ಸರ್ಕಾರಿ ಕೆಲಸ ಸಿಗದಿರುವುದೇ ನಿರುದ್ಯೋಗ ಎಂದು ಭಾವಿಸಲಾಗಿದೆ: ಪ್ರೊ. ಕೃಷ್ಣೇಗೌಡ

KannadaprabhaNewsNetwork |  
Published : Apr 23, 2026, 01:15 AM IST
4 | Kannada Prabha

ಸಾರಾಂಶ

ದುಡಿಯಲು ಯಾರು ಸಿದ್ಧರಿಲ್ಲ. ಕೌಶಲ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಟ್ಟು ಕೆಲಸ ಕೊಟ್ಟರೂ ಯುವ ಸಮೂಹ ಮಾಡುತ್ತಿಲ್ಲ. ಪೀಣ್ಯದ 10 ಸಾವಿರ ಕೈಗಾರಿಕೆಗಳಲ್ಲಿ 7 ಸಾವಿರ ಕೈಗಾರಿಕೆಗಳು ಕೆಲಸ ಕಲಿತು ಸ್ವಂತಕ್ಕೆ ತೆರೆದಿರುವ ಕೈಗಾರಿಕೆಗಳಾಗಿವೆ. ಅಲ್ಲಿ 10 ರಿಂದ 12 ಲಕ್ಷ ಉದ್ಯೋಗ ಖಾಲಿ ಇದೆ. ಆದರೆ ಅರ್ಜಿ ಹಾಕಲು ನಮ್ಮ ಯುವಜನ ತಯಾರಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎನ್ನುವುದು ಸತ್ಯ ಅಲ್ಲ. ಸರ್ಕಾರಿ ಕೆಲಸ ಸಿಗದೆ ಇರುವುದನ್ನೇ ನಿರುದ್ಯೋಗ ಎಂದು ಭಾವಿಸಿಕೊಳ್ಳುತ್ತಿದ್ದಾರೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.

ನಗರದ ಯುವರಾಜ ಕಾಲೇಜಿನ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಜ್ಞಾನವಾಹಿನಿ ಸಾಂಸ್ಕೃತಿ, ಕ್ರೀಡೆ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದುಡಿಯಲು ಯಾರು ಸಿದ್ಧರಿಲ್ಲ. ಕೌಶಲ್ಯ ತರಬೇತಿ ಕೇಂದ್ರದಲ್ಲಿ ತರಬೇತಿ ಕೊಟ್ಟು ಕೆಲಸ ಕೊಟ್ಟರೂ ಯುವ ಸಮೂಹ ಮಾಡುತ್ತಿಲ್ಲ. ಪೀಣ್ಯದ 10 ಸಾವಿರ ಕೈಗಾರಿಕೆಗಳಲ್ಲಿ 7 ಸಾವಿರ ಕೈಗಾರಿಕೆಗಳು ಕೆಲಸ ಕಲಿತು ಸ್ವಂತಕ್ಕೆ ತೆರೆದಿರುವ ಕೈಗಾರಿಕೆಗಳಾಗಿವೆ. ಅಲ್ಲಿ 10 ರಿಂದ 12 ಲಕ್ಷ ಉದ್ಯೋಗ ಖಾಲಿ ಇದೆ. ಆದರೆ ಅರ್ಜಿ ಹಾಕಲು ನಮ್ಮ ಯುವಜನ ತಯಾರಿಲ್ಲ ಎಂದರು.

ಇತ್ತೀಚಿನ ಯುವ ಸಮೂಹದಲ್ಲಿ ಸೋಮಾರಿತನ, ಆಲಸ್ಯವಿದೆ. ಸ್ಪಷ್ಟವಾದ ಗುರಿ ಹಾಗೂ ಕೌಶಲ್ಯ ಕಾಣುತ್ತಿಲ್ಲ. ಇದು ದೇಶದ ಪ್ರಗತಿಗೆ ಮಾರಕ. ಕೌಶಲ್ಯ ತಬೇತಿ ಕೇಂದ್ರದಿಂದ ಸ್ಟೇಫಂಡ್ ಕೊಟ್ಟು ಕೆಲಸ ಕೊಡುತ್ತೇವೆ ಎಂದು ಕರೆದಾಗ ರಾಜ್ಯಾದ್ಯಂತ ಕೇವಲ 1,450 ಮಂದಿ