ಭಟ್ಕಳ: ಅರಣ್ಯಭೂಮಿ ಅತಿಕ್ರಮಣದಾರರ ತಿರಸ್ಕೃತಗೊಂಡ ಅರ್ಜಿ ಮರುಪರಿಶೀಲನೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಇದಕ್ಕೆ ಕನಿಷ್ಠ 6 ತಿಂಗಳಾದರೂ ಕಾಲವಕಾಶ ಕೊಡಬೇಕು. ಯಾವುದೇ ಕಾರಣಕ್ಕೂ ಅರ್ಜಿ ಮರುಪರಿಶೀಲನೆಯನ್ನು ಕಾಟಾಚಾರಕ್ಕೆ, ತರಾತುರಿಯಲ್ಲಿ ಮಾಡಿ ಮುಗಿಸಬಾರದು ಎಂದು ಜಿಲ್ಲಾ ಅರಣ್ಯಭೂಮಿ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಹೇಳಿದರು.
ಹೀಗಾಗಿ ಅರ್ಜಿ ಮರುಪರಿಶೀಲನೆಗೆ ಕಾಲವಕಾಶ ಕೊಡಬೇಕು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳು ಭೂಮಿಯ ಹಕ್ಕಿನಿಂದ ವಂಚಿತರಾಗದಂತೆ ರಾಜ್ಯ ಮಟ್ಟದ ಅರಣ್ಯ ಹಕ್ಕು ಮೇಲ್ವಿಚಾರಣಾ ಸಮಿತಿ ನೀಡಿರುವ ನಿರ್ದೇಶನದಂತೆ ಅರಣ್ಯ ಹಕ್ಕು ನಿಯಮ 13ರಲ್ಲಿ ಸೂಚಿಸಿರುವ ಪುರಾವೆಯನ್ನು ಗುರುತಿಸಿ, ಸಮರ್ಪಕವಾಗಿ ಸ್ಥಳ ಮಹಜರು ವರದಿ ಸಲ್ಲಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.
ತಾಲೂಕು ಸಮಿತಿಯ ಅಧ್ಯಕ್ಷ ರಾಮಾ ಎಂ. ಮೊಗೇರ ಮಾತನಾಡಿ, ಅತಿಕ್ರಮಣದಾರರು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದು, ಅವರಿಗೆ ಪಟ್ಟಾ ಸಿಗಬೇಕು ಎಂದರು.ಜಿಲ್ಲಾ ಜನಪರ ಒಕ್ಕೂಟದ ಅಧ್ಯಕ್ಷ ಪ್ರೊ. ನಾಗೇಶ ನಾಯ್ಕ, ಆಂದ್ರ, ತಮಿಳುನಾಡು, ಕೇರಳದಲ್ಲಿ ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಟ್ಟಿರುವಾಗ ರಾಜ್ಯದಲ್ಲಿ ಏಕೆ ಕೊಟ್ಟಿಲ್ಲ? ಇಲ್ಲಿ ಶೇ. 4ರಷ್ಟು ಮಾತ್ರ ಪ್ರಗತಿ ಆಗಿದೆ. ಇದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದರು.
ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಪ್ರಮುಖರಾದ ಎಂ.ಡಿ. ನಾಯ್ಕ, ಈಶ್ವರ ನಾಯ್ಕ, ಖಯ್ಯುಮ್ ಸಾಬ್, ಈಶ್ವರ ಮೊಗೇರ, ಎ.ಎಂ. ಮುಲ್ಲಾ ಮುಂತಾದವರಿದ್ದರು.