ಕುಮಟಾ: ನಾಡಿನ ಅಗ್ರಣಿ ಹಾಗೂ ಇಲ್ಲಿನ ಸದಭಿರುಚಿಯ ಸಾಂಸ್ಕೃತಿಕ ಸಂಸ್ಥೆ ”ಸೌರಭ” ಕ್ಕೆ ನೂತನ ಅಧ್ಯಕ್ಷರಾಗಿ ತರಂಗ ಇಲೆಕ್ಟ್ರಾನಿಕ್ಸ್ ಸಂಸ್ಥಾಪಕ, ವ್ಯಕ್ತಿತ್ವ ವಿಕಸನ ತರಬೇತುದಾರ, ಸಾಂಸ್ಕೃತಿಕ ಪೋಷಕ ಶ್ರೀಕಾಂತ ಭಟ್ಟ ತುಂಬಲೇಮಠ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಈ ಕುರಿತು ವಿವರಿಸಿದ ಸೌರಭದ ನೂತನ ಅಧ್ಯಕ್ಷ ಶ್ರೀಕಾಂತ ಭಟ್, ೧೯೯೬ರಲ್ಲಿ ಆರಂಭವಾದ ಸೌರಭ ಸಂಸ್ಥೆಯು ಗುಣಾತ್ಮಕ ಕಾರ್ಯಕ್ರಮಗಳ ಮಹಾಅಲೆಯನ್ನೇ ಹುಟ್ಟು ಹಾಕಿ ನಾಡಿನಾದ್ಯಂತ ಸಾಂಸ್ಕೃತಿಕ ಆಂದೋಲನವನ್ನೇ ಮಾಡಿತ್ತು. ಉದಯೋನ್ಮುಖರಿಗೂ ಅವಕಾಶ, ಸಾಧಕರಿಗೂ ಸವಾಲು, ಸಮಯಪ್ರಜ್ಞೆಯ ಹಿತವಾದ ಸಭಾ ಕಾರ್ಯಕ್ರಮದ ಜತೆಗೆ ಪ್ರಾಯೋಜಕರನ್ನು ವಿಶೇಷವಾಗಿ ಪರಿಚಯಿಸಿ ಗೌರವಿಸುವ ನೂತನ ಆವಿಷ್ಕಾರಗಳು ಸೌರಭದ ಕೊಡುಗೆಗಳು ಎಂದು ಹೇಳಿದರು. ಸುಮಾರು ಎರಡೂವರೆ ದಶಕಗಳಿಂದ ಶಹರಗಳಲ್ಲಿ ಮಾತ್ರವಲ್ಲದೇ ಸಂಗೀತ ಹಾಗೂ ಯಕ್ಷಗಾನವನ್ನು ಹಳ್ಳಿ ಹಳ್ಳಿಗಳಲ್ಲಿ ಸಂಘಟಿಸಿದ್ದು ಸ್ಮರಣೀಯವಾಗಿದೆ. ಈಗ ಮತ್ತೆ ಹೊಸ ಸಾರಥ್ಯದಲ್ಲಿ ಸೌರಭ ತನ್ನ ಘನತೆಯೊಂದಿಗೆ ಹೊಸ ಹೊಸ ಸಾಂಸ್ಕೃತಿಕ ಸಾಧ್ಯತೆಗಳನ್ನು ಲೋಕಕ್ಕೆ ನೀಡಬೇಕಾಗಿದೆ. ರಾಜ್ಯಾದ್ಯಂತ ತನ್ನದೇ ವಿಶೇಷ ಹಾಗೂ ಸುಸಂಸ್ಕೃತ ಸಾಂಸ್ಕೃತಿಕ ಬಳಗವನ್ನು ಸೌರಭ ಹೊಂದಿದೆ. ಈ ವರ್ಷ ಸೌರಭದ ರಜತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.