ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಚರಂತಿಮಠ ಆವರಣದಲ್ಲಿ ಶನಿವಾರ ನಡೆದ ಸಮಾಜ ಚಿಂತನ ಸಮಾರಂಭದ ಸಾನ್ನಿಧ್ಯ ವಹಿಸಿ ಹಾನಗಲ್ ಕುಮಾರ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಪರಿಕಲ್ಪನೆಯಲ್ಲಿ ನಡೆದರೆ ಧರ್ಮ ರಕ್ಷಣೆಯಾಗುತ್ತದೆ. ವ್ಯಕ್ತಿಯಿಂದ ಸಮಾಜ ನಿರ್ಮಾಣವಾಗುವುದರಿಂದ ನಮ್ಮನ್ನು ನಾವು ಅರ್ಥೈಸಿಕೊಳ್ಳಲು, ವೈಯಕ್ತಿಕ ಸುಧಾರಣೆ ಮಾಡಿಕೊಳ್ಳಬೇಕು. ಇದರಿಂದ ಸಮಾಜ ಸುಧಾರಣೆಯಾಗುತ್ತದ ಎಂದು ಹೇಳಿದರು.ಹೊಸಪೇಟೆಯ ಸಾಹಿತಿಗಳಾದ ಡಾ.ಮೃತ್ಯುಂಜಯ ರುಮಾಲೆ ಅವರು ವೀರಶೈವ ಲಿಂಗಾಯತ ಒಂದೇ ಧರ್ಮದ ಎರಡು ಹೆಸರು ಮತ್ತು ವೀರೇಶ್ವರ-ಲಿಂಗಾಯತ ಮಠಮಾನ್ಯಗಳ ಕುರಿತು ಉಪನ್ಯಾಸ ನೀಡಿ, ಈಚೆಗೆ ವೀರಶೈವ ಮತ್ತು ಲಿಂಗಾಯತ ನಡುವೆ ಹಲವು ಗೊಂದಲ ತಲೆದೋರಿದ್ದು ವಿಷಾದಕರ ಸಂಗತಿ. ಬಸವಾದಿ ಶಿವಶರಣರ ಪೂರ್ವ ಕಾಲದಲ್ಲಿಯೇ ವೀರಶೈವ ಲಿಂಗಾಯತ ಧರ್ಮ ಜನ್ಮತಾಳಿತ್ತು. ಇಷ್ಟಲಿಂಗದಲ್ಲಿ ನಿಷ್ಠೆ ಇಟ್ಟವರು ವೀರಶೈವ ಲಿಂಗಾಯತ ಧರ್ಮದವರು. ಅವರೆಡು ಒಂದೇ ಎನ್ನುವುದಕ್ಕೆ 12ನೇ ಶತಮಾನದ ವಚನಕಾರ ಕೊಂಡುಗೋಡಿ ಕೇಶರಾಜನ ವಚನದಲ್ಲಿ ದಾಖಲೆಗಳು ಕಾಣಸಿಗುತ್ತವೆ. ಇಷ್ಟಲಿಂಗದಲ್ಲಿ ನಿಷ್ಠೆ ಇಟ್ಟು ಪೂಜಿಸುವವರು ವೀರಶೈವ ಲಿಂಗಾಯತರು. ಅವೆರೆಡೂ ಒಂದೇ ಎಂದು ಜೇಡರ ದಾಸಿಮಯ್ಯ, ಬಸವಣ್ಣ, ಚನ್ನಬಸವಣ್ಣ, ಯಡಿಯೂರು ಸಿದ್ಧಲಿಂಗ ಅವರು ತಮ್ಮ ವಚನಗಳಲ್ಲಿ ವಿವರಣಾತ್ಮಕವಾಗಿ ಬಣ್ಣಿಸಿದ್ದಾರೆ. ಬಹುತೇಕ ವಚನಗಳಲ್ಲಿ ಲಿಂಗಾಯತ, ಲಿಂಗಸ್ವಾಯತ, ಲಿಂಗಸನ್ನಿಹಿತಗಳಿದ್ದು, ಅವುಗಳನ್ನು ಜೀವನದಲ್ಲಿ ಅನುಸಂಧಾನ ಮಾಡಿಕೊಳ್ಳುವುದು ವೀರಶೈವ ಲಿಂಗಾಯತವಾಗಿದ್ದು, ಎರಡೂ ಪ್ರತ್ಯೇಕವಾಗಲು ಸಾಧ್ಯವಿಲ್ಲ ಎಂದರು.
