ದೇಗುಲ ಬಳಿ ಕಲ್ಲು ಗಣಿಗಾರಿಕೆಗೆ ಅನುಮತಿ ಬೇಡ

KannadaprabhaNewsNetwork |  
Published : May 20, 2025, 01:17 AM IST
19ಎಚ್ಎಸ್ಎನ್14 : ಬೇಲೂರು ತಾಲ್ಲೂಕಿನ ವೀರದೇವನಹಳ್ಳಿ ಸಮೀಪದ ಶ್ರೀ ಕರಿಮಲ್ಲೇಶ್ವರಸ್ವಾಮಿ ದೇಗುಲದ ಬಳಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ವೀರದೇವನಹಳ್ಳಿ ಗ್ರಾಮದ ಸಮೀಪದಲ್ಲಿರುವ ಐತಿಹಾಸಿಕ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಗೆ ಒಳಪಡುವ ಶ್ರೀ ಕರಿಮಲ್ಲೇಶ್ವರಸ್ವಾಮಿ ದೇಗುಲದ ಸಮೀಪದ ಕೆಲ ಪ್ರಭಾವಿ ವ್ಯಕ್ತಿಗಳು ಕಲ್ಲು ಗಣಿಗಾರಿಕೆ ನಡೆಸಲು ಹುನ್ನಾರ ನಡೆಸಿದ್ದು ಇತಿಹಾಸ ಪ್ರಸಿದ್ಧ ದೇಗುಲದ ಸಂರಕ್ಷಣೆ ಹಿತದೃಷ್ಟಿಯಿಂದ ಸಂಬಂಧಿಸಿದ ಇಲಾಖೆಯವರು ಯಾವ ಕಾರಣಕ್ಕೂ ಅನುಮತಿ ನೀಡಬಾರದು ಎಂದು ವೀರದೇವನಹಳ್ಳಿ ಗ್ರಾಮಸ್ಥರು ಹಾಗೂ ಶ್ರೀ ಕರಿಮಲ್ಲೇಶ್ವರ ದೇಗುಲದ ಭಕ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು. ಕೆಲ ಪ್ರಭಾವಿ ವ್ಯಕ್ತಿಗಳು ರಾಜಕೀಯ ಒತ್ತಡ ಬಳಸಿಕೊಂಡು ಕಲ್ಲು ಗಣಿಗಾರಿಕೆ ನಡೆಸಲು ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ವೀರದೇವನಹಳ್ಳಿ ಗ್ರಾಮದ ಸಮೀಪದಲ್ಲಿರುವ ಐತಿಹಾಸಿಕ ಪ್ರಸಿದ್ಧ ಹಾಗೂ ಮುಜರಾಯಿ ಇಲಾಖೆಗೆ ಒಳಪಡುವ ಶ್ರೀ ಕರಿಮಲ್ಲೇಶ್ವರಸ್ವಾಮಿ ದೇಗುಲದ ಸಮೀಪದ ಕೆಲ ಪ್ರಭಾವಿ ವ್ಯಕ್ತಿಗಳು ಕಲ್ಲು ಗಣಿಗಾರಿಕೆ ನಡೆಸಲು ಹುನ್ನಾರ ನಡೆಸಿದ್ದು ಇತಿಹಾಸ ಪ್ರಸಿದ್ಧ ದೇಗುಲದ ಸಂರಕ್ಷಣೆ ಹಿತದೃಷ್ಟಿಯಿಂದ ಸಂಬಂಧಿಸಿದ ಇಲಾಖೆಯವರು ಯಾವ ಕಾರಣಕ್ಕೂ ಅನುಮತಿ ನೀಡಬಾರದು ಎಂದು ವೀರದೇವನಹಳ್ಳಿ ಗ್ರಾಮಸ್ಥರು ಹಾಗೂ ಶ್ರೀ ಕರಿಮಲ್ಲೇಶ್ವರ ದೇಗುಲದ ಭಕ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಕರಿಮಲ್ಲೇಶ್ವರಸ್ವಾಮಿ ದೇಗುಲ‌ ಸಮಿತಿ ಮುಖ್ಯಸ್ಥರಾದ ಚಂದ್ರೇಗೌಡ, ಶ್ರೀ ಕರಿಮಲ್ಲೇಶ್ವರ ದೇಗುಲಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಿಶೇಷವಾಗಿ ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಇಂತಹ ದೇಗುಲದ ಸುತ್ತ ಚನ್ನೇಹಳ್ಳಿ ಸರ್ವೇ ನಂ. 20ರಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ರಾಜಕೀಯ ಒತ್ತಡ ಬಳಸಿಕೊಂಡು ಕಲ್ಲು ಗಣಿಗಾರಿಕೆ ನಡೆಸಲು ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈಗಾಗಲೇ ಶ್ರೀ ಕರಿಮಲ್ಲೇಶ್ವರ ದೇಗುಲ ಜೀರ್ಣೋದ್ಧಾರಗೊಳಿಸುವ ಮೂಲಕ ನಿತ್ಯ ಪೂಜೆ ನಡೆಸಲಾಗಿದೆ. ಪ್ರತಿ ಹಣ್ಣಿಮೆ ಮತ್ತು ಅಮಾವಾಸ್ಯೆ ಕಾರ್ಯಕ್ರಮ ನಡೆಸಿ ನೂರಾರು ಜನರಿಗೆ ದಾಸೋಹ ಕೆಲಸ ಮಾಡುತ್ತಿರುವ ಧಾರ್ಮಿಕ ಸ್ಥಳವನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ರಾಜಕೀಯ ಮುಖಂಡರು ಮುಂದಾಗಬೇಕು ಎಂದರು.

ಈಗಾಗಲೇ ಶಾಸಕ ಎಚ್. ಕೆ ಸುರೇಶ್ ಅವರ ಗಮನಕ್ಕೆ ತಂದಿದ್ದು ತಹಸೀಲ್ದಾರ್‌ ಅವರಿಗೆ ದೂರು ನೀಡಲಾಗಿದೆ. ವಿಶೇಷವಾಗಿ ಹಾಸನ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಯಾವ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಗ್ರಾಮಕ್ಕೆ ಅನುಕೂಲಕ್ಕಾಗಿ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು ಎಂದರು.

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ದೇಗೌಡ ಹಾಗೂ ಗ್ರಾಮದ ಮುಖಂಡ ರಮೇಶಯ್ಯ ಮಾತನಾಡಿ, ವೀರದೇವನಹಳ್ಳಿ ಗ್ರಾಮಕ್ಕೆ ಹೊಯ್ಸಳ ಕಾಲದ ಇತಿಹಾಸವಿದೆ. 900 ವರ್ಷಗಳ ಹಿಂದೆ ಇದೇ ಬಂಡೆಯಲ್ಲಿ ಚನ್ನಕೇಶವಸ್ವಾಮಿ ದೇಗುಲದ ಶಿಲ್ಪಿಗಳಿಗೆ ಮತ್ತು ದೇವರ ಮೂರ್ತಿ ತಯಾರಿಕೆಗೆ ಇಲ್ಲಿಂದಲೇ ಕಲ್ಲನ್ನು ತೆಗೆದುಕೊಂಡು ಹೋದ ಬಗ್ಗೆ ಐತಿಹ್ಯವಿದೆ. ಈಗಲೂ ಕೂಡ ಸುಮಾರು 100 ಅಡಿಯ ಚನ್ನೇದೇವರ ಗುಂಡಿ ಎಂಬ ಹೆಸರು ಇದೆ. ಈಗಾಗಲೇ ದೇಗುಲವನ್ನು ಇಡಿ ಗ್ರಾಮಸ್ಥರು ಒಂದಾಗಿ ಅಭಿವೃದ್ಧಿಪಡಿಸಿ ನಿತ್ಯ ದಾಸೋಹ, ಒಂದು ಕಿಲೋಮೀಟರ್ ಉದ್ದದ ರಸ್ತೆಯನ್ನು ಕೂಡ ಮಾಡಲಾಗಿದೆ, ಆದರೂ ಕೆಲವರು ರಾಜಕೀಯ ಪ್ರಭಾವವನ್ನು ಬಳಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಹಲಗೇಗೌಡ, ಶಿವೇಗೌಡ, ಹಾಲಪ್ಪ, ಶಿವಲಿಂಗಪ್ಪ, ಮೂರ್ತಿ, ಹೇಮಾಕುಮಾರ್, ಜಯರುದ್ರೇಗೌಡ, ದಯಾನಂದ, ಬಸವೇಗೌಡ, ಈಶ್ವರೇಗೌಡ, ಶಾಂತಮಲ್ಲೇಗೌಡ. ಜಯಪ್ಪಗೌಡ ವೇದಮೂರ್ತಿ ಇನ್ನೂ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