ಕನ್ನಡಪ್ರಭ ವಾರ್ತೆ ವಿಧಾನಸಭೆ
ಮಂಗಳವಾರ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮೂಲ ವೀಧೇಯಕದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಆದರೆ, ಇಂತಹ ಸಣ್ಣಪುಟ್ಟ ತಪ್ಪಿಗೆ ಜೈಲು ಶಿಕ್ಷೆ ಸರಿಯಲ್ಲ ಎಂಬ ಚರ್ಚೆ ಇದೀಗ ದೇಶದಾದ್ಯಂತ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿಯ ಕರಡು ಸಿದ್ಧಪಡಿಸಿ ನಮಗೆ ಕಳಿಸಿಕೊಟ್ಟಿದೆ. ನಾವು ಈ ತಿದ್ದುಪಡಿ ಮೂಲಕ ಹೊಸ ಕಾನೂನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಶಿಕ್ಷೆಯ ರೂಪದಲ್ಲಿ ದಂಡ ಶುಲ್ಕ ಅಧಿಕವಾಗಬಹುದು. ಆದರೆ, ಜೈಲಿಗೆ ಹೋಗುವ ಅಂಶ ತೆಗೆದುಹಾಕಲಾಗಿದೆ ಎಂದು ವಿವರಿಸಿದರು.
ಇದೊಂದು ಸರಳ ವಿಧೇಯಕ. ಈ ಹಿಂದೆ ಕೇಂದ್ರ ಸರ್ಕಾರ ಮಾದರಿ ವಿಧೇಯಕವನ್ನು ರೂಪಿಸಿದ ನಂತರ ಅದನ್ನು ಎಲ್ಲಾ ರಾಜ್ಯಗಳೂ ಒಂದೇ ಮಾದರಿಯಲ್ಲಿ ಅಳವಡಿಸಿಕೊಂಡಿದ್ದವು. ಆದರೆ, ಪ್ರಸ್ತುತ ಈ ವಿಧೇಯಕದಲ್ಲಿ ಕೆಲ ಸರಳ ತಿದ್ದುಪಡಿಗಳನ್ನು ತರಲಾಗಿದೆ ಎಂದು ಹೇಳಿದರು.ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್ ಮಾತನಾಡಿ, ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆಯನ್ನೂ ತಪ್ಪಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಕೃಷ್ಣಬೈರೇಗೌಡ, ಇವತ್ತಿಗೂ ಸಣ್ಣಪುಟ್ಟ ಬಾಡಿಗೆದಾರರಿಗೆ ಶೋಷಣೆ ಆಗುತ್ತಿದೆ ಎಂಬುದು ನಿಜ. ಅಂತವರನ್ನೂ ರಕ್ಷಿಸಲು ಈ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ನಾವು ಈ ಕಾನೂನನ್ನು ಅನುಸರಣೆ ಮಾಡುವುದನ್ನೇ ಮರೆತಿದ್ದೇವೆ. ನಾವೆಲ್ಲರೂ ಒಟ್ಟಾಗಿ ಈ ಕಾನೂನು ಅನುಷ್ಠಾನ ಮಾಡಿದರೆ, ಜನರಿಗೂ ಅರಿವು ಮೂಡಿಸಿದರೆ ಸಣ್ಣ ಬಾಡಿಗೆದಾರರ ಮೇಲಿನ ಶೋಷಣೆ ಗಣನೀಯವಾಗಿ ತಡೆಯಬಹುದು ಎಂದರು.