ಸುದ್ದಿಗೋಷ್ಠಿಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವೈದ್ಯಕೀಯ ಕ್ಷೇತ್ರದಲ್ಲಿ ನಗರದ ಪ್ರತಿಷ್ಟಿತ ಸರ್ಜಿ ಆಸ್ಪತ್ರೆಗಳ ಸಮೂಹವು ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಶಿವಮೊಗ್ಗ ಹಾಗೂ ಮಲೆನಾಡು ಭಾಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸೌಲಭ್ಯಗಳೊಂದಿಗೆ ನರವೈಜ್ಞಾನಿಕ ಇರ್ವೆನ್ಸನ್ಸ್ ಚಿಕಿತ್ಸಾ ಸೇವೆಯನ್ನು ಸಾರ್ವಜನಿಕರಿಗೆ ನೀಡಲು ಮುಂದಾಗಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು.
ಗುರುವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು, ಹುಬ್ಬಳ್ಳಿ. ಬೆಳಗಾಂ ಸೇರಿದಂತೆ ರಾಜ್ಯದ ಐದಾರು ಜಿಲ್ಲೆಗಳಲ್ಲಿ ಈ ಚಿಕಿತ್ಸಾ ಸೌಲಭ್ಯವಿದ್ದು, ಇದೀಗ ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಆರಂಭಿಸಿದೆ ಎಂದರು.
ಮೆದುಳು ಮತ್ತು ಬೆನ್ನು ಹುರಿಯ ಹಲವಾರು ರೋಗಗಳಿಗೆ ಯಾವುದೇ ತೆರೆದ ಶಸ್ತ್ರಚಿಕಿತ್ಸೆ ಇಲ್ಲದೆಯೇ, ರಕ್ತ ನಾಳದ ಮೂಲಕ ಆಂಜಿಯೋಗ್ರಾಮ್ ಮಾದರಿಯಲ್ಲಿ ಆಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಹೃದಯಾಘಾತ ಅಥವಾ ಹೃದಯದ ರಕ್ತ ನಾಳದ ತೊಂದರೆ ಆದಾಗ ಹೇಗೆ ಸರ್ಜರಿ ಇಲ್ಲದೇ ಅಂಜಿಯೋಪ್ಲಾಸ್ಸಿ , ಸೈಂಟಿಂಗ್ ಮಾಡಲಾಗುವುದೋ ಅದೇ ರೀತಿಯಲ್ಲಿ ಮೆದುಳಿನಲ್ಲೂ ಮೆದುಳಿನ ರಕ್ತನಾಳಗಳ ಚಿಕಿತ್ಸೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೆದುಳು ಅಥವಾ ಬೆನ್ನುಹುರಿಯಲ್ಲಿನ ಸಣ್ಣ ಸಮಸ್ಯೆಗಳು ಮತ್ತು ಕಷ್ಟಕರ ಸ್ಥಳಗಳನ್ನು ಸಹ ಈ ವಿಧಾನ ದಿಂದ ಸುಲಭವಾಗಿ ತಲುಪಬಹುದು ಮತ್ತು ಚಿಕಿತ್ಸೆ ನೀಡಬಹುದು. ಅಲ್ಲದೇ ಮಕ್ಕಳು, ವಯೋವೃದ್ಧರು, ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರು, ಅರಿವಳಿಕೆ, ಅನಸ್ಥೇಷಿಯಾಗೆ ಹಾಗೂ ಸರ್ಜರಿಗೆ ಯೋಗ್ಯವಲ್ಲದವರಲ್ಲೂ ಈ ಚಿಕಿತ್ಸೆ ಮಾಡಬಹುದು ಎಂದು ಹೇಳಿದರು.
ಮೆದುಳಿನ ರಕ್ತನಾಳಗಳಲ್ಲಿ ರಕ್ತನಾಳ ಒಡೆದು ಮೆದುಳಿನ ರಕ್ತ ಸ್ರಾವವಾಗುವುದು, ರಕ್ತನಾಳಗಳಲ್ಲಿ ತಡೆ ಉಂಟಾಗಿ ಮೆದುಳಿನ ರಕ್ತ ಸಂಚಾರ ಕಡಿತವಾಗುವುದು, ಮೆದುಳಿನ ರಕ್ತಸ್ರಾವ ಮೆದುಳಿನ ಗುಳ್ಳೆಗಳು ಮತ್ತು ರಕ್ತ ಗೊಂಚಲುಗಳು ಗುಣಪಡಿಸಬಹುದಾದ ಮೆದುಳಿನ ರಕ್ತಸ್ರಾವದ ಪ್ರಮುಖ ಕಾರಣಗಳಾಗಿವೆ.
