ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ ಮತ್ತು ಕೈಲಾಂಚ ಹೋಬಳಿ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಉದ್ದೇಶದಿಂದ ಮಂಚನಬೆಲೆ ಜಲಾಶಯದ ಎಡ-ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಿಸಲು ರಾಜ್ಯ ಸರ್ಕಾರ 70 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ತಲಾ 32 ಕಿ.ಮೀ ಉದ್ದದಷ್ಟು ಮಂಚನಬೆಲೆಯ ಎಡ-ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ವಿನೂತನವಾಗಿರಲಿದೆ. ಗುರುತ್ವಾಕರ್ಷಣೆ ಮೂಲಕ ನಾಲೆಯ ಕೊನೆ ಭಾಗಕ್ಕೂ ನೀರು ಹರಿಯುವಂತೆ ಮಾಡಲಾಗುವುದು. ಇದರಿಂದ ಕಸಬಾ ಮತ್ತು ಕೈಲಾಂಚ ಹೋಬಳಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಸಬಾ ಮತ್ತು ಕೈಲಾಂಚ ಹೋಬಳಿಗಳಲ್ಲಿ ನೀರಾವರಿ ಯೋಜನೆಗಳಿಗೆ 45 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ. ಈಗಾಗಲೇ ಮೊಟ್ಟೆ ದೊಡ್ಡಿಯಲ್ಲಿ ಏತ ನೀರಾವರಿ ಯೋಜನೆಗೆ ಮರು ಜೀವ ನೀಡಿದ್ದೇವೆ. 25 ವರ್ಷಗಳ ಹಿಂದೆ ಸ್ಥಗತಿಗೊಂಡಿದ್ದ ಈ ನೀರಾವರಿ ಯೋಜನೆಗೆ ಚಾಲನೆ ನೀಡಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.250 ಕೋಟಿ ಬಿಡುಗಡೆಯ ಭರವಸೆ:
ಕಾಡಾನೆಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಆರಂಭಗೊಂಡು ಕಬ್ಬಾಳು, ಮುತ್ತತ್ತಿ, ಹಲಗೂರು ಅರಣ್ಯ ಪ್ರದೇಶದವರೆಗೆ 80 ಕೋಟಿ ವೆಚ್ಚದಲ್ಲಿ ಬ್ಯಾರಿಕೇಟ್ ನಿರ್ಮಿಸುವ ಕಾರ್ಯ ನಡೆದಿದೆ. ಮರಳವಾಡಿಯಲ್ಲಿಯೇ 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರೈಲ್ವೆಬ್ಯಾರಿಕೇಟ್ ಉದ್ಘಾಟನೆ ಮಾಡಿದ್ದೇನೆ. ಇನ್ನೂ 250 ಕೋಟಿ ರುಪಾಯಿ ಅನುದಾನ ಕೊಡುವುದಾಗಿ ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.
ಬೇಸಿಗೆ ಅಧಿಕವಾಗಿರುವ ಕಾರಣ ಎಲ್ಲೆಡೆ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಜನ ಜಾನುವಾರುಗಳಿಗೆ ನೀರಿನ ಅವಶ್ಯಕತೆ ಇರುವ ಕಾರಣ ಕೆರೆಕಟ್ಟೆಗಳನ್ನು ತುಂಬಿಸುವಂತೆ ಗ್ರಾಮೀಣ ಜನರು ಮನವಿ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಟಾಸ್ಕ್ ಫೋರ್ಸ್ ನಲ್ಲಿ 70 ಲಕ್ಷ ರುಪಾಯಿ ಮೀಸಲಿರಿಸಲು ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುತ್ತಿದ್ದೇವೆ. ಶಾಸಕರ ಅನುದಾನದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಬೋರ್ ವೆಲ್ ಕೊರೆಸಲು ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಬಾಕ್ಸ್ .............
ರಾಮನಗರ ಕ್ಷೇತ್ರದ ಬಡ ಜನರು 5100 ರುಪಾಯಿ ಕಟ್ಟಿ 15 ವರ್ಷಗಳಾಗಿದ್ದು, ಇಲ್ಲಿವರೆಗೆ ಸೂರು ಮತ್ತು ನೆಲೆ ಕಲ್ಪಿಸುವ ಕೆಲಸ ಆಗಿಲ್ಲ. ಅವರಿಗೆಲ್ಲ ನಿವೇಶನ ಕಲ್ಪಿಸಲು 300 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಆರು ತಿಂಗಳಲ್ಲಿ ನಿವೇಶನ ಕಲ್ಪಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಈಗಾಗಲೇ ಬಸವನಪುರ - 25 ಎಕರೆ, ಶಿಡ್ಲಕಲ್ಲು - 50 ಎಕರೆ, ಸುಗ್ಗನಹಳ್ಳಿ - 50 ಎಕರೆ ಸರ್ಕಾರಿ ಭೂಮಿ ಗುರುತಿಸಿದ್ದೇವೆ. ಅವುಗಳನ್ನು ಬಡಾವಣೆ ಮತ್ತು ನಿವೇಶನಗಳನ್ನಾಗಿ ವಿಂಗಡಿಸಲು ಅಧಿಕಾರಿಗಳು 86 ಕೋಟಿ ರುಪಾಯಿಯ ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ನಿರ್ಮಿತಿ ಕೇಂದ್ರದ ಮೂಲಕ ವಸತಿ ಇಲಾಖೆಗೆ ಸಲ್ಲಿಸಿದ್ದೇವೆ.
ನಿವೇಶನ ಕೋರಿ ಸಾವಿರಾರು ಅರ್ಜಿಗಳು ಬಂದಿವೆ. ವಾರ್ಡ್ ಸಮಿತಿ ರಚಿಸಿ ಅರ್ಹ ಫಲಾನುಭವಿಗಳನ್ನು ನಿವೇಶನಕ್ಕಾಗಿ ಆಯ್ಕೆ ಮಾಡುತ್ತೇವೆ. ಅಲ್ಲದೆ, ಸ್ಲಂ ಬೋರ್ಡಿನಿಂದಲೂ 800 ಮನೆಗಳಿಗೆ ಅನುಮೋದನೆ ದೊರಕಿದ್ದು, ಜಿ ಪ್ಲಸ್ 2 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ಚಿಕ್ಕಮಣ್ಣುಗುಡ್ಡೆಯಲ್ಲಿರುವ 250 ಮನೆಗಳ ದುರಸ್ತಿಗೂ 3 ಕೋಟಿ ಹಣ ಬಿಡುಗಡೆಯಾಗಿದ್ದು, ಅದೆಲ್ಲವನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
4ಕೆಆರ್ ಎಂಎನ್ 1.ಜೆಪಿಜಿಕುಂಬಾಪುರ ಕಾಲೋನಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಗುಲಾಬಿ ಹೂ ಎರಚುವ ಮೂಲಕ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.