2025-26ನೇ ಸಾಲಿನ ಸಮಗ್ರ ಚಾಂಪಿಯನ್‌ಶಿಪ್‌ ಗೆದ್ದ ಎನ್‌ಐಟಿಕೆ ಸುರತ್ಕಲ್‌

KannadaprabhaNewsNetwork |  
Published : Jul 29, 2026, 03:00 AM IST
ಎನ್‌ಐಟಿಕೆ ಸುರತ್ಕಲ್‌  | Kannada Prabha

ಸಾರಾಂಶ

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಭಾರತದ ಎಲ್ಲ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ (ಎನ್‌ಐಟಿ) ಪೈಕಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅಖಿಲ ಭಾರತ ಅಂತರ್ ಎನ್‌ಐಟಿ (ಎಐಐಎನ್‌ಐಟಿ) ಕ್ರೀಡಾಕೂಟದಲ್ಲಿ ಭಾಗವಹಿಸಿದ ಎನ್‌ಐಟಿಗಳ ಪೈಕಿ ಗರಿಷ್ಠ 144 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿದೆ.

ಮಂಗಳೂರು: ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ), ಸುರತ್ಕಲ್ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಭಾರತದ ಎಲ್ಲ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳ (ಎನ್‌ಐಟಿ) ಪೈಕಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಅಖಿಲ ಭಾರತ ಅಂತರ್ ಎನ್‌ಐಟಿ (ಎಐಐಎನ್‌ಐಟಿ) ಕ್ರೀಡಾಕೂಟದಲ್ಲಿ ಭಾಗವಹಿಸಿದ ಎನ್‌ಐಟಿಗಳ ಪೈಕಿ ಗರಿಷ್ಠ 144 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದಿದೆ.ಈ ಸಾಧನೆಯೊಂದಿಗೆ ಅಥ್ಲೆಟಿಕ್ಸ್, ತಂಡ ಕ್ರೀಡೆಗಳು, ರಾಕೆಟ್ ಕ್ರೀಡೆಗಳು ಮತ್ತು ಶಕ್ತಿ ಆಧಾರಿತ ಕ್ರೀಡೆಗಳಲ್ಲಿ ಎನ್‌ಐಟಿಕೆ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದು, ಪುರುಷರ ಅಥ್ಲೆಟಿಕ್ಸ್, ಪುರುಷರ ಕಬಡ್ಡಿ, ಮಹಿಳೆಯರ ಬ್ಯಾಡ್ಮಿಂಟನ್, ಮಹಿಳೆಯರ ವಾಲಿಬಾಲ್, ಮಹಿಳೆಯರ ಖೋಖೋ ಮತ್ತು ಮಹಿಳೆಯರ ಈಜು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿದೆ.

ಎನ್‌ಐಟಿ ಜಲಂಧರ್‌ನಲ್ಲಿ ನಡೆದ ಎಐಐಎನ್‌ಐಟಿ ಅಥ್ಲೆಟಿಕ್ಸ್ ಕೂಟದಲ್ಲಿ 200 ಮೀ, 400 ಮೀ ಮತ್ತು 4x100 ಮೀ ರಿಲೇಗಳಲ್ಲಿ ಮೂರು ಚಿನ್ನದ ಪದಕ ಗೆದ್ದ ಅಖಿಲ್ ಬನೋತ್ (ಮೆಕ್ಯಾನಿಕಲ್ ಎಂಜಿನಿಯರಿಂಗ್) ಅತ್ಯುತ್ತಮ ವೈಯಕ್ತಿಕ ಸಾಧಕರಾಗಿ ಹೊರಹೊಮ್ಮಿದರು.

ರೋಹಿತ್ ವಿ. (ಪಿಎಚ್‌.ಡಿ., ಭೌತಶಾಸ್ತ್ರ) ಅವರು 41.60 ಮೀಟರ್ ದೂರ ಎಸೆದು ಸುತ್ತಿಗೆ ಎಸೆತದಲ್ಲಿ ಚಿನ್ನದ ಪದಕ ಗೆದ್ದು, ಕೂಟದ ‘ಅತ್ಯಂತ ಶಕ್ತಿಶಾಲಿ ಪುರುಷ’ ಪ್ರಶಸ್ತಿಗೆ ಭಾಜನರಾದರು.

ಎನ್‌ಐಟಿ ದೆಹಲಿಯಲ್ಲಿ ನಡೆದ ಎಐಐಎನ್‌ಐಟಿ ಕೂಟದಲ್ಲಿ ಎನ್‌ಐಟಿಕೆಯ ಪುರುಷರ ಕಬಡ್ಡಿ ತಂಡ ಸಂಪೂರ್ಣ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿತು. ವೀರೇಂದ್ರ ಎಂ. ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ (ಎಂವಿಪಿ) ಎನಿಸಿಕೊಂಡರು. ಎನ್‌ಐಟಿ ರೂರ್ಕೆಲಾದಲ್ಲಿ ಮಹಿಳೆಯರ ವಾಲಿಬಾಲ್ ಮತ್ತು ಖೋಖೋ ತಂಡಗಳೆರಡೂ ಚಿನ್ನದ ಪದಕ ಗೆದ್ದಿವೆ. ಮತ್ತು ಅದೇ ಕೂಟದಲ್ಲಿ ಮಹಿಳೆಯರ ಈಜು ತಂಡ ಸಮಗ್ರ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಈ ತಂಡವನ್ನು ಸುವಾಲಿ ಪಿ. ಶೆಟ್ಟಿ ಮುನ್ನಡೆಸಿದ್ದು, ಅವರಿಗೆ ಪಂದ್ಯಾವಳಿಯ ಅತ್ಯುತ್ತಮ ಈಜುಗಾರ ಪ್ರಶಸ್ತಿ ಲಭಿಸಿತು.

ಎನ್‌ಐಟಿಕೆಯ ಮಹಿಳೆಯರ ಬ್ಯಾಡ್ಮಿಂಟನ್ ತಂಡ ಕೂಡ ಎಐಐಎನ್‌ಐಟಿ ಪ್ರಶಸ್ತಿಯನ್ನು ಸಂಪೂರ್ಣವಾಗಿ ಗೆದ್ದುಕೊಂಡಿದೆ. ಮನಶ್ರೀ ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ್ತಿ ಎನಿಸಿಕೊಂಡರು.

ಪುರುಷರ ಟೇಬಲ್ ಟೆನಿಸ್ ತಂಡ ಕೂಡ ಎನ್‌ಐಟಿ ಜಂಶೆಡ್‌ಪುರದಲ್ಲಿ ನಡೆದ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ದಿಲೀಪ್ ಜಿ. ಅವರು ಸ್ಪರ್ಧೆಯ ಅತ್ಯುತ್ತಮ ಆಟಗಾರ ಎನಿಸಿಕೊಂಡರು.

ಚೆಸ್ ವಿಭಾಗದಲ್ಲಿ ಎನ್‌ಐಟಿ ಜಲಂಧರ್‌ನಲ್ಲಿ ನಡೆದ ಎಐಐಎನ್‌ಐಟಿ ಕೂಟದಲ್ಲಿ ಎನ್‌ಐಟಿಕೆಯ ಪುರುಷರ ತಂಡ ದ್ವಿತೀಯ ಸ್ಥಾನ ಪಡೆಯಿತು. ಆರನ್ ಸಂಜು ಥಾಮಸ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮೊದಲ ಬೋರ್ಡ್‌ನಲ್ಲಿ ಚಿನ್ನ ಮತ್ತು ಏಕಾಂಶ್ ಗೋಯಲ್ (ಇನ್ಫಾರ್ಮೇಶನ್ ಟೆಕ್ನಾಲಜಿ) ಎರಡನೇ ಬೋರ್ಡ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನ ವಿನಿತಾ ಎಂ. ರಾವ್ ನೇತೃತ್ವದ ಮಹಿಳೆಯರ ತಂಡ ತೃತೀಯ ಸ್ಥಾನ ಪಡೆಯಿತು. ಅವರು ಮೂರನೇ ಬೋರ್ಡ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ಶಕ್ತಿ ಕ್ರೀಡೆಗಳ ವಿಭಾಗದಲ್ಲಿ ಎನ್‌ಐಟಿ ದೆಹಲಿಯಲ್ಲಿ ನಡೆದ ಎಐಐಎನ್‌ಐಟಿ ಕೂಟದಲ್ಲಿ ಎನ್‌ಐಟಿಕೆಯ ವೇಟ್‌ಲಿಫ್ಟಿಂಗ್ ತಂಡ ಎರಡು ಚಿನ್ನ ಮತ್ತು ಒಂದು ಕಂಚಿನ ಪದಕದೊಂದಿಗೆ ಒಟ್ಟಾರೆ ತೃತೀಯ ಸ್ಥಾನ ಪಡೆಯಿತು. ಅದೇ ಕೂಟದಲ್ಲಿ ಬಾಡಿ ಬಿಲ್ಡಿಂಗ್ ತಂಡ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಹಿತೇಶ್ ದಗರ್ ಅವರು ಪಂದ್ಯಾವಳಿಯ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿಗೆ ಭಾಜನರಾದರು.

ವಿಎನ್‌ಐಟಿ ನಾಗ್ಪುರದಲ್ಲಿ ನಡೆದ ಎಐಐಎನ್‌ಐಟಿ ಕೂಟದಲ್ಲಿ ಪುರುಷರ ಹ್ಯಾಂಡ್‌ಬಾಲ್ ತಂಡ ಕಂಚಿನ ಪದಕ ಗೆದ್ದುಕೊಂಡಿತು. ತನ್ಶಿಕ್ ಚೋಪ್ಡೆ ಮತ್ತು ವಿದ್ಯಾಶಂಕರ್ ಎಚ್.ಆರ್. ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿಕ್ಕಬಳ್ಳಾಪುರದಲ್ಲಿ ಐತಿಹಾಸಿಕ ರಕ್ತದಾನ ಶಿಬಿರ
ಹಿಪ್ಪರಗಿ ಕಾರು ಸ್ಫೋಟ ಪ್ರಕರಣ: ಐಜಿಪಿ ಭೇಟಿ