ಕನ್ನಡಪ್ರಭ ವಾರ್ತೆ ಜಮಖಂಡಿ
ಹಿಪ್ಪರಗಿ ಗ್ರಾಮದ ನಿವಾಸಿ ಹಾಗೂ ವೈನ್ ಶಾಪ್ ಮಾಲೀಕ ಹನುಮಂತ್ ಅಥಣಿ ಅವರಿಗೆ ಸೇರಿದ ಮಹೀಂದ್ರಾ ಕಾರನ್ನು ಶನಿವಾರ ಸಂಜೆ ಸುಮಾರು 4.30 ಗಂಟೆಗೆ ವೈನ್ ಶಾಪ್ ಮುಂಭಾಗದಲ್ಲಿ ನಿಲ್ಲಿಸಲಾಗಿತ್ತು. ರಾತ್ರಿ ಸುಮಾರು 10.45 ಗಂಟೆಗೆ ಕಾರು ಏಕಾಏಕಿ ಭಾರೀ ಸದ್ದಿನೊಂದಿಗೆ ಸ್ಫೋಟಗೊಂಡು ಮೇಲಕ್ಕೆ ಎಸೆದು ರಸ್ತೆಗೆ ಪಲ್ಟಿಯಾಗಿದ್ದು, ಕಾರಿನ ಬಿಡಿಭಾಗಗಳು ಸುಮಾರು 40 ರಿಂದ 50 ಮೀಟರ್ ದೂರದವರೆಗೆ ಚದುರಿಹೋಗಿದ್ದವು. ಸ್ಫೋಟದ ಸದ್ದು ಕೇಳಿ ಸುತ್ತಮುತ್ತಲಿನ ಜನರು ಬೆಚ್ಚಿಬಿದ್ದಿದ್ದರು. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿ, ಸಿಪಿಐ, ಪಿಎಸ್ಐ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ನಂತರ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯದಳ, ಶ್ವಾನದಳ, ಎಸ್ಒಸಿಒ ಹಾಗೂ ವಿಧಿವಿಜ್ಞಾನ ತಜ್ಞರ ತಂಡವನ್ನು ಸ್ಥಳಕ್ಕೆ ಕರೆಸಿ ವೈಜ್ಞಾನಿಕ ರೀತಿಯಲ್ಲಿ ಪರಿಶೀಲನೆ ನಡೆಸಲಾಯಿತು.
ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ದಾಖಲು:ಎಸ್ಪಿ ಸಿದ್ದಾರ್ಥ ಗೋಯಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾರನ್ನು ಸಂಜೆ 4.30 ಗಂಟೆಗೆ ನಿಲ್ಲಿಸಿದ ಬಳಿಕ ರಾತ್ರಿ 10.45 ಗಂಟೆಗೆ ಸ್ಫೋಟ ಸಂಭವಿಸುವವರೆಗೂ ಅದು ಒಂದೇ ಸ್ಥಳದಲ್ಲಿ ನಿಂತಿತ್ತು. ಆ ಸಂಪೂರ್ಣ ಅವಧಿಯ ದೃಶ್ಯಗಳು ವೈನ್ ಶಾಪ್ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ ಎಂದರು. ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವ್ಯಕ್ತಿ ಕಾರಿನ ಬಳಿ ಬಂದಿರುವುದು ಕಂಡಿಲ್ಲ. ರಾತ್ರಿ ಸುಮಾರು 9.45ರ ವೇಳೆಗೆ ಮೂವರು ಗ್ರಾಹಕರು ಕಾರಿನ ಸಮೀಪ ಬಂದಿದ್ದು, ಅವರನ್ನು ಪರಿಶೀಲಿಸಿದಾಗ ಅವರು ಸಾಮಾನ್ಯ ಗ್ರಾಹಕರಾಗಿರುವುದು ದೃಢಪಟ್ಟಿದೆ. ಇದನ್ನು ಹೊರತುಪಡಿಸಿ ಕಾರಿನ ಬಳಿ ಅನುಮಾನಾಸ್ಪದ ಚಲನವಲನ ಕಂಡುಬಂದಿಲ್ಲ ಎಂದರು.
