ಬೀದಿ ನಾಯಿಗಳ ನಿಯಂತ್ರಣ ನಿರ್ಲಕ್ಷ್ಯ: ಸಾರ್ವಜನಿಕರ ಆಕ್ರೋಶ

KannadaprabhaNewsNetwork | Published : Dec 6, 2024 8:59 AM

ಕೊಪ್ಪ, ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ತ್ಯಾಗರಾಜರಸ್ತೆಯ ಲಯನ್ಸ್ ಸೇವಾಮಂದಿರ ರಸ್ತೆ, ಹನುಮಾನ್ ನಗರ ರಸ್ತೆ, ವಿವೇಕಾ ನಂದ ರಸ್ತೆ, ಮೇಲಿನಪೇಟೆಯ ವಿದ್ಯಾನಗರ, ಉದಯನಗರ, ಸೇರಿದಂತೆ ಪ್ರತೀ ಗ್ರಾ.ಪಂ. ವ್ಯಾಪ್ತಿಗಳಲ್ಲೂ ಬೀದಿನಾಯಿ ಕಾಟ ಮಿತಿಮೀರಿದ್ದು ಕೆಲಸಕ್ಕೆ ಹೋಗಿ ಬರುವ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಭಯದ ವಾತಾವರಣದಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನೆ ಶೂನ್ಯವಾಗಿದೆ.

ಬಾಲಕನ ಕಡಿದ ಹುಚ್ಚುನಾಯಿ: ದನ- ಇತರೆ ಬೀದಿನಾಯಿಗಳ ಮೇಲೂ ದಾಳಿ

ಕನ್ನಡಪ್ರಭ ವಾರ್ತೆ, ಕೊಪ್ಪ

ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ತ್ಯಾಗರಾಜರಸ್ತೆಯ ಲಯನ್ಸ್ ಸೇವಾಮಂದಿರ ರಸ್ತೆ, ಹನುಮಾನ್ ನಗರ ರಸ್ತೆ, ವಿವೇಕಾ ನಂದ ರಸ್ತೆ, ಮೇಲಿನಪೇಟೆಯ ವಿದ್ಯಾನಗರ, ಉದಯನಗರ, ಸೇರಿದಂತೆ ಪ್ರತೀ ಗ್ರಾ.ಪಂ. ವ್ಯಾಪ್ತಿಗಳಲ್ಲೂ ಬೀದಿನಾಯಿ ಕಾಟ ಮಿತಿಮೀರಿದ್ದು ಕೆಲಸಕ್ಕೆ ಹೋಗಿ ಬರುವ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು, ವಾಹನ ಸವಾರರು ಭಯದ ವಾತಾವರಣದಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಪಂಚಾಯಿತಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನೆ ಶೂನ್ಯವಾಗಿದೆ.

ಇದೀಗ ಮಿತಿಮೀರಿದ ಬೀದಿ ನಾಯಿ ಕಾಟದೊಂದಿಗೆ ಹುಚ್ಚು ನಾಯಿ ಹಾವಳಿ ಆರಂಭವಾಗಿದೆ. ಮಂಗಳವಾರ ಶಾಲೆಗೆ ರಜೆ ಇದ್ದ ಕಾರಣ ಕೆಳಗಿನಪೇಟೆಯಲ್ಲಿ ಆಟವಾಡುತ್ತಿದ್ದ ಶಾಲಾ ಬಾಲಕನಿಗೆ ನಾಯಿ ಕಡಿದು ಚಿಕಿತ್ಸೆ ನೀಡಲಾಗಿದೆ. ಕೂಲಿ ಕಾರ್ಮಿಕ ಮಹೇಶ್ ಎಂಬುವವರ ಮೇಲೆ ಹುಚ್ಚುನಾಯಿ ದಾಳಿ ಮಾಡಿದೆ. ಬುಧವಾರ ಮಧ್ಯಾಹ್ನ ವೇಳೆ ಕೊಪ್ಪ ಸಾರ್ವಜನಿಕ ಬಸ್ ನಿಲ್ದಾಣದ ಸಮೀಪವೇ ದನ ಹಾಗೂ ಇತರೆ ಬೀದಿನಾಯಿಗಳ ಮೇಲೆ ಹುಚ್ಚುನಾಯಿ ದಾಳಿ ನಡೆಸಿದೆ. ಜುಲೈ ತಿಂಗಳಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಸುವಂತೆ ಕನ್ನಡಪ್ರಭ ಪತ್ರಿಕೆ ಸಚಿತ್ರ ವರದಿ ಮಾಡಿತ್ತು. ಅನೇಕ ಸಂಘಸಂಸ್ಥೆಗಳು ಹಾಗೂ ಬಿಜೆಪಿ ನಗರ ಘಟಕ ಪ.ಪಂ.ಗೆ ಬೀದಿನಾಯಿಗಳ ಹಾವಳಿ ನಿಯಂತ್ರಿಸುವಂತೆ ಮನವಿ ಮಾಡಿತ್ತು. ಇಷ್ಟಾದರೂ ಸಂಬಂಧಿಸಿದವರು ಬೀದಿನಾಯಿ ನಿಯಂತ್ರಣಕ್ಕೆ ನಿರ್ಲಕ್ಷ್ಯ ವಹಿಸಿರುವ ಕಾರಣ ಬೀದಿನಾಯಿಗಳು ಹುಚ್ಚು ಹಿಡಿದಿದ್ದು ಜನ ಜಾನುವಾರುಗಳ ಮೇಲೆ ಆಕ್ರಮಣ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಗ್ರಾ.ಪಂ, ಪ.ಪಂ. ಪಶುವೈದ್ಯ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬೀದಿ ನಾಯಿ ಮತ್ತು ಹುಚ್ಚು ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮವಹಿಸಬೇಕು ಎಂದು ಸಾರ್ವಜನಿಕರು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.