ಕನ್ನಡಪ್ರಭ ವಾರ್ತೆ ಬೇಲೂರು ಯುವಕರಿಗೆ ನಾಯಕತ್ವದ ಜವಾಬ್ದಾರಿ ನೀಡಿರುವುದು ಸಂಘದ ಭವಿಷ್ಯದ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎ ನಾಗರಾಜ್ ಹೇಳಿದರು.ತಾಲೂಕಿನ ಚಿನ್ನೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಯುವ ನಾಯಕರು ಅವಿರೋಧವಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಾತನಾಡಿ ಚಿನ್ನೇನಹಳ್ಳಿ ಗ್ರಾಮದ ಸಿ.ಟಿ. ಮಧು ಅಧ್ಯಕ್ಷರಾಗಿ ಹಾಗೂ ಬಳ್ಳೂರಿನ ಬಿ.ಪಿ. ರಾಜು ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಪ್ರಮುಖ ಹುದ್ದೆಗಳಾದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಲ್ಲಿ ಯುವಕರು ಮುಂದುವರಿಯುತ್ತಿರುವುದು ಸಂಘದ ಪ್ರಗತಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.ನೂತನ ಅಧ್ಯಕ್ಷ ಸಿ.ಟಿ. ಮಧು ಅವರು ಮಾತನಾಡಿ, ರೈತರಿಗೆ ಉತ್ತಮ ಸೇವೆ ನೀಡುವ ಜೊತೆಗೆ ಸಹಕಾರ ಸಂಘವನ್ನು ಮತ್ತಷ್ಟು ಬಲಪಡಿಸಲು ಎಲ್ಲಾ ನಿರ್ದೇಶಕರು ಹಾಗೂ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ. ಸಂಘಕ್ಕೆ ಸಂಬಂಧಿಸಿದ ಜಾಗದ ವಿಚಾರದಲ್ಲಿ ಇನ್ನೂ ಕೆಲವು ಪ್ರಕ್ರಿಯೆಗಳು ಬಾಕಿಯಿದ್ದು, ಉಳಿದ ಶೇ.೨೦ರಷ್ಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಜಾಗವನ್ನು ಸಂಘದ ಹೆಸರಿಗೆ ಮಂಜೂರು ಮಾಡಿಸುವ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದರು. ಜಾಗದ ಸಮಸ್ಯೆ ನಿವಾರಣೆಯಾದ ಬಳಿಕ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡುವ ಗುರಿಯನ್ನು ಆಡಳಿತ ಮಂಡಳಿ ಹೊಂದಿದೆ. ಈ ಸಂಘವನ್ನು ಪುನರುಜ್ಜೀವನಗೊಳಿಸಿ ಅಭಿವೃದ್ಧಿ ಪಥದಲ್ಲಿ ಸಾಗಿಸಲು ಅಂದಿನ ಎಪಿಎಂಸಿ ಸದಸ್ಯ ಹಾಗೂ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಮಹೇಶ್ ಅವರು ಮಹತ್ವದ ಪಾತ್ರವಹಿಸಿದ್ದರು ಎಂದರು.ಮಾಜಿ ಅಧ್ಯಕ್ಷ ಹಾಗೂ ರೈತ ಸಂಘದ ಮುಖಂಡರಾದ ಸ್ವಾಮಿಗೌಡ, ದಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ನಾಗೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಡಿ. ದಿನೇಶ್, ಚಿಕ್ಕಮೇದೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿ.ವಿ.ಮೋಹನ್, ಸಿಎಚ್ ಮಹೇಶ್ ಹಲವು ಗಣ್ಯರು ಭಾಗವಹಿಸಿದ್ದರು.