ಬಾಂಬ್ ಪತ್ತೆ ದಳ, ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿ ಸೂಕ್ಷ್ಮ ಪರಿಶೀಲನೆ ನಡೆಸಿದ್ದು, ಇದುವರೆಗೆ ಯಾವುದೇ ಸ್ಫೋಟಕ ವಸ್ತು, ಸ್ಫೋಟಕದ ಅವಶೇಷ ಅಥವಾ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಿಂದ ಬಾಂಬ್ ವಿಲೇವಾರಿ ದಳವನ್ನು ಕೂಡ ಸ್ಥಳಕ್ಕೆ ಕರೆಸಲಾಗಿದ್ದು, ಅವರು ಸಹ ಪರಿಶೀಲಿಸಿದ್ದಾರೆ. ಎಲ್ಲ ತಜ್ಞರ ಪ್ರಾಥಮಿಕ ಅಭಿಪ್ರಾಯದ ಪ್ರಕಾರ ಸ್ಫೋಟಕ ಬಳಕೆಯ ಸುಳಿವು ಕಂಡುಬಂದಿಲ್ಲ ಎಂದರು.
ಕಾರಿಗೆ ಸಂಭವಿಸಿರುವ ಹಾನಿಯನ್ನು ಪರಿಶೀಲಿಸಿದಾಗ ಅದು 2 ಹಂತಗಳಲ್ಲಿ ಆಗಿರುವ ಸಾಧ್ಯತೆ ಇದೆ. ಮೊದಲಿಗೆ ಸಂಭವಿಸಿದ ಸ್ಫೋಟದಿಂದ ಕಾರಿಗೆ ಹಾನಿಯಾಗಿದ್ದು, ನಂತರ ಕಾರು ಪಲ್ಟಿಯಾದ ಪರಿಣಾಮ ಮತ್ತಷ್ಟು ಹಾನಿಯಾಗಿದೆ. ಈ ಎರಡರ ನಡುವಿನ ವ್ಯತ್ಯಾಸವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ಹಂತದಲ್ಲಿ ಬ್ಯಾಟರಿ, ಎಂಜಿನ್ ಅಥವಾ ಇತರ ತಾಂತ್ರಿಕ ದೋಷದಿಂದ ಈ ಘಟನೆ ಸಂಭವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ತಜ್ಞರು ಹಾಗೂ ಮೆಕ್ಯಾನಿಕಲ್ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಅಂತಿಮ ತಾಂತ್ರಿಕ ವರದಿ ಬಂದ ಬಳಿಕವೇ ಸ್ಫೋಟಕ್ಕೆ ನಿಖರ ಕಾರಣ ತಿಳಿಯಲಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟ ಸಂಭವಿಸಿದ ವೇಳೆ ಬೈಕ್ನಲ್ಲಿ ತೆರಳುತ್ತಿದ್ದ ಒಬ್ಬ ವ್ಯಕ್ತಿಗೆ ಕಾಲಿನ ಭಾಗಕ್ಕೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೈನ್ ಶಾಪ್ ಸಮೀಪ ಇದ್ದ ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ, ಸ್ಫೋಟದ ಪರಿಣಾಮ ಕಾರು ಸಂಪೂರ್ಣ ನಾಶವಾಗಿದ್ದು, ಸಮೀಪದ ಕಟ್ಟಡಗಳ ಗಾಜುಗಳು ಒಡೆದು ಸಣ್ಣ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ನಿಖರ ಕಾರಣ ತಿಳಿಯುವವರೆಗೆ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದ್ದು, ಯಾವುದೇ ವ್ಯಕ್ತಿಯ ಕೈವಾಡ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದರು.
-ಸಿದ್ದಾರ್ಥ ಗೋಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