್ಕಮಗಳೂರು
ಯುವ ನಾಯಕಿ ನಯನಾ ಮೋಟಮ್ಮ ಅವರಿಗೆ ಚುರುಕುತವಿದ್ದು, ಯಾವುದೇ ಸಮಸ್ಯೆಯಾದರೂ ಪರಿಹಾರ ಮಾಡುವ ಸಾಮರ್ಥ್ಯ, ಜ್ಞಾನವಿದೆ. ಹಿರಿಯತನ, ಕಿರಿತನ ಎನ್ನುವುದಕ್ಕಿಂತ ಕ್ರಿಯಾಶೀಲ ಮತ್ತು ಆಸಕ್ತಿ ಇರುವ ನಯನಾ ಮೋಟಮ್ಮ ಅವರಿಗೆ ಸಚಿವ ಸ್ಥಾನ ದೊರೆಯಬೇಕು. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೇಗಕ್ಕೆ ತಕ್ಕಂತ ಕಾರ್ಯ ನಿರ್ವಹಿಸುವ ಶಕ್ತಿ ನಯನಾ ಮೋಟಮ್ಮ ಅವರಿಗಿದೆ. ನಯನಾ ಮೋಟಮ್ಮ ಅವರಿಗೆ ಸಚಿವ ಸ್ಥಾನ ನೀಡಿದರೆ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅನುಕೂಲವಾಗಲಿದೆ.