ಗ್ಯಾರಂಟಿನೂ ಇಲ್ಲ, ಡಬ್ಬಲ್ ಡಿಜಿಟ್ ಗೆಲುವು ಇಲ್ಲ: ಜೆಡಿಎಸ್‌ ವಕ್ತಾರ ಕೆ.ಬಿ.ಪ್ರಸನ್ನಕುಮಾರ್

KannadaprabhaNewsNetwork | Published : Jun 6, 2024 12:31 AM

ಶಿವಮೊಗ್ಗ ನಗರದಲ್ಲಿರುವ ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳು ಗೋಪಾಲ್‌ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಂಗ್ರೆಸ್ ನಾಯಕರ ಗ್ಯಾರಂಟಿ ಕಾರ್ಯರೂಪಕ್ಕೆ ಬಂದಿಲ್ಲ. ಅವರ ಡಬ್ಬಲ್ ಡಿಜಿಟ್ ಗೆಲುವು ಸಿಕ್ಕಿಲ್ಲ ಎಂದು ಮಾಜಿ ಶಾಸಕ, ಜೆಡಿಎಸ್‌ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ಜನತೆ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದ ಬೇಸತ್ತಿದ್ದಾರೆ. ಅಧಿಕಾರಿಗಳು ಮೂಗಿನ ನೇರಕ್ಕೆ ಕೆಲಸ ಮಾಡುತ್ತಿದ್ದು, ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲಿಸದೇ ಅಭಿವೃದ್ಧಿ ಕಡೆಗೆ ತುರ್ತು ಗಮನ ನೀಡಲಿ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರರ ಗೆಲುವಿನ ಹಿಂದೆ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ಶ್ರಮವಿದೆ. ರಾಜ್ಯದಲ್ಲಿ ಮೈತ್ರಿ ಯಶಸ್ವಿಯಾಗಿದೆ ಎಂದರು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭಾರಿ ಬಹುಮತದಿಂದ ಗೆದ್ದಿದ್ದಾರೆ. ರಾಘವೇಂದ್ರರು ಮೂರು ಬಾರಿ ಸಂಸದರಾಗಿ ಜಿಲ್ಲೆಗೆ ಅನೇಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಜಿಲ್ಲೆಯ ರಸ್ತೆ, ವಿಮಾನ ನಿಲ್ದಾಣ, ಸಮುದಾಯ ಭವನಗಳು, ರೈಲ್ವೆ ಮೇಲ್ಸೆತುವೆಗಳು, ಪ್ರವಾಸೋಧ್ಯಮ ಅಭಿವೃದ್ಧಿ, ದೂರ ಸಂಪರ್ಕ ಕ್ರಾಂತಿ, ಅನೇಕ ರೈಲು ಸಂಚಾರಗಳು ಸೇರಿ ಅಭಿವೃದ್ಧಿ ಮಹಾಪೂರ ಹರಿಸಿದ್ದು, ಕ್ಷೇತ್ರದ ಜನತೆ ಅವರ ಕೈ ಹಿಡಿದಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಕೂಡ ಬಿಜೆಪಿಯೊಂದಿಗೆ ಅವರ ಗೆಲುವಿಗೆ ಕಾರಣರಾಗಿದ್ದಾರೆ ಎಂದರು.

ಶಾಸಕಿ ಶಾರದಪೂರ್ಯನಾಯ್ಕ್ ಮಾತನಾಡಿ, ಜೆಡಿಎಸ್‍ನ ಹಿರಿಯ ನಾಯಕರ ಸಲಹೆಯಂತೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಜಿಲ್ಲೆಯ ಮತದಾರರು ಅಭಿವೃದ್ಧಿ ದೃಷ್ಠಿಯಿಂದ ರಾಘವೇಂದ್ರರಿಗೆ ಬೆಂಬಲಿಸಿದ್ದಾರೆ. ಇನ್ನೂ ಅನೇಕ ಅಭಿವೃದ್ಧಿ ಕಾರ್ಯ ಅವರಿಂದ ನಿರೀಕ್ಷಿಸುತ್ತಿದ್ದೇವೆ. ಕೇಂದ್ರ ಸರ್ಕಾರ ನರೇಂದ್ರ ಮೋದಿ ನೇತೃತ್ವದಲ್ಲಿ ಇನ್ನೂ ಹೆಚ್ಚಿನ ಕೊಡುಗೆ ಜಿಲ್ಲೆಗೆ ನೀಡಲಿ. ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳನ್ನು ಸಂಸದರ ನೇತೃತ್ವದಲ್ಲಿ ಬಗೆಹರಿಸಲಿ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಯ್ಯ, ತ್ಯಾಗರಾಜ್, ಗೀತಾ ಸತೀಶ್, ದೀಪಕ್‍ಸಿಂಗ್, ಎಸ್.ಎಲ್. ನಿಖಿಲ್, ಗಂಧದಮನೆ ನರಸಿಂಹ, ವಿನಯ್ ಮತ್ತಿತರರು ಇದ್ದರು.