ಶಿರಹಟ್ಟಿ: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾದ ಶಿರಹಟ್ಟಿ ಪಟ್ಟಣದಲ್ಲಿ ಮೇ ೧ರಿಂದ ಜಾತ್ರೆ ಆರಂಭವಾಗುತ್ತಿದ್ದು, ಜಾತ್ರೆಗಳಲ್ಲಿ ಜನಸಮೂಹ ಹೆಚ್ಚಾಗುವ ಕಾರಣ ಭದ್ರತೆ ಮತ್ತು ಶಿಸ್ತು ಕಾಪಾಡುವುದು ಪೊಲೀಸರ ಮುಖ್ಯ ಹೊಣೆಗಾರಿಕೆಯಾಗಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಮುಂಜಾಗ್ರತವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಡಿಎಸ್ಪಿ ಮುರ್ತುಜಾ ಖಾದ್ರಿ ಹೇಳಿದರು.
ರಥೋತ್ಸವದ ವೇಳೆ ಒಂದೇ ಸಮಯದಲ್ಲಿ ಹೆಚ್ಚು ಜನ ಸೇರುವುದನ್ನು ತಪ್ಪಿಸಲು ಪ್ರಮುಖ ದ್ವಾರದಲ್ಲಿ (ಗೇಟ್ಗಳಲ್ಲಿ) ನಿಯಂತ್ರಣ ಮಾಡಲಾಗುವುದು. ಜನರನ್ನು ಸರಿಯಾದ ದಾರಿಯಲ್ಲಿ ಸಾಗಿಸಲು ಬ್ಯಾರಿಕೇಡ್ಗಳ ಅಳವಡಿಕೆ, ಇಲ್ಲವೆ ಬಿದಿರಿನ ಡಂಬು ಕಟ್ಟಿ ಜನಸಂದಣಿ ನಿಯಂತ್ರಣಕ್ಕೆ ಮುಂದಾಗುವುದಾಗಿ ತಿಳಿಸಿದರು.
ಮುಖ್ಯ ಸ್ಥಳಗಳಲ್ಲಿ ಸಾಕಷ್ಟು ಪೊಲೀಸ್ ಸಿಬ್ಬಂದಿ ಮತ್ತು ಹೋಂ ಗಾರ್ಡ್ಗಳನ್ನು ನಿಯೋಜಿಸಿ ಜನರ ಚಲನವಲನವನ್ನು ಗಮನಿಸಲಾಗುವುದು ಎಂದರು.ಮಠದ ಆವರಣದಲ್ಲಿ ೫ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರೊಂದಿಗೆ ಜನಸಂದಣಿ ಮೇಲೆ ನಿಗಾ ಇಟ್ಟು ತುರ್ತು ಪರಿಸ್ಥಿತಿಯನ್ನು ತಕ್ಷಣ ಗುರುತಿಸಲು ಸಿದ್ದತೆ ಮಾಡಿಕೊಳ್ಳಲಾಗುವುದು. ಜನರಿಗೆ ಸೂಚನೆ, ಎಚ್ಚರಿಕೆ ನೀಡಲು ಲೌಡ್ಸ್ಪೀಕರ್ ವ್ಯವಸ್ಥೆಯನ್ನು ಮಠದ ವತಿಯಿಂದ ಮಾಡಬೇಕು ಎಂದು ತಿಳಿಸಿದರು.
ಪಟ್ಟಣದ ರಸ್ತೆಯು ಇಕ್ಕಟ್ಟಾಗಿರುವದರಿಂದ ಸುಗಮ ಸಂಚಾರಕ್ಕೆ ಅವಕಾಶವನ್ನು ಕಲ್ಪಿಸುವುದಕ್ಕಾಗಿ ಸಿದ್ದತೆ ಮಾಡಲಾಗುವುದು. ಶ್ರೀಮಠದ ವತಿಯಿಂದ ವಾಲಂಟಿಯರ್ಸ್ ಪಟ್ಟಿ ನೀಡಬೇಕು. ಅವರಿಗೆ ಪ್ರತ್ಯೇಕ ಐಡೆಂಟಿಟಿ ಕಾರ್ಡ್ ನೀಡಲಾಗುವುದು. ಅವರೂ ನಮ್ಮ ಜೊತೆಗೆ ಕೆಲಸ ಮಾಡಬೇಕು. ಶ್ರೀಮಠದ ವತಿಯಿಂದ ಮೈಕ್ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಅಧಿಕಾರಿಗಳು ಬಾಡಿ ಕ್ಯಾಮೆರಾ ಸಹಿತ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.
ತಹಸೀಲ್ದಾದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಫಕೀರೇಶ್ವರ ಮಠದಲ್ಲಿ ರಥೋತ್ಸವ ಮತ್ತು ಕಡುಬಿನ ಕಾಳಗದಲ್ಲಿ ಎರಡು ದಿನ ಧರ್ಮಸಭೆ ಜರುಗಲಿದ್ದು, ಜನದಟ್ಟಣೆ ಆಗದಂತೆ ಅಗತ್ಯ ಕ್ರಮ ವಹಿಸಬೇಕು. ಹೆಸ್ಕಾಂ, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ತಂಡಗಳು ಪರಿಸ್ಥಿತಿ ಎದುರಿಸಲು ಸಿದ್ಧವಾಗಿರಬೇಕು. ಮಠದ ಆವರಣ ಸ್ವಚ್ಛತೆ ಬಗ್ಗೆ ಪಟ್ಟಣದ ಪಂಚಾಯಿತಿಯವರು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್ಐ ಈರಪ್ಪ ರಿತ್ತಿ, ಪಪಂ ಮುಖ್ಯಾಧಿಕಾರಿ ಸವಿತಾ ತಾಂಭ್ರೆ, ಪಪಂ ಮಾಜಿ ಅಧ್ಯಕ್ಷ ಹುಮಾಯೂನ ಮಾಗಡಿ, ಚಂದ್ರಕಾಂತ ನೂರಶೆಟ್ಟರ, ಸಿ.ಕೆ. ಮುಳಗುಂದ, ಅಜ್ಜುಗೌಡ್ರ ಪಾಟೀಲ, ಸಂದೀಪ ಕಪ್ಪತ್ತನವರ, ಬಿ.ಎಸ್. ಹಿರೇಮಠ, ಎಂ.ಸಿ. ಹಿರೇಮಠ ಸೇರಿ ಅನೇಕರು ಇದ್ದರು.