ಶಿವಮೊಗ್ಗ: ನಾನ್ ಯುಜಿಸಿ ಅಥಿತಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಮತ್ತು ಕಲ್ಪಿಸುವವರೆಗೂ ಪ್ರತಿ ತಿಂಗಳು ಗೌರವಧನ ನೀಡಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಾನ್ ಯುಜಿಸಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಸಿ.ವೆಂಕಟೇಶ್ ಆಗ್ರಹಿಸಿದರು.
ಡಿಸೆಂಬರ್ 8ನೇ ತಾರೀಖಿನಿಂದ ಕೆಲಸ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಸುಮಾರು 30 ಸಾವಿರ ಜನರಿಗೆ ತೊಂದರೆಯಾಗಿದ್ದು, ಸರ್ಕಾರ ಕೂಡಲೇ ಮಾನವೀಯತೆ ಆಧಾರದಲ್ಲಿ ಜೆಯುಸಿ ಮಾದರಿಯಂತೆ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸಲು 60 ವರ್ಷದವರೆಗೆ ಅವಕಾಶ ಕೊಡಬೇಕು ಒತ್ತಾಯಿಸಿದರು.2025-26ನೇ ಸಾಲಿಗೆ ಹೊರಗುಳಿದ 6600 ನಾನ್ಯುಜಿಸಿ ಅತಿಥಿ ಉಪನ್ಯಾಸಕರಿಗೆ ವಯೋಮಿತಿ ಮೀರಿದ ಕಾರಣ ಬೇರೆ ವಲಯದಲ್ಲಿ ಕೆಲಸ ದೊರೆಯಲು ಸಾಧ್ಯವಿಲ್ಲ. ಆದ್ದರಿಂದ ತಕ್ಷಣ ಅವರ ಕುಟುಂಬ ನಿರ್ವಹಣೆಗೆ ಮತ್ತು ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಅನುಕೂಲ ಮಾಡಿಕೊಡಬೇಕು. ಕಾನೂನಿನ ಅಭಿಪ್ರಾಯ ಪಡೆದು ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್ಎಲ್ಪಿಯನ್ನು ದಾಖಲಿಸಲು ಸರ್ಕಾರ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಅಭಿಪ್ರಾಯ ಬರುವವರೆಗೆ ಅತಿಥಿ ಉಪನ್ಯಾಸಕರ ಕುಟುಂಬಗಳಿಗೆ ಗೌರವಧನ ನೀಡಬೇಕು. ಇತರೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ನೀಡಿ ನಮ್ಮ ಪ್ರತಿಭಟನೆಯಲ್ಲಿ ಮೊಟಕುಗೊಳಿಸಿತ್ತು, ಆದರೆ ಒಂದು ತಿಂಗಳು ಕಳೆದರೂ ಯಾವ ಸಿಹಿ ಸುದ್ಧಿಯನ್ನು ನೀಡಿಲ್ಲ. ಅನಿವಾರ್ಯವಾಗಿ ಜ.19ರಿಂದ ರಾಜ್ಯದ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ತಮ್ಮ ಕುಟುಂಬಗಳೊಂದಿಗೆ ಅನಿರ್ಧಿಷ್ಟಾವಧಿ ಮುಷ್ಕರ ಮಾಡುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ಸರ್ಕಾರ ನಮಗೆ ದಯಾಮರಣ ನೀಡಲಿ ಎಂದು ಹೇಳಿದರು.ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಮುಷ್ಕರಕ್ಕೆ ಅತಿಥಿ ಉಪನ್ಯಾಸಕರು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ನಾಗರಾಜ್, ಸಂಗಯ್ಯ, ಶ್ರೀನಾಥ್ ಶೆಟ್ಟಿ, ಭಾಗ್ಯ ಪಿ.ಗೌಡ ಉಪಸ್ಥಿತರಿದ್ದರು.