ಶಿರಸಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಭರ್ಜರಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ನಗರದ ಅಂಚೆ ವೃತ್ತದಲ್ಲಿ ಸೇರಿದ ಶಿರಸಿ ನಗರ ಹಾಗೂ ಗ್ರಾಮೀಣ ಮಂಡಳದ ನೂರಾರು ಕಾರ್ಯರ್ಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಕಾರ ಹಾಕಿದರು.ನಗರ ಘಟಕ ಅಧ್ಯಕ್ಷ ಆನಂದ ಸಾಲೇರ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಂತೆ ಕಾಂಗ್ರೆಸ್ ಬಿಹಾರದ ಜನತೆಗೂ ಇದೇ ರೀತಿಯ ಪೊಳ್ಳು ಆಶ್ವಾಸನೆ ನೀಡಿತ್ತು. ಬಿಹಾರದ ಜನತೆ ಈ ಗ್ಯಾರಂಟಿಗೆ ಜಗ್ಗಿಲ್ಲ. ಬಿಜೆಪಿಯ ದೃಢ ಆಡಳಿತವೇ ಬೇಕು ಎಂದು ನಿರ್ಧರಿಸಿದ್ದಾರೆ. 61 ಸ್ಥಾನಗಳಿಗೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಈಗ ಒಂದೇ ಕೈನಲ್ಲಿ ಎಣಿಸಬಹುದಾದಷ್ಟು ಸ್ಥಾನಕ್ಕೆ ಸೀಮಿತಗೊಂಡಿದೆ. ವೋಟ್ ಚೋರಿ ಎಂದು ಆರೋಪ ಮಾಡುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಲ್ಲಿಯ ಜನತೆ ಉತ್ತರ ಕೊಟ್ಟಿದ್ದಾರೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಮಾತನಾಡಿ, ಬಿಹಾರದಲ್ಲಿ ಫಲಿತಾಂಶದ ಅವಲೋಕನ ಮಾಡಲೂ ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಇನ್ನು ವೋಟ್ ಚೋರಿ ಆಗಿದೆ, ಇವಿಎಂ ಹ್ಯಾಕ್ ಎನ್ನುವ ಮಾತು ರಾಹುಲ್ ಗಾಂಧಿ ಅವರಿಂದ ಕೇಳಿಬರಲಿದೆ. ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ ಇದ್ದಂತೆ. ಆಗಾಗ ಬಂದು ಇಲ್ಲ ಸಲ್ಲದ ಹೇಳಿಕೆ ನೀಡುತ್ತಾರೆ ಎಂದರು.ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡಗೋಡ ಮಾತನಾಡಿ, ಆರ್ಜೆಡಿ, ಕಾಂಗ್ರೆಸ್ ಬಿಹಾರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಅಪಪ್ರಚಾರ ಮಾಡಿತು. ಮತ ಚೋರಿ ಎಂಬ ಸುಳ್ಳು ಆರೋಪ ಮಾಡಿ, ಚುನಾವಣಾ ಆಯೋಗಕ್ಕೂ ಅವಮಾನ ಮಾಡಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ನ್ನು ಜನ ತಿರಸ್ಕರಿಸಿದ್ದಾರೆ. ಬಿಹಾರದ ಫಲಿತಾಂಶದ ಬಳಿಕ ಹೈ ಕಮಾಂಡ್ ಮಾತನಾಡದ ಸ್ಥಿತಿ ತಲುಪಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ನವೆಂಬರ್ ಕ್ರಾಂತಿ ಇನ್ನು ನಡೆಯಲು ಸಾಧ್ಯವಿಲ್ಲ. ಒಂದೊಮ್ಮೆ ರಾಜ್ಯದಲ್ಲಿಯೂ ಕಾಂಗ್ರೆಸ್ನ ಒಡಕು ಮೂಡಿದರೆ ಎಂಬ ಆತಂಕದಲ್ಲಿ ಇನ್ನು ಕಾಂಗ್ರೆಸ್ ಮೌನ ವಹಿಸಲಿದೆ ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಂದನ ಸಾಗರ, ಆರ್.ಡಿ. ಹೆಗಡೆ, ನಾಗರಾಜ ನಾಯ್ಕ ಮತ್ತಿತರರು ಇದ್ದರು.