ಸಮಾನತೆಗಾಗಿ ನಾವು ನೀವು ಎಂಬ ಕಾರ್ಯಕ್ರಮದಲ್ಲಿ ನಟ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಸಮ ಸಮಾಜ ನಿರ್ಮಾಣಕ್ಕೆ ರಾಜ್ಯದಲ್ಲಿ ಹೊಸ ರಾಜಕೀಯ ಪಕ್ಷದ ರಚನೆ ಅಗತ್ಯವಾಗಿದೆ ಎಂದು ನಟ ಚೇತನ ಅಹಿಂಸಾ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಮಾನತೆಗಾಗಿ ನಾವು ನೀವು ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿವಾರ ಮಾತನಾಡಿದರು.ಕರ್ನಾಟಕ ಹಾಗೂ ಭಾರತಕ್ಕೆ ಇಂದು ಪರ್ಯಾಯ ರಾಜಕಾರಣದ ಅವಶ್ಯಕತೆ ಹೆಚ್ಚಾಗಿದೆ. ಅನ್ಯಾಯ, ಅಸಮಾನತೆ ಕೂಡಿದ ವ್ಯವಸ್ಥೆ ಇಂದು ಇದ್ದು, ರಾಜಕಾರಣಿಗಳು ಅಧಿಕಾರ, ಹಣ, ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಆರೋಗ್ಯ ಹಾಗೂ ಶಿಕ್ಷಣಗಳು ವ್ಯಾಪಾರೀಕರಣದತ್ತ ಸಾಗಿವೆ. ಪಾರದರ್ಶಕ ನೀತಿಗಳಿಗಾಗಿ ಲೋಕಾಯುಕ್ತ ಬಲಪಡಿಸಬೇಕಾಗಿದೆ. ಬಂಡವಾಳಶಾಹಿ ವ್ಯವಸ್ಥೆಗೆ ಪ್ರತಿರೋಧ ಒಡ್ಡಬೇಕಾಗಿದೆ. ಆದ್ದರಿಂದ ಸಮಾನತೆಗಾಗಿ ಹೊಸ ರಾಜಕೀಯ ಪಕ್ಷದ ರಚನೆ ಬೇಕು, ಆ ರೀತಿ ಪಕ್ಷ ಸ್ಥಾಪಿಸಿ ಕನಿಷ್ಟ 25 ರಿಂದ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಬೇಕು, ಆ ನಿಟ್ಟಿನಲ್ಲಿ ಒಂದು ವರ್ಷದ ಮುಂಚಿತವಾಗಿ ಸಂಘಟನೆ ಮಾಡುವುದಾಗಿ ಹೇಳಿ ಅದಕ್ಕೆ ತಮ್ಮ ಸಹಕಾರ ಬೇಕು ಎಂದರು.ವಕೀಲ ಬಸವರಾಜ ಸಂಗಪ್ಪನವರ್ ಮಾತನಾಡಿ, ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಸಮಾನತೆ ಇದೆ. ಸಮಾನತೆಗಾಗಿ ಸಂಗಾತಿಗಳನ್ನು ಸೇರಿಸಿ ನಟ ಚೇತನ ಸಭೆ, ಸಂವಾದ ಮಾಡುತ್ತಿದ್ದಾರೆ, ನಾಡಿನಾದ್ಯಂತ ವೈಚಾರಿಕತೆ ಮೂಡಿಸುವ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ, ರೈತ ಸಂಘದ ಮುಖಂಡ ಮಹೇಶ್ವರಸ್ವಾಮಿ ಸಂವಾದ ನಡೆಸಿದರು. ಮುಖಂಡರಾದ ಕೆ.ಎಂ. ಬಸವರಾಜಯ್ಯ, ಪೂಜಾರ ಬೀಮಪ್ಪ, ಎಚ್.ಎಂ. ಸಂತೋಷ, ಮಾಲತೇಶ ಮರಿಗೌಡರು, ಸಿ.ಗಂಗಾಧರ, ಗುಡಿಹಳ್ಳಿ ಹಾಲೇಶ, ಸಂದೇರ ಪರಶುರಾಮ, ಸುಭಾಷ್, ಹೇಮಣ್ಣ ಮೋರಗೇರಿ, ಕಬ್ಬಳ್ಳಿ ಮೈಲಪ್ಪ, ಒ.ಮಹಾಂತೇಶ, ಜಿಸಾನ್, ಇರ್ಪಾನ್ ಮುದುಗಲ್ ಇತರರಿದ್ದರು.