ಕನ್ನಡಪ್ರಭ ವಾರ್ತೆ ಆಳಂದ ಸಂವಿಧಾನದ ಆಶಯ, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಜಾತ್ಯತೀತತೆಯನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಪ್ರಾದೇಶಿಕ ರಾಜಕೀಯ ಪಕ್ಷ ಸ್ಥಾಪಿಸುವ ಚಿಂತನೆ ನಡೆದಿದ್ದು, ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ 25 ಸಾವಿರ ಜನರನ್ನು ಸೇರಿಸಿ ಪಕ್ಷದ ಅಧಿಕೃತ ಘೋಷಣೆ, ಚಿಹ್ನೆ ಹಾಗೂ ಬಾವುಟ ಬಿಡುಗಡೆಗೊಳಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಘೋಷಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಚೇತನ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಯುವ ಮುಖಂಡರು, ಸಾಮಾಜಿಕ ಹೋರಾಟಗಾರರು, ವಿಚಾರವಂತರು, ಪ್ರಗತಿಪರರು ಹಾಗೂ ಸಮಾನ ಮನಸ್ಕರಿಗಾಗಿ ಆಯೋಜಿಸಿದ್ದ ರಾಜಕೀಯ ಮುನ್ನೋಟ ಸಭೆಯಲ್ಲಿ ಮಾತನಾಡಿದರು.ಹೊಸ ಪಕ್ಷವು ಯಾವುದೇ ಒಂದು ವರ್ಗ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಹಕ್ಕು, ಸಮಾನ ಅವಕಾಶ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಲಿದೆ. ಜನರ ಸಮಸ್ಯೆಗಳನ್ನು ರಾಜಕೀಯ ವೇದಿಕೆಯ ಮೂಲಕ ಮುನ್ನೆಲೆಗೆ ತಂದು ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ನಡೆಸಬೇಕಿದೆ. ಈ ಆಶಯ ಹೊಂದಿರುವ ಸಮಾನ ಮನಸ್ಕರು ಪಕ್ಷದೊಂದಿಗೆ ಕೈಜೋಡಿಸಬೇಕು ಎಂದು ಚೇತನ್ ಅಹಿಂಸಾ ಮನವಿ ಮಾಡಿದರು.
-----ಫೋಟೊ--------
ಶೀರ್ಷಿಕೆ ೬ಎಎಲ್ಡಿ೧ಆಳಂದ ಪಟ್ಟಣದಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ಸಾಮಾಜಿಕ ಹೋರಾಟಗಾರರ ಉಪಸ್ಥಿತಿಯಲ್ಲಿ ರಾಜಕೀಯ ಮುನ್ನೋಟ ಸಭೆ ನಡೆಯಿತು.