ವಂಶವೃಕ್ಷ ಪಡೆಯುವಲ್ಲಿ ದಶಕಗಳಷ್ಟು ಹಳೆಯ ಕ್ರಮ ಸರಳೀಕರಣ : ಕಂದಾಯ ಸಚಿವ ಕೃಷ್ಣ ಭೈರೇಗೌಡ

KannadaprabhaNewsNetwork | Updated : Mar 06 2025, 12:11 PM IST

ಸಾರಾಂಶ

ವಂಶವೃಕ್ಷ ಪಡೆಯುವಲ್ಲಿ ದಶಕಗಳಷ್ಟು ಹಳೆಯದಾದ ಮರಣ ಪ್ರಮಾಣಪತ್ರವನ್ನು ಕಂದಾಯ ಇಲಾಖೆ ಸಿಬ್ಬಂದಿ ಕೇಳುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತುರ್ತಾಗಿ - ಖುದ್ದಾಗಿ ಸರಳೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

 ಬಳ್ಳಾರಿ : ವಂಶವೃಕ್ಷ ಪಡೆಯುವಲ್ಲಿ ದಶಕಗಳಷ್ಟು ಹಳೆಯದಾದ ಮರಣ ಪ್ರಮಾಣಪತ್ರವನ್ನು ಕಂದಾಯ ಇಲಾಖೆ ಸಿಬ್ಬಂದಿ ಕೇಳುತ್ತಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತುರ್ತಾಗಿ - ಖುದ್ದಾಗಿ ಸರಳೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಬಳ್ಳಾರಿ-ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ವಂಶವೃಕ್ಷ ಪಡೆಯುವಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ವಿಧಾನಪರಿಷತ್‌ನಲ್ಲಿ ಗಮನ ಸೆಳೆದಾಗ, ಅರ್ಜಿದಾರರಿಂದ ಛಾಪಾ ಕಾಗದದ ಮೇಲೆ ವಂಶವೃಕ್ಷದ ಮಾಹಿತಿ ಪಡೆದು ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಉಪ ತಹಸೀಲ್ದಾರರ ಮೂಲಕ ದೃಢೀಕರಿಸಿ, ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಮೃತರ ಮರಣ ಪ್ರಮಾಣಪತ್ರ ಇಲ್ಲದೇ ಇದ್ದ ಸಂದರ್ಭ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮರಣ ಪ್ರಮಾಣಪತ್ರವನ್ನು ನ್ಯಾಯಾಲಯದಿಂದ ಪಡೆಯಲು ಅಧಿಕಾರಿಗಳು ನಿರ್ದೇಶನ ನೀಡುತ್ತಿದ್ದಾರೆ. ನ್ಯಾಯಾಲಯದಿಂದ ಮರಣ ಪ್ರಮಾಣ ಪತ್ರವನ್ನು ಪಡೆಯುವ ಬದಲು ಹಾಗೂ ನ್ಯಾಯಾಲಯದ ಮೇಲೆ ಒತ್ತಡ ಕಡಿಮೆ ಮಾಡಲು ಸಹಾಯಕ ಆಯುಕ್ತರಿಗೆ ಅಧಿಕಾರ ನೀಡಿ ಸರ್ಕಾರ ನೀಡಿದ್ದ ಆದೇಶಕ್ಕೆ, ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಜಾರಿಯಾಗಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಾದಲ್ಲಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥವಾಗಲಿದೆ ಎಂದರು.

ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಸಲಹೆ ನೀಡಿದಂತೆ ವಂಶವೃಕ್ಷವನ್ನು ನೀಡುವಲ್ಲಿ ನಿಗದಿಯಾಗಿರುವ 7 ದಿನಗಳ ಕಾಲಾವಧಿಯನ್ನು 15 ದಿನಗಳಿಗೆ ಹೆಚ್ಚಿಸಲು ನೀಡಿರುವ ಸಲಹೆ ಸೂಕ್ತವಾದದ್ದು. ಈ ನಿಟ್ಟಿನಲ್ಲಿ ನಾನು, ತಕ್ಷಣವೇ ಈ ವಿಷಯದ ಕುರಿತು ಗಮನ ನೀಡುವೆ. ವಂಶವೃಕ್ಷ ವಿತರಣೆ ಮಾಡುವುದನ್ನು ಸರಳೀಕರಣಗೊಳಿಸಲು ತುರ್ತಾಗಿ ಮತ್ತು ಖುದ್ದಾಗಿ ಗಮನ ನೀಡುವೆ ಎಂದು ಹೇಳಿದರು.

ಮುಷ್ಕರ ನಿರತರ ಸಮಸ್ಯೆ ಪರಿಹಾರಕ್ಕೆ ವಿಶೇಷ ಸಲಹಾ ಸಮಿತಿ ರಚನೆ:

ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ಅಧಿಕಾರಿಗಳು ಎರಡನೇ ಅವಧಿಗೆ ಮುಷ್ಕರ ನಡೆಸಿದ್ದು, ಪ್ರತಿಭಟನಾ ನಿರತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತುರ್ತಾಗಿ ಗಮನ ನೀಡಬೇಕು ಎಂದು ಎಮ್ಮೆಲ್ಸಿ ವೈ.ಎಂ. ಸತೀಶ್ ಸದನದಲ್ಲಿ ಒತ್ತಾಯಿಸಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡ ಉತ್ತರಿಸಿ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ರೆವೆನ್ಯೂ ಇನಸ್ಪೆಕ್ಟರುಗಳು ಎರಡನೇ ಅವಧಿಗೆ ಮುಷ್ಕರ ಸರ್ಕಾರದ ಗಮನ ಸೆಳೆದಿದೆ. ಮುಷ್ಕರ ನಡೆಸಿದ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸಲು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ವಿಶೇಷ ಸಲಹಾ ಸಮಿತಿಯನ್ನು ರಚಿಸಲಾಗಿದೆ. ವಿಶೇಷ ಸಲಹಾ ಸಮಿತಿಯು ಮುಷ್ಕರ ನಿರತರ ಬೇಡಿಕೆ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.

Share this article