ಬಿವಿವಿ ಸಂಘದ ಆಡಳಿತಾಧಿಕಾರಿಗಳು, ಸಾಹಿತಗಳಾದ ಡಾ.ವಿಜಯಕುಮಾರ ಎಸ್. ಕಟಗಿಗಳ್ಳಿಮಠ ವೀರಶೈವ-ಲಿಂಗಾಯತ ಶಿಕ್ಷಣ ಸಂಸ್ಥೆಗಳ ಉಪನ್ಯಾಸದಲ್ಲಿ ಪ್ರಾಚೀನದಿಂದ ಗುರುಕುಲ ಪದ್ದತಿಯಿಂದ ಭಾರತ ವಿದ್ಯಾಪರಂಪರೆ ಮುನ್ನಡಿಸುಕೊಂಡು ಬಂದಿದ್ದು, ವೀರಶೈವ ಲಿಂಗಾಯತ ಮಠಗಳೊಂದಿಗೆ ಶಿಕ್ಷಣ ಸಂಸ್ಥೆಗಳು ಬೆಳದು ಬಂದಿವೆ. ಇಡೀ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಯನ್ನು ಶ್ರೀಮಂತಗೊಳಿಸಿದವರು ವೀರಶೈವ ಲಿಂಗಾಯತ ಸಮುದಾಯದವರು. ಇತಿಹಾಸದುದ್ದಕ್ಕೂ ಸಂಕಷ್ಟಗಳನ್ನು ಎದುರಿಸಿದ ವೀರಶೈವ ಧರ್ಮ ಆಂಗ್ಲೋ-ಮೈಸೂರು ಯುದ್ಧಗಳ ನಂತರ ವೀರಶೈವ ಅರಸು ಮನೆತನಗಳು ಹಂಚಿಹೋದವು. ಈ ಸಂದರ್ಭದಲ್ಲಿ ಮಠಮಾನ್ಯಗಳು ಮುನ್ನೆಲೆಗೆ ಬಂದು ಶಿಕ್ಷಣಸೇವಾ ಕಾರ್ಯದಲ್ಲಿ ತೊಡಗಿ ಕನ್ನಡ ಶಾಲೆ ಆರಂಭಿಸಿದವು ಎನ್ನುವುದು ಇತಿಹಾಸವಾಗಿದೆ, ದಕ್ಷಿಣ ಭಾರತದಲ್ಲಿಯೇ ಗ್ರಾಮೀಣ ಭಾಗದಲ್ಲಿ ಪದವಿ ಶಿಕ್ಷಣದ ಮಹಾವಿದ್ಯಾಲಯವನ್ನು ಬಾಗಲಕೋಟೆಯಲ್ಲಿ ಪ್ರಾರಂಭಿಸಿದ ಕೀರ್ತಿವೀರಶೈವ ಲಿಂಗಾಯತ ಧರ್ಮಕ್ಕೆ ಸಲ್ಲುತ್ತದೆ ಎಂದು ಹೇಳಿದರು.ವೇದಿಕೆ ಮೇಲೆ ಕಡಕೋಳದ ಕುಮಾರೇಶ್ವರ ವಿರಕ್ತಮಠದ ಸಚ್ಚಿದಾನಂದ ಸ್ವಾಮೀಜಿ, ಕೆರೂರಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿಯ ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡ ಒಪ್ಪತ್ತೇಶ್ವರಮಠದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಜಮಖಂಡಿಯ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುಳೇದಗುಡ್ಡದ ಅಮರೇಶ್ವರಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಸಂಸದರಾದ ಪಿ.ಸಿ. ಗದ್ದಿಗೌಡರ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ ,ಅರುಣ ಶಾಹಪುರ, ಹೂವಪ್ಪ ರಾಠೋಡ, ಮಾಜಿ ಶಾಸಕರಾದ ರಾಜಶೇಖರ ಶಿಲವಂತರ, ಗೌರವ ಕಾರ್ಯದರ್ಶಿಗಳಾದ ಮಹೇಶ ಎ.ಅಥಣಿ, ಶಿವಲಿಂಗಪ್ಪ ಮೊರಬದ, ಮಹೇಶ ಅಂಗಡಿ, ಶುಭಾಷ ಜಿಗಜಿನ್ನಿ, ಶರಣಪ್ಪ ರುದ್ರಾಕ್ಷಿ, ಎಸ್.ವಿ. ಗೌಡರ, ಸುರೇಶಬಾಬು ನಿಡಗುಂದಿ, ಚನ್ನಯ್ಯಾ ಬಳೂಲಮಠ ಸೇರಿದಂತೆ ಇತರರು ಇದ್ದರು.
ಆಯ್ಯಾಚಾರ ಹಾಗೂ ಲಿಂಗದೀಕ್ಷೆ:ಟೀಕಿನಮಠದ ನೂತನ ಪೂಜ್ಯರ ಪಟ್ಟಾಧೀಕಾರ ಮಹೋತ್ಸವದ ಸಮಾರಂಭ ನಿಮಿತ್ತ ಶನಿವಾರ ಬೆಳಗಿನ ಜಾವ ಟೀಕಿನಮಠದಲ್ಲಿ ಕೆರೂರ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ 14 ಜನ ವಟುಗಳಿಗೆ ಆಯ್ಯಾಚಾರ ಲಿಂಗದೀಕ್ಷೆ ಜರುಗಿತು.