ಮಂಡ್ಯ ನಗರದ ರಸ್ತೆಗಳಿಗೆ ಹೊಸ ರೂಪ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Apr 06, 2025, 01:51 AM IST
೪ಕೆಎಂಎನ್‌ಡಿ-೩ಮಂಡ್ಯದ ಹೊಸಹಳ್ಳಿ ಸರ್ಕಲ್‌ನಿಂದ ಶ್ರೀ ಬಿಸಿಲುಮಾರಮ್ಮ ದೇವಸ್ಥಾನದವರೆಗಿನ ರಸ್ತೆ ಅಭಿವೃದ್ಧಿಗೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಮಂಡ್ಯ ನಗರದ ಜನರ ಬಹು ಆದ್ಯತೆಯ ರೈಲ್ವೆ ಕೆಳಸೇತುವೆ ರಸ್ತೆ ೩೮ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತದವರೆಗೆ ಡೆಲ್ಟಾ- ನಗರಸಭೆ ಸಹಯೋಗದೊಂದಿಗೆ ರಸ್ತೆಯನ್ನು ಗುಣಾತ್ಮಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿ ಅನುದಾನದಲ್ಲಿ ಬಿಡುಗಡೆಯಾಗಿರುವ ೯ ಕೋಟಿ ರು. ಅನುದಾನದಲ್ಲಿ ನಗರದ ರಸ್ತೆಗಳಿಗೆ ಹೊಸ ರೂಪ ನೀಡಲಾಗುವುದು ಎಂದು ಶಾಸಕ ಪಿ.ರವಿಕುಮಾರ್ ತಿಳಿಸಿದರು.

ನಗರದ ಹೊಸಹಳ್ಳಿ ಗುರುಮಠದ ಬಳಿ ನಡೆದ ಹೊಸಹಳ್ಳಿ ವೃತ್ತದಿಂದ ಹೊಸಹಳ್ಳಿಯ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮೊದಲ ಹಂತದ ೪.೫೦ ಕೋಟಿ ರು. ಪ್ಯಾಕೇಜ್‌ನಲ್ಲಿ ನಗರದ ೧೫ ರಿಂದ ೨೦ ವಾರ್ಡ್‌ಗಳಿಗೆ ತಲಾ ೨೦ ಲಕ್ಷ ರು. ನೀಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ನಗರದ ಜನರ ಬಹು ಆದ್ಯತೆಯ ರೈಲ್ವೆ ಕೆಳಸೇತುವೆ ರಸ್ತೆ ೩೮ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತದವರೆಗೆ ಡೆಲ್ಟಾ- ನಗರಸಭೆ ಸಹಯೋಗದೊಂದಿಗೆ ರಸ್ತೆಯನ್ನು ಗುಣಾತ್ಮಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಿಂದ ಶ್ರೀ ಚಾಮುಂಡೇಶ್ವರಿ ದೇವಾಲಯದವರೆಗೆ ೩ ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಅಲ್ಲಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗಿನ ೯೦೦ ಮೀಟರ್ ರಸ್ತೆಯನ್ನು ಉತ್ಕೃಷ್ಟ ದರ್ಜೆಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇಂತಹ ರಸ್ತೆಯನ್ನು ಕೇವಲ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಆದರೆ, ನಾವು ಜಿಲ್ಲಾ ಮಟ್ಟದಲ್ಲೂ ಮಾಡಬೇಕೆಂಬ ಹಠಕ್ಕೆ ಬಿದ್ದು ಅನುದಾನ ತಂದು ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

೨ ಮತ್ತು ೩ನೇ ವಾರ್ಡಿನಲ್ಲಿ ಮಳೆ ಬಂದ ವೇಳೆ ನಾಲೆಯಿಂದ ನೀರು ಬರುತ್ತಿದ್ದು, ಅದನ್ನು ಶಾಶ್ವತವಾಗಿ ತಡೆಯುವ ನಿಟ್ಟಿನಲ್ಲಿ ೫ ಕೋಟಿ ರು. ವೆಚ್ಚದಲ್ಲಿ ಕ್ರಮ ವಹಿಸಲಾಗಿದೆ. ೧ನೇ ವಾರ್ಡಿನಲ್ಲಿ ಕಾವೇರಿ ನೀರು ಹರಿಯುತ್ತಿದ್ದು, ೫ ಕೋಟಿ ರು. ವೆಚ್ಚದಲ್ಲಿ ಇದಕ್ಕೂ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದರು

ಮುಖ್ಯಮಂತ್ರಿಗಳ ಅನುದಾನ, ಸಿಎನ್‌ಎನ್ ಹಾಗೂ ಕಾವೇರಿ ನೀರಾವರಿ ನಿಗಮದ ಅನುದಾನದಿಂದ ಕೋಣನಹಳ್ಳಿ ಕೆರೆ ಅಭಿವೃದ್ಧಿಪಡಿಸಿ ವಾಕಿಂಗ್ ಪಾತ್ ಮಾಡಿ ಪ್ರವಾಸಿ ತಾಣವಾಗಿ ಮಾಡಲಾಗುವುದು. ಕಲ್ಲಹಳ್ಳಿಯ ಸ್ಮಶಾನವನ್ನು ೬ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ೬ ತಿಂಗಳಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದು ಭರವಸೆ ನೀಡಿದರು.

ನಗರಸಭಾಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿ, ಶಾಸಕರು ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಸಂಸದರೂ ಸಹ ಏಪ್ರಿಲ್ ಮೊದಲ ವಾರದಲ್ಲಿ ೬೬ ಕೋಟಿ ರು. ವೆಚ್ಚದ ಸಿಎಸ್‌ಆರ್ ನಿಧಿಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರೂ ಸಹ ಅಭಿವೃದ್ಧಿಗೆ ಕೈ ಜೋಡಿಸುತ್ತಿರುವುದರಿಂದ ನಗರ ಸಮಗ್ರವಾಗಿ ಅಭಿವೃದ್ಧಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅಭಿವೃದ್ಧಿ ವೇಳೆ ಸಾರ್ವಜನಿಕರು ಕಾಮಗಾರಿಗಳಿಗೆ ಅಡ್ಡಿಪಡಿಸದೆ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸರಾಗವಾಗಿ ನಡೆಯಲು ಸಹಕಾರ ನೀಡಬೇಕು. ಕಾಮಗಾರಿಗೆ ತಡೆಯೊಡ್ಡಬಾರದು ಎಂದು ಸಲಹೆ ನೀಡಿದರು.

ನಗರಸಭೆ ಉಪಾಧ್ಯಕ್ಷ ಎಂ.ಪಿ. ಅರುಣ್‌ಕುಮಾರ್, ಸದಸ್ಯರಾದ ಎಚ್.ಎಸ್.ಮಂಜು, ರವಿ, ಸೌಭಾಗ್ಯ, ಟಿ.ಕೆ.ರಾಮಲಿಂಗಯ್ಯ, ಟೋಪಿ ರವಿ, ಶ್ರೀಧರ್, ಪವಿತ್ರಾ ಬೋರೇಗೌಡ, ಪೌರಾಯುಕ್ತೆ ಪಂಪಾಶ್ರೀ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಎಚ್.ಕೆ. ರುದ್ರಪ್ಪ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''