ಮುಸ್ಲಿಮರಿಗೆ ಹಿಂದುಗಳ ಆಸ್ತಿಕತೆ ಬೇಡ, ವ್ಯಾಪಾರ ಬೇಕು, ಲಾಭ ಬೇಕು ಎಂದರೆ ಹೇಗೆ?
ಕನ್ನಡಪ್ರಭ ವಾರ್ತೆ ಉಡುಪಿ ಮಂಗಳೂರು ಮಂಗಳಾದೇವಿ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಆದರೆ ಆವರಣದಲ್ಲಿ ಮುಸ್ಲಿಮರಿಗೆ ಅವಕಾಶ ಕೊಟ್ಟಿದ್ದಾರೆ, ಇದರ ವಿರುದ್ಧ ವಿ.ಹಿಂ.ಪ. ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ಹಿಂದುಗಳ ಆಸ್ತಿಕತೆ ಬೇಡ, ವ್ಯಾಪಾರ ಬೇಕು, ಲಾಭ ಬೇಕು ಎಂದರೆ ಹೇಗೆ? ಗೋಪೂಜೆ ನಡೆಯುವ ದೇವಸ್ಥಾನದಲ್ಲಿ, ಗೋಹತ್ಯೆ ಮಾಡುವವರಿಗೆ ಯಾಕೆ ಅವಕಾಶ ನೀಡಬೇಕು? ಅಲ್ಲಾಹ್ ಒಬ್ಬನೇ ದೇವರು ಅನ್ನುವ ಅವರಿಗೆ ಬಹುದೇವ ಉಪಾಸಕರ ಕ್ಷೇತ್ರದಲ್ಲಿ ವ್ಯಾಪಾರ ಯಾಕೆ ಎಂದು ಪ್ರಶ್ನಿಸಿದರು. ಸಮಾಜದ ಸುರಕ್ಷತೆ ಹಿನ್ನೆಲೆಯಲ್ಲಿ ಹಿಂದು ಕ್ಷೇತ್ರಗಳಲ್ಲಿ ಹಿಂದು ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಿ. ಹಿಂದು ವ್ಯಾಪಾರಿಗಳ ಮಳಿಗೆಗೆ ಕೇಸರಿ ಧ್ವಜ ಅಳವಡಿಸಿದ ಕ್ರಮ ಸರಿಯಾಗಿದೆ. ಈಗೀಗ ಮಳಿಗೆಗಳಿಗೆ ಹಿಂದೂ ಹೆಸರು ಇಟ್ಟುಕೊಂಡು ಮುಸ್ಲಿಮರು ವ್ಯಾಪಾರ ಮಾಡ್ತಾರೆ. ಹಿಂದುಗಳು ಹಣೆ ಮೇಲೆ ಕುಂಕುಮ, ಭಸ್ಮ ಹಚ್ಚಿಕೊಂಡು ವ್ಯಾಪಾರ ಮಾಡಿ ಎಂದವರು ಸಲಹೆ ನೀಡಿದರು. * ಸಲಿಂಗ ಮದುವೆ ಬೇಡ ಸಲಿಂಗಿಗಳ ಮದುವೆ ಸೃಷ್ಟಿಗೆ ವಿರುದ್ಧವಾಗಿದೆ. ಇದನ್ನು ನಾನು ಒಪ್ಪುವುದಿಲ್ಲ. ಇಂತಹ ಅಸಹ್ಯಕ್ಕೆ ಕಾನೂನಿನ ಮಾನ್ಯತೆ ಸರಿಯಲ್ಲ, ಈ ಹಿನ್ನೆಲೆಯಲ್ಲಿ ಸಲಿಂಗ ವಿವಾಹದ ವಿರುದ್ಧ ಕೇಂದ್ರ ಸರ್ಕಾರದ ನಿಲುವು ಸರಿಯಿದೆ ಎಂದು ಮುತಾಲಿಕ್ ಹೇಳಿದರು. ಸಲಿಂಗ ವಿವಾಹ ಬಗ್ಗೆ ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ತೀರ್ಪಿಗೆ ಅವರು ಪ್ರತಿಕ್ರಿಯಿಸಿದರು. ಮದುವೆ ಎಂಬುದು ಪವಿತ್ರವಾದುದು, ಅದಕ್ಕೆ ಕಳಂಕ ತಗಲಬಾರದು. ಬೇಕಾದಷ್ಟು ಪ್ರೀತಿ ಮಾಡಿ ಅಡ್ಡಿಯಿಲ್ಲ, ಆದರೆ ಸಲಿಂಗ ಮದುವೆ ಬೇಡ ಎಂದವರು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.