ಪುರಸಭೆ ವಿಶೇಷ ಸಾಮಾನ್ಯ ಸಭೆ । ಜೂನ್ 2ನೇ ವಾರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ಪುರಸಭೆಯ ನೂತನ ವಾಣಿಜ್ಯ ಸಂಕೀರ್ಣ ಜೂನ್ ಎರಡನೇ ವಾರದಲ್ಲಿ ಲೋಕಾರ್ಪಣೆಗೊಳಲಿದೆ ಎಂದು ಪುರಸಭೆ ಮುಖ್ಯ ಅಧಿಕಾರಿ ಟಿ.ಜೆ. ಗಿರೀಶ್ ತಿಳಿಸಿದ್ದಾರೆ.ಅವರು ಕುಶಾಲನಗರ ಪುರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಹುತೇಕ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಕಚೇರಿಯ ಆಂತರಿಕ ಕೊಠಡಿಗಳ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.ಹೆಚ್ಚುವರಿಯಾಗಿ ಈಗಾಗಲೇ ಒಂದು ಕೋಟಿ ಎಪ್ಪತ್ತೆರಡು ಲಕ್ಷ ರು. ವೆಚ್ಚ ಮಾಡಲಾಗಿದೆ. ಇದರೊಂದಿಗೆ ಕುಶಾಲನಗರ ಮಡಿಕೇರಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಪಟ್ಟಣ ವ್ಯಾಪ್ತಿಯ 2.36 ಕಿ.ಮೀ. ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಈಗಾಗಲೇ 5.37 ಕೋಟಿ ರು. ಅನುದಾನ ಸರ್ಕಾರದಿಂದ ಬಿಡುಗಡೆಗೊಂಡಿದೆ ಎಂದು ಹೇಳಿದರು.
ಕ್ಷೇತ್ರ ಶಾಸಕರ ಮೂಲಕ ಈ ಕ್ರಿಯಾಯೋಜನೆ ನಡೆದಿದ್ದು, ಮುಖ್ಯ ರಸ್ತೆಯ ಕುಶಾಲನಗರ ಸೇತುವೆ ಗಡಿ ಭಾಗದಿಂದ ಪಟ್ಟಣದ ತಾವರೆಕೆರೆ ತನಕ ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೊಳಿಸುವ ಯೋಜನೆ ಕೈಗೊಳ್ಳಲಾಗುವುದು. ಇದರೊಂದಿಗೆ ರಥ ಬೀದಿಯ ರಸ್ತೆಯನ್ನು ಕೂಡ ಆಧುನಿಕರಣ ಮಾಡುವ ಯೋಜನೆ ಇರುವುದಾಗಿ ಮಾಹಿತಿ ನೀಡಿದರು.ಪ್ರವಾಸಿ ಮಂದಿರಕ್ಕೆ ತೆರಳುವ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾರ್ಯ ಕೂಡ ನಡೆಯಲಿದೆ. ಮಳೆಗಾಲದ ಅವಧಿಯಲ್ಲಿ ಪ್ರವಾಹದಿಂದ ಯಾವುದೇ ರೀತಿಯ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಅಗತ್ಯ ಸಾಮಗ್ರಿಗಳು ಹಾಗೂ ಕಾಳಜಿ ಕೇಂದ್ರಗಳ ವ್ಯವಸ್ಥೆ ಬಗ್ಗೆ ಮುಖ್ಯ ಅಧಿಕಾರಿ ಗಿರೀಶ್ ತಿಳಿಸಿದರು.
ಆದ್ಯತೆ ಮೇಲೆ ವಾರ್ಡುವಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಒಳಚರಂಡಿ ಯೋಜನೆ ಅಪೂರ್ಣಗೊಂಡಿದ್ದು, ಇದರಿಂದ ಬಡಾವಣೆಗಳಿಗೆ ಸಮಸ್ಯೆ ಉಂಟಾಗುತ್ತಿದೆ. ತಕ್ಷಣ ಯೋಜನೆ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಸದಸ್ಯರು ಆಗ್ರಹಿಸಿದರು.ಕಚೇರಿಯಲ್ಲಿ ಎಂಜಿನಿಯರ್ ಅಲಭ್ಯದ ಬಗ್ಗೆ ಸದಸ್ಯರು ತಮ್ಮ ಅಸಹನೆ ವ್ಯಕ್ತಪಡಿಸಿದರು.
ಎಂಜಿನಿಯರ್ ವರ್ಗಾವಣೆಗೊಂಡ ನಂತರ ನೂತನ ಅಧಿಕಾರಿ ನಿಯೋಜನೆ ಆಗದೆ ಕುಶಾಲನಗರ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ಗೆ ಹೆಚ್ಚುವರಿ ಅಧಿಕಾರ ನೀಡಲಾಗಿದೆ ಎಂದು ಮುಖ್ಯ ಅಧಿಕಾರಿಗಳು ಸದಸ್ಯರಿಗೆ ಮಾಹಿತಿ ಒದಗಿಸಿದರು.ಈ ಸಂದರ್ಭ ಸಭೆಗೆ ತಡವಾಗಿ ಆಗಮಿಸಿದ ಲೋಕೋಪಯೋಗಿ ಸಹಾಯಕ ಅಭಿಯಂತರ ಅರ್ಬಾಸ್, ತಾನು ತನ್ನ ಕಚೇರಿಯಲ್ಲಿ ಮಂಗಳವಾರ ಮತ್ತು ಶುಕ್ರವಾರ ಮಧ್ಯಾಹ್ನ ಮಾತ್ರ ಸಾರ್ವಜನಿಕರಿಗೆ ಲಭ್ಯವಾಗುವುದಾಗಿ ಮಾಹಿತಿ ನೀಡಿದರು.ಇದೇ ಸಂದರ್ಭ ಪುರಸಭೆ ವತಿಯಿಂದ ವಿವಿಧ ವಸತಿ ಯೋಜನೆ ಅಡಿ ಪಕ್ಕಾ ಮನೆ ನಿರ್ಮಿಸಲು ನೀಡುವ ಸಹಾಯಧನವನ್ನು ಫಲಾನುಭವಿಗಳಿಗೆ ನೀಡುವ ಬಗ್ಗೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾದ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ ಬಿ ಸುರೇಶ್, ಮುಖ್ಯ ಅಧಿಕಾರಿ ಟಿ ಜೆ ಗಿರೀಶ್ ಆರೋಗ್ಯ ಅಧಿಕಾರಿ ಉದಯಕುಮಾರ್, ಕಂದಾಯ ಅಧಿಕಾರಿ ರಾಮು, ಪುರಸಭೆ ಸದಸ್ಯರಾದ ಪ್ರಮೋದ್ ಮುತ್ತಪ್ಪ ಡಿ ಕೆ ತಿಮ್ಮಪ್ಪ ಜಯವರ್ಧನ್, ಆನಂದ್ ಕುಮಾರ್ ಅಮೃತರಾಜ್ ಜಗದೀಶ್, ಕಲೀಮುಲ್ಲಾ, ಹರೀಶ್, ನವೀನ್, ಪ್ರಕಾಶ್, ಜಗದೀಶ್,ಸುರಯ್ಯ ಬಾನು ಪದ್ಮಾ,ಜಯಲಕ್ಷ್ಮಮ್ಮ ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ಇದ್ದರು.