ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಶಿವಾಜಿ ವೃತ್ತದಲ್ಲಿ ಕೈಗೊಂಡ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನಗರದ ಕೆಲವು ಮನೆಗಳಲ್ಲಿ ನೀರು ನುಗ್ಗಿ ಹಾನಿಯಾಗಿತ್ತು. ಇದು ಮತ್ತೆ ಪುನರಾವರ್ತನೆ ಆಗಬಾರದೆಂದೇ ಕೋಟೆ ಗೋಡೆ ಕಂದಕ ಹಾಗೂ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಂದಕಗಳಲ್ಲಿ ಮಣ್ಣು ಕುಸಿಯಬಾರೆಂದು ಪಿಚ್ಚಿಂಗ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಇದಕ್ಕೆಂದೇ ₹6 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಬಿಡಿಎ ಹಾಗೂ ಪಾಲಿಕೆಯಿಂದ ಕಾಮಗಾರಿ ಬದಲಾವಣೆ ಮಾಡಿ ಅನುದಾನ ಒದಗಿಸಲಾಗುತ್ತಿದೆ. ಆದಾಗ್ಯೂ ಅಗತ್ಯ ಬಿದ್ದರೆ ನನ್ನ ಮತಕ್ಷೇತ್ರದ ಕೆಲ ಕಾಮಗಾರಿ ಬದಲಾವಣೆ ಮಾಡಿ ಇದಕ್ಕೆ ಅನುದಾನ ಕೊಡಿಸುವುದಾಗಿ ಹೇಳಿದರು. ಇನ್ನೂ ಅನುದಾನದ ಅಗತ್ಯ ಬಿದ್ದರೆ, ಯಾವುದಾದರೂ ಕಂಪನಿ ಸಂಪರ್ಕಿಸಿ, ಆ ಕಂಪನಿಯ ಸಿಎಸ್ಆರ್ ಅನುದಾನವನ್ನು ಕಾಮಗಾರಿಗೆ ಕೊಡಿಸುವುದಾಗಿ ಸಚಿವರು ಹೇಳಿದರು.
ನಗರದಲ್ಲಿ ಅದೆಷ್ಟೇ ಮಳೆಯಾದರೂ ನಗರ ಭಾಗದಲ್ಲಿ ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಂದಕ ಸೇರಿದಂತೆ ಇತರೆ ಸ್ಥಳಗಳಲ್ಲಿ ಶಾಶ್ವತವಾದ ಕಾಮಗಾರಿ ಮಾಡಲಾಗುತ್ತಿದೆ. ನಗರ ಭಾಗದ ರಸ್ತೆಗಳ ಕಾಮಗಾರಿಗೆ ₹150 ಕೋಟಿ ಮಂಜೂರು ಮಾಡಲಾಗಿದೆ. ಈ ಮೊತ್ತದಲ್ಲಿ ರಸ್ತೆಗಳ ಕಾಮಗಾರಿಗಳು ನಡೆಯುತ್ತವೆ ಎಂದ ಅವರು, ನಗರದಲ್ಲಿ ಪ್ರವಾಹ ತಡೆ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಸಚಿವರು ಹೇಳಿದರು.ಶಿವಾಜಿ ವೃತ್ತದಿಂದ ಬಿದರಿ ಆಸ್ಪತ್ರೆವರೆಗೆ 3 ಕಿ.ಮೀ ಕಾಮಗಾರಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ನಗರದ ಹೊರ ಭಾಗದಿಂದ ನೀರು ಒಳಗಡೆ ಬರುವುದನ್ನು ತಪ್ಪಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಸ್ವತಃ ಜಿಲ್ಲಾಧಿಕಾರಿ, ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾಮಗಾರಿ ಉಸ್ತುವಾರಿ ನೋಡುತ್ತಿದ್ದಾರೆ ಎಂದವರು ತಿಳಿಸಿದರು.
ಬಳಿಕ ಮನ್ನತ್ ಹಾಲ್ ಬಳಿ, ನವಭಾಗ ರಸ್ತೆ, ಕಸ್ತೂರಿ ಕಾಲೋನಿಯಲ್ಲಿನ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು.