-ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಹಿಂಪಡೆಯಲು ಜಿಲ್ಲಾ ರೈತರ ಒಕ್ಕೂಟ ಆಗ್ರಹ
ಭದ್ರಾ ಮೇಲ್ದಂಡೆ ಯೋಜನೆಯ ಪ್ರಾಯೋಗಿಕ ಚಾಲನೆಗೆ ಭದ್ರಾ ಡ್ಯಾಂನಿಂದ 3 ಟಿಎಂಸಿ ನೀರು ಬಿಡುವಂತೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶವನ್ನು ತಕ್ಷಣ ಹಿಂಪಡೆಯಲೆಂದು ಜಿಲ್ಲಾ ರೈತರ ಒಕ್ಕೂಟ ಒತ್ತಾಯಿಸಿದೆ.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ತಾಪಂ ಮಾಜಿ ಉಪಾಧ್ಯಕ್ಷ ಬೇತೂರು ಸಂಗನಗೌಡ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತರ ಶಿವಕುಮಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದ ರೈತರು, ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಹರಿಸುವ ಆದೇಶ ಹಿಂಪಡೆಯುವಂತೆ ಮನವಿ ಮಾಡಿದರು.ಒಕ್ಕೂಟ ಅಧ್ಯಕ್ಷ ಬಿ.ಎಂ.ಸತೀಶ, ಪ್ರಸ್ತುತ ದಾವಣಗೆರೆ ಜಿಲ್ಲೆಯ ರೈತರು ದಿನ ಬೆಳಗಾದರೆ ಮಳೆ ಕೊರತೆಯಿಂದ ಭದ್ರಾ ಡ್ಯಾಂ ತುಂಬಿಲ್ಲ. ಮುಂದೆ ಏನು ಎಬ ಆತಂಕದಲ್ಲಿ ದಿಕ್ಕು ತೋಚದೆ. ತಲೆ ಮೇಲೆ ಕೈಹೊತ್ತು ಕುಳಿತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕ ಚಾಲನೆಗೆ 3 ಟಿಎಂಸಿ ನೀರು ಬಿಡಲು ಆದೇಶಿಸಿರುವುದು ರೈತ ವಿರೋಧಿ ನಿರ್ಧಾರ ಎಂದು ದೂರಿದರು.
ಡ್ಯಾಂ ತುಂಬಲು ಇನ್ನೂ 12 ಟಿಎಂಸಿ ನೀರು ಬೇಕು. ಮಳೆಗಾಲದ ಹಂಗಾಮಿಗೆ ನೀರು ಕೊಡಬೇಕೋ? ಅಥವಾ ನೀರು ಸಂಗ್ರಹ ರಕ್ಷಣೆ ಮಾಡಿಕೊಂಡು ಮುಂದಿನ ಬೇಸಿಗೆ ಹಂಗಾಮಿಗೆ ಕೊಡಬೇಕೋ ಎಂಬ ವಿಚಾರಕ್ಕೆ ರೈತರು ಪರಸ್ಪರ ಬೀದಿಗಿಳಿದು ಸಂಘರ್ಷಿಸುತ್ತಿರುವಾಗ ಕಾಂಗ್ರೆಸ್ ಸರ್ಕಾರದ ಆದೇಶ ರೈತರಿಗೆ ಬರಸಿಡಿಲು ಬಂದು ಅಪ್ಪಳಿಸಿದಂತಾಗಿದೆ. ಭದ್ರಾ ನಮ್ಮ ಜಿಲ್ಲೆಯ ಜೀವನಾಡಿ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ತಾನು ಹೊರಡಿಸಿರುವ ಭದ್ರಾ ಮೇಲ್ದಂಡೆಗೆ 3 ಟಿಎಂಸಿ ನೀರು ಬಿಡಬೇಕು ಎಂಬ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದರೆ ದಾವಣಗೆರೆ ಸೇರಿದಂತೆ ಭದ್ರಾಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳ ಎಲ್ಲಾ ರೈತ ಸಂಘಟನೆಗಳು ರಾಜ್ಯ ಸರ್ಕಾರದ ಆದೇಶದ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಫೋಟೋ
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ರೈತರ ಒಕ್ಕೂಟದಿಂದ ಮನವಿ ಅರ್ಪಿಸಲಾಯಿತು.