ಚಿತ್ರದುರ್ಗದ ಸಮಾಜ ಸೇವಕಿ ಲಲಿತಮ್ಮ ಹಿರೇಮಠ ಅವರಿಗೆ ರಾಜ್ಯಮಟ್ಟದ ಮಾತೋಶ್ರಿ ನೀಲಾಂಬಿಕಾ ಪ್ರಶಸ್ತಿ, ಕುಡತಿನಿಯ ಶಾರದಾ ಹಿರೇಮಠ ಅವರಿಗೆ ಮಾತೋಶ್ರೀ ನೀಲಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹುಟ್ಟೂರು ಹಾನಗಲ್ಲ ತಾಲೂಕಿನ ದೇವರಹೊಸಪೇಟೆಯಲ್ಲಿ ನಡೆಯಿತು.
ಹಾನಗಲ್ಲ: ಚಿತ್ರದುರ್ಗದ ಸಮಾಜ ಸೇವಕಿ ಲಲಿತಮ್ಮ ಹಿರೇಮಠ ಅವರಿಗೆ ರಾಜ್ಯಮಟ್ಟದ ಮಾತೋಶ್ರಿ ನೀಲಾಂಬಿಕಾ ಪ್ರಶಸ್ತಿ, ಕುಡತಿನಿಯ ಶಾರದಾ ಹಿರೇಮಠ ಅವರಿಗೆ ಮಾತೋಶ್ರೀ ನೀಲಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಪಂ. ಪುಟ್ಟರಾಜ ಕವಿ ಗವಾಯಿಗಳವರ ಹುಟ್ಟೂರು ಹಾನಗಲ್ಲ ತಾಲೂಕಿನ ದೇವರಹೊಸಪೇಟೆಯಲ್ಲಿ ನಡೆಯಿತು.
ದೇವರಹೊಸಪೇಟೆಯಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳ ೧೪ನೇ ಪುಣ್ಯಸ್ಮರಣೋತ್ಸವದಲ್ಲಿ ಜ್ಯಾನಜ್ಯೋತಿ ಪಂಡಿತ ಪಟ್ಟರಾಜ ಗವಾಯಿ ಚಾರಿಟೆಬಲ್ ಸಮಗ್ರ ಸೇವಾ ಟ್ರಸ್ಟ್ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮತ್ತು ಸಂಗೀತ ಸಮಾರಾಧನೆ ನಡೆಯಿತು. ಪಂ. ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಸ್ಮರಣೋತ್ಸವ ನಿಮಿತ್ತ ೫ ದಿನ ನಡೆದ ಜೀವನ ದರ್ಶನ ಪ್ರವಚನ ಮಂಗಲಗೊಂಡಿತು.
ಈ ಸಂದರ್ಭದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮಹಾತ್ಮರ ತಾಯಿಯ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಬಹು ವಿಶೇಷ. ಮಹಾತ್ಮರನ್ನು ಈ ಭೂಮಿಗೆ ನೀಡಿ, ಸಮಾಜಮುಖಯಾಗಿ ಬೆಳೆಸಿದ ತಾಯಿಯ ಪರಿಶ್ರಮವನ್ನು ನೆನೆಯುವ ಈ ತಾಯಿ ಹೆಸರಿನ ಪ್ರಶಸ್ತಿಗೆ ಬಹಳಷ್ಟು ಮಹತ್ವವಿದೆ ಎಂದರು.
ಹೋತನಹಳ್ಳಿ ಸಿಂಧಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಕೂಡಲ ಗುರುನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ರಾಜ್ಯಮಟ್ಟದ ಪ್ರಶಸ್ತಿ: ಹಾನಗಲ್ಲ ಲಿಂ. ಕುಮಾರ ಶಿವಯೋಗಿಗಳ ತಾಯಿ ಹೆಸರಿನಲ್ಲಿ ಮಾತೋಶ್ರೀ ನಿಲಾಂಬಿಕೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಚಿತ್ರದುರ್ಗದ ಸಮಾಜ ಸೇವಕಿ ಲಲಿತಮ್ಮ ರುದ್ರಯ್ಯ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು.
ಲಿಂ. ಪಂಚಾಕ್ಷರಿ ಗವಾಯಿಗಳ ತಾಯಿ ಹೆಸರಿನಲ್ಲಿ ಮಾತೋಶ್ರೀ ನೀಲಮ್ಮ ಪ್ರಶಸ್ತಿಯನ್ನು ರಂಗಭೂಮಿ, ಕನ್ನಡ ಚಿತ್ರರಂಗ ಕಲಾವಿದೆ ಕುಡತಿನಿಯ ಶಾರದಾ ಜಗದೀಶ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು.
ಲಿಂ. ಪುಟ್ಟರಾಜ ಗವಾಯಿಗಳ ತಾಯಿ ಹೆಸರಿನಲ್ಲಿ ಮಾತೋಶ್ರೀ ಸಿದ್ಧಮ್ಮನವರ ಪ್ರಶಸ್ತಿಯನ್ನು ರಂಗಭೂಮಿ, ಚಲನಚಿತ್ರ ಕಲಾವಿದೆ ಜಯಶ್ರೀ ರಾಜು ಅವರಿಗೆ ಪ್ರಧಾನ ಮಾಡಲಾಯಿತು.
ಮಾತೋಶ್ರೀ ಸಾವಿತ್ರಮ್ಮ ಚಂದ್ರಶೇಖರಯ್ಯ ವೆಂಕಟಾಪುರಮಠ ಅವರ ಸ್ಮರಣಾರ್ಥ ಪಂ. ಪುಟ್ಟರಾಜ ಗೌರವ ಪುರಸ್ಕಾರ ಪ್ರಶಸ್ತಿಯನ್ನು ಧಾರವಾಡದ ಹಿರಿಯ ಸಂಗೀತ ಕಲಾವಿದ ಸೋಮನಾಥ ಮರಡೂರ ಅವರಿಗೆ ಪ್ರದಾನ ಮಾಡಲಾಯಿತು.
ಪಂ. ಸೋಮನಾಥ ಮರಡೂರ, ಕುಮಾರ ಮರಡೂರ, ಪುಟ್ಟರಾಜ ವೆಂಕಟಾಪುರಮಠ, ವೆಂಕಟೇಶ ಪೂಜಾರ, ಮಹಾಂತೇಶ ಬಾಗಲಕೋಟೆ, ಮಂಜುನಾಥ ಭಜಂತ್ರಿ ಸಂಗೀತ ಸೇವೆ ನಡೆಸಿಕೊಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.