ಭದ್ರಾ ಮೇಲ್ದಂಡೆ ವಿಚಾರದಲ್ಲಿ ರೈತರ ಕಣ್ಣೊರೆಸುವ ತಂತ್ರ ಬೇಡ

KannadaprabhaNewsNetwork |  
Published : Jul 07, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಜಲ ಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅನುಷ್ಠಾನದ ವಿಚಾರದಲ್ಲಿ ವಾಸ್ತವಾಂಶ ಮರೆಮಾಚಬಾರದೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವ ಆಗ್ರಹಿಸಿದೆ.

ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕಚೇರಿ ಸಭಾಂಗಣದಲ್ಲಿಈ ಸಂಬಂಧ ಜಲಸಂಪನ್ಮೂಲ ಸಚಿವ ರಾಮಲಿಂಗಾರಡ್ಡಿ ಅವರಿಗೆ ಮನವಿ ಸಲ್ಲಿಸಿದ ಸಮಿತಿ, ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ನೆನೆಗುದಿಗೆ ಬಿದ್ದಿದ್ದು ಹತ್ತು ಇಲ್ಲವೇ ಇಪ್ಪತ್ತು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ರೈತರ ಕಣ್ಣೊರಿಸುವ ಬದಲು ಇಡೀ ಯೋಜನೆಗೆ ಸಮಗ್ರವಾಗಿ ಕಾಯಕಲ್ಪ ಮಾಡುವ ತುರ್ತು ಅಗತ್ಯವಿದೆ ಎಂದಿದೆ.

ಕಳೆದ ಒಂದು ವರ್ಷದಿಂದ ಶೀಘ್ರ ಗೋನೂರು ಕೆರೆಗೆ ನೀರು ಎಂದು ಜನ ಪ್ರತಿನಿಧಿಗಳು ಹೇಳಿಕೆಗಳ ನೀಡಿ ರೈತರಲ್ಲಿ ಹುಸಿ ಆಸೆ ಹುಟ್ಟಿಸುತ್ತಿದ್ದಾರೆ. ಗೋನೂರು ಕೆರೆಗೆ ನೀರು ಕೊಟ್ಟ ನಂತರ ಮುಂದೇನು ಎಂಬ ಬಗ್ಗೆ ಚಿಂತನೆಗಳು ನಡೆದಿಲ್ಲ. ಭದ್ರಾ ನೀರು ರೈತರಿಗೆ ಮುಟ್ಟಬೇಕಾದರೆ ಕೊಳವೆ ಮಾರ್ಗದ ವಿತರಣಾ ಜಾಲ ಸೃಷ್ಟಿಸಬೇಕು. ಅದರ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ.

ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಯ ಪ್ರಧಾನವಾಗಿ ಬಿಂಬಿಸಿ ರಾಜ್ಯ ಸರ್ಕಾರ ಮಾತನಾಡುತ್ತಿದೆ. ತುಮಕೂರು ಶಾಖಾ ಕಾಲುವೆ ಕಾಮಗಾರಿ ಕೂಡಾ ನಿಧಾನಗತಿಯಲ್ಲಿದೆ. ಅಜ್ಜಂಪುರ ತಾಲೂಕು ಯಗಡಿಹಳ್ಳಿ ಬಳಿ 150 ಮೀಟರ್ ನಷ್ಟು ಕಾಲುವೆ ನಿರ್ಮಾಣ ಕಾಮಗಾರಿ ಆಗಿಲ್ಲ. ಬಂಡೆಗಲ್ಲುಗಳು ಇರುವುದರಿಂದ ನಿಧಾನವಾಗಿದೆ. ಸಕಾಲದಲ್ಲಿ ಗುತ್ತಿಗೆದಾರರಿಗೆ ಹಣ ಕೊಡದ ಕಾರಣ ಕಾಮಗಾರಿ ನಿಂತಿದೆ. ತುಂಗಾದಿಂದ ಭದ್ರಾವರೆಗಿನ ಮೊದಲ ಹಂತದಲ್ಲಿ ಎರಡು ಕಡೆ ಟವರ್ ಗಳು ಆಗಬೇಕು. ಇದಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಸಿಕ್ಕಿಲ್ಲ. ಹಿಂದಿನ ಸಿಎಂ ಸಿದ್ದರಾಮಯ್ಯ ಸಿಎಂ ಸಿದ್ದರಾಮಯ್ಯ ಅವರು 410 ಕೋಟಿ ರೂಪಾಯಿ ಮಾತ್ರ ಅನುದಾನ ನೀಡಿದ್ದರು. ಅದು ಬಾಕಿ ಬಿಲ್ಲುಗಳಿಗೆ ಕರಗಿ ಹೋಯಿತು. ಅನುದಾನದ ಗ್ಯಾರಂಟಿ ಇಲ್ಲದ ಕಾರಣಕ್ಕೆ ಗುತ್ತಿಗೆದಾರರು ಕಾಮಗಾರಿ ಆಸಕ್ತಿ ಕಳೆದುಕೊಂಡಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಹಿಂದಿನ ಸಚಿವ ಡಿ.ಸುಧಾಕರ್, ನಂತರ ಮೇ ತಿಂಗಳಲ್ಲಿ ಎಂಡಿ ಸಣ್ಣಚಿತ್ತಯ್ಯ ಹಾಗೂ ಇದೀಗ ತಾವು ಕಾಮಗಾರಿ ವೀಕ್ಷಣೆ ಮಾಡುತ್ತಿದ್ದೀರ. ವೀಕ್ಷಣೆ ಮಾಡುವ ಕಾರ್ಯ ಆಗುತ್ತಿದೆಯೇ ವಿನಹ ಪ್ರಗತಿ ಕಾಣುತ್ತಿಲ್ಲ. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅದಕ್ಕೆ ಬೇಕಾದ ಅನುದಾನ ಕ್ರೋಡೀಕರಿಸಿಕೊಂಡು ಈ ಸರ್ಕಾರದ ಅವಧಿಯಲ್ಲಿಯೇ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸುವಂತೆ ಹೋರಾಟ ಸಮಿತಿ ಮನವಿ ಮಾಡಿದೆ.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹುಣಿಸೆಕಟ್ಟೆ ಕಾಂತರಾಜ್ , ನಿವೃತ್ತ ಎಸ್ಪಿ ಮಹಾಂತರೆಡ್ಡಿ, ನಿವೃತ್ತ ಡಿವೈಎಸ್ಪಿ ಇಸಾಕ್, ರೈತ ಲಕ್ಷ್ಮಣರೆಡ್ಡಿ ಈ ವೇಳೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುವನಾ ಮನೆಗೆ ಡಿಸಿಎಂ ಪರಮೇಶ್ವರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ
ಬಸವೇಶ್ವರ ಆಂಗ್ಲ ಪ್ರೌಢಶಾಲೆಯಲ್ಲಿ ಅಕ್ಷರಾಭ್ಯಾಸ