ರೈತರ ಜಮೀನಿನಿಂದ ಕಬ್ಬು ಕಟಾವು ಮಾಡಿ ಕಂಪನಿಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ರಮವಾಗಿ ರೈತರ ಕಬ್ಬನ್ನು ಕದ್ದು ಮಾರಾಟ ಮಾಡುತ್ತಿದ್ದವರನ್ನು ರೈತರೇ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಅಮೃತೂರು ಹೋಬಳಿ ಸಣಬದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಣಿಗಲ್
ರೈತರ ಜಮೀನಿನಿಂದ ಕಬ್ಬು ಕಟಾವು ಮಾಡಿ ಕಂಪನಿಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ರಮವಾಗಿ ರೈತರ ಕಬ್ಬನ್ನು ಕದ್ದು ಮಾರಾಟ ಮಾಡುತ್ತಿದ್ದವರನ್ನು ರೈತರೇ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಅಮೃತೂರು ಹೋಬಳಿ ಸಣಬದಲ್ಲಿ ನಡೆದಿದೆ. ಎಡೆಯೂರು ಹೋಬಳಿಯ ತಿಪ್ಪೂರು ಗ್ರಾಮದ ನವೀನ ಎಂಬುವವರ ಜಮೀನಿನಲ್ಲಿ ಮಹಾರಾಷ್ಟ್ರ ಮೂಲದ ಕೂಲಿ ಕಾರ್ಮಿಕರು ಕಬ್ಬು ಕತ್ತರಿಸಿ ಮಂಡ್ಯ ಜಿಲ್ಲೆ ಕೊಪ್ಪ ಬಳಿ ಇರುವ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಸಾಗಿಸುತ್ತಿದ್ದರು. ಮಾರ್ಗ ಮಧ್ಯೆ ಹಲವಾರು ಕಬ್ಬಿನ ಹಾಲು ಅಂಗಡಿಗಳಿಗೆ ಟ್ರ್ಯಾಕ್ಟರ್ ನಲ್ಲಿದ್ದ ಕಬ್ಬುಗಳನ್ನುಮಾರಾಟ ಮಾಡಿದ್ದರು. ನಿರಂತರವಾಗಿ ಈ ರೀತಿಯ ಕಳ್ಳತನ ನಡೆಯುತ್ತಿದ್ದು ಸಣಬ ಗ್ರಾಮದ ಬಳಿ ಕಬ್ಬು ಮಾರಾಟ ಮಾಡುವ ಸಂದರ್ಭದಲ್ಲಿ ಕೆಲವು ರೈತರು ಪರಿಶೀಲಿಸಿದಾಗ ಕಳ್ಳತನ ಬಯಲಾಗಿದೆ. ಸ್ಥಳದಲ್ಲಿದ್ದ ಟ್ರ್ಯಾಕ್ಟರ್ ಹಾಗೂ ಸಿಬ್ಬಂದಿಯನ್ನು ಗ್ರಾಮಸ್ಥರು ಕೂಡಿಹಾಕಿ ನಂತರ ಕಂಪನಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಸಂಬಂಧಿಸಿದವರು ಯಾರು ಸಹ ಬರದೆ ಇರುವುದಿರಂದ ರೈತರ ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಬಂದ ಸಂಬಂಧಪಟ್ಟ ಅಧಿಕಾರಿಗಳು ರೈತರ ಜೊತೆ ಮಾತುಕತೆ ನಡೆಸಿ ಸಂತ್ರಸ್ತ ರೈತ ನವೀನ್ ಗೆ 40,000ಗಳನ್ನು ಪರಿಹಾರ ಆಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರೈತ ರಾಮಚಂದ್ರಪ್ಪ ಹಲವಾರು ದಿನಗಳಿಂದ ರೈತರು ತಮ್ಮ ಹೊಲದಲ್ಲಿ ಬೆಳೆದಿರುವ ಕಬ್ಬನ್ನು ಕಂಪನಿಗೆ ಕೊಟ್ಟಿದ್ದಾರೆ. ಆದರೆ ಮೊದ ಮೊದಲು ಉತ್ತಮವಾದ ಪಾವತಿ ಮಾಡುತ್ತಿದ್ದ ಕಂಪನಿ ಈಗ ತಿಂಗಳು ಕಳೆದರೂ ಕೂಡ ಹಣ ನೀಡುವಲ್ಲಿ ಉದಾಸೀನತೆ ವಹಿಸುತ್ತಿದೆ. ಸರ್ಕಾರ ಈ ಬಗ್ಗೆ ಮಧ್ಯೆ ಪ್ರವೇಶ ಮಾಡಿ ರೈತರ ಹಣವನ್ನು ವಾಪಸ್ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.