ನ್ಯೂರೋ ಸರ್ಜನ್ ಡಾ.ಹರೀಶ್ ಮಾತನಾಡಿ, ಮೆದುಳಿನಲ್ಲಿ ರಕ್ತ ಸ್ರಾವ ಅಥವಾ ರಕ್ತ ಸಂಚಾರ ಕಡಿತವಾಗಿ ಸ್ಟ್ರೋಕ್ /ಪಾರ್ಶ್ವವಾಯು ಉಂಟಾದಾಗ ಎಂಆರ್ಐ, ಸಿಟಿ ಸ್ಕ್ಯಾನಿಂಗ್ ಅಥವಾ ಆಂಜಿಯೋ ಗ್ರಾಮ್ ಮಾಡಿ ರಕ್ತನಾಳಗಳಲ್ಲಿನ ದೋಷವನ್ನು ಪತ್ತೆ ಮಾಡಲಾಗುತ್ತದೆ ಎಂದರು.
ರಕ್ತನಾಳದಲ್ಲಿ ದೋಷಕಂಡು ಬಂದಲ್ಲಿ ಸಾಮಾನ್ಯವಾಗಿ ಮೆದುಳಿನ ಸರ್ಜರಿ ಮಾಡಬೇಕಾಗುತ್ತದೆ. ಇಂತಹ ತೊಂದರೆಗಳನ್ನು ಸರ್ಜರಿ ಇಲ್ಲದೇ ಆಂಜಿಯೋಪ್ಲಾಸ್ಟಿ ಅಥವಾ ಕಾಯ್ಲಿನ್ಸ್ ಮಾಡಿ ಗುಣಪಡಿಸಬಹುದಾಗಿದೆ. ಈ ಚಿಕಿತ್ಸಾ ವಿಧಾನವು ಸರ್ಜರಿಗೆ ಹೋಲಿಸಿದರೆ ಬಹಳ ಸುರಕ್ಷಿತ ಹಾಗೂ ಇದರಿಂದ ರೋಗಿಯು ಬೇಗ ಗುಣಮುಖರಾಗುತ್ತಾರೆ ಎಂದು ಹೇಳಿದರು.ಮೆದುಳಿಗೆ ಸರಬರಾಜು ಮಾಡುವ ರಕ್ತನಾಳದ ಮುಚ್ಚುವಿಕೆಯಿಂದ ಪಾರ್ಶ್ವವಾಯು ಉಂಟಾಗುತ್ತದೆ. ದೊಡ್ಡ ನಾಳದ ಮುಚ್ಚುವಿಕೆಯ ಸಂದರ್ಭದಲ್ಲಿ, ರೋಗಿಯು ಚಿಕಿತ್ಸೆಯಿಲ್ಲದೆ ಸಾವು ಅಥವಾ ಕೋಮಾಗೆ ಕಾರಣವಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ವಾದಿರಾಜ ಕುಲಕರ್ಣಿ, ಆಸ್ಪತ್ರೆಯ ನ್ಯೂರೋಲಜಿಸ್ಟ್ ಡಾ.ಪ್ರಶಾಂತ್, ಆಡಳಿತಾಧಿಕಾರಿ ಕೆ.ಆರ್. ಪುರುಷೋತ್ತಮ್ ಉಪಸ್ಥಿತರಿದ್ದರು.
ಸರ್ಜಿ ಆಸ್ಪತ್ರೆಯಲ್ಲಿ ಡಿಎಸ್ಎ(ಡಿಜಿಟಲ್ ಸಬ್ಲ್ಯಾಕ್ಷನ್ ಆಂಜಿಯೋಗ್ರಫಿ)-ಸೆರೆಬ್ರಲ್, ಸ್ಟೈನಲ್, ಮೆಕ್ಯಾನಿಕಲ್ ಗ್ರಂಬೋಕ್ಷಮಿ, ಮೆದುಳಿನ ಗುಳ್ಳೆ ಚಿಕಿತ್ಸೆ-ಎ.ಸಿಂಪಲ್ ಕಾಯಿಲಿಂಗ್, ಬಿ.ಬಲೂನ್ ಅಥವಾ ಸ್ಟೆಂಟ್ ನೆರವಿನ ಕಾಯಿಲಿಂಗ್, ಸಿ.ಫ್ಲೋ ಡೈರಟರ್, ಎಸ್ಟೋಲೈಸೇಶನ್, ಮೆದುಳಿನ ಆಂಜಿಯೋಪ್ಲಾಸ್ಟಿ ಮತ್ತು ಸೈಂಟಿಂಗ್ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳ ಬಹುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.