ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಳೆಯಿಂದಾಗಿ ವೇದಾವತಿ ನದಿಯಲ್ಲಿಉಂಟಾಗುವ ಪ್ರವಾಹವ ನಿಯಂತ್ರಿಸುವ ಸಂಬಂಧ ವಾಣಿ ವಿಲಾಸ ಸಾಗರ ಜಲಾಶಯದ ಕೋಡಿ ಬಳಿ ಕ್ರಸ್ಟ್ ಗೇಟ್ ಗಳ ಅಳವಡಿಸಲು ತಜ್ಞರ ತಂಡ ಮಾಡಿದ್ದ ಸಲಹೆ ಆಧರಿಸಿ ಸಲ್ಲಿಸಲಾಗಿದ್ದ 61 ಕೋಟಿ ರುಪಾಯಿ ವೆಚ್ಚದ ಪ್ರಸ್ತಾವನೆಗೆ ಈ ಮೊದಲು ಕೇಂದ್ರ ಜಲ ಆಯೋಗ ಕೆಲ ತಾಂತ್ರಿಕ ಮಾಹಿತಿ ಕೇಳಿತ್ತು. ಪೂರೈಕೆಯಾದ ನಂತರವೂ ಸಮ್ಮತಿಸಿಲ್ಲ.
2022ರಲ್ಲಿ ಸುರಿದ ಭಾರೀ ಮಳೆಯಿಂದಾಗಿ 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿತ್ತು.ವಿವಿ ಸಾಗರ ಜಲಾಶಯದಲ್ಲಿ 130 ಅಡಿ ವರೆಗೆ ನೀರು ಸಂಗ್ರಹಿಸುವ ಅವಕಾಶವಿದ್ದು ಇದೇ ಎತ್ತರಕ್ಕೆ ಕೋಡಿ ಅಳವಡಿಸಲಾಗಿದೆ. 2022 ರಲ್ಲಿ ಸುರಿದ ಭಾರೀ ಮಳೆಯಿಂದಾಗಿ 89 ವರ್ಷಗಳ ನಂತರ ವಿವಿ ಸಾಗರ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿತ್ತು. ಜಲಾಶಯದಲ್ಲಿ 135 ಅಡಿ ನೀರು ಸಂಗ್ರಹವಾದಾಗ ಹೊಸದುರ್ಗ ತಾಲೂಕಿನಲ್ಲಿ ಎರಡು ಸಾವಿರ ಎಕರೆಯಷ್ಟು ರೈತರ ಭೂಮಿಗಳು ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದವು. ಒಂದೇ ದಿನ 18 ಸಾವಿರ ಕ್ಯೂಸೆಕ್ಸ್ (ಒಂದುವರೆ ಟಿಎಂಸಿ) ನೀರು ಹರಿದು ಬಂದಿದ್ದರಿಂದ ಪ್ರವಾಹ ಸೃಷ್ಟಿಯಾಗಿತ್ತು. ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಎಫ್ ಆರ್ ಎಲ್( ಫುಲ್ ರಿಜರ್ವಾರಿಯರ್ ಲೆವೆಲ್ )ಮಟ್ಟದಲ್ಲಿ ಕ್ರಸ್ಟ್ ಗೇಟ್ ಗಳ ಅಳವಡಿಸುವ ಚಿಂತನೆಗಳಾಗಿದ್ದವು.2022ರಲ್ಲಿ ಪ್ರವಾಹ ಬಂದಾಗ ಭವಿಷ್ಯದಲ್ಲಿ ಆಗುವ ಅನಾಹುತಗಳ ತಪ್ಪಿಸುವ ಸಂಬಂಧ ಕರ್ನಾಟಕ ಇಂಜಿನಿಯರಿಂಗ್ ರೀಸರ್ಚ್ ಸ್ಟೇಷನ್ (KERS) ಅಧ್ಯಯನ ಕೈಗೊಂಡು ಕೆಲ ಶಿಫಾರಸು ಮಾಡಿತ್ತು. ಹಾಲಿ ಕೋಡಿಯಲ್ಲಿ 991 ಕ್ಯುಮೆಕ್ಸ್ ನಷ್ಟು ನೀರು ಹೊರ ಹೋಗುವ ಅವಕಾಶವಿದೆ. 10292 ಕ್ಯುಮೆಕ್ ಒಳಹರಿವಿದ್ದು ಪ್ರವಾಹದ ಗರಿಷ್ಠ ಮೌಲ್ಯ ಇದಾಗಿದ್ದು ಅಣೆಕಟ್ಟು ಜಲವಿಜ್ಞಾನದ ದೃಷ್ಟಿಯಿಂದ ಸುರಕ್ಷಿತವಲ್ಲವೆಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಹಾಲಿ ಇರುವ 991 ಕ್ಯುಮೆಕ್ಟ್ ಕೋಡಿಯನ್ನು ಹತ್ತು ಪಟ್ಟು ಹೆಚ್ಚಿಸಬೇಕಾಗಿದೆ. ಅಸ್ತಿತ್ವದಲ್ಲಿರುವ ಕೋಡಿ ಬದಲಿಗೆ ವಿಶಾಲವಾದ ಗೇಟೆಡ್ ಸ್ಪಿಲ್ ವೇ ಅಗತ್ಯತೆಯ ಪ್ರಸ್ತಾಪಿಸಿದ್ದರು.
ಗೇಟೆಡ್ ಸ್ಪಿಲ್ವೇಯನ್ನು ಅಳವಡಿಸುವುದರಿಂದ ಒಳ ಹರಿವಿನ ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಅಣೆಕಟ್ಟು ವೈಫಲ್ಯ ಅಥವಾ ರಚನಾತ್ಮಕ ಹಾನಿಯ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಪ್ರವಾಹದ ಹೆಚ್ಚುವರಿ ನೀರನ್ನು ನಿಯಂತ್ರಿಸಲು ಔಟ್ಲೆಟ್ ಒದಗಿಸಿ ಒಟ್ಟಾರೆ ಅಣೆಕಟ್ಟು ತನ್ನ ಸುರಕ್ಷತೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತದೆ ಎಂಬುವುದು ತಜ್ಞರ ಅಭಿಮತವಾಗಿತ್ತು. ಇದೀಗ ಕ್ರಸ್ಟ್ ಗೇಟ್ ಅಳವಡಿಕೆ ಪ್ರಸ್ತಾಪಕ್ಕೆ ಸಮ್ಮತಿ ನೀಡದೇ ಇರುವುದರಿಂದ ಚಿಂತನೆಗಳಿಗೆ ಬ್ರೇಕ್ ಹಾಕಿದಂತಾಗಿದೆ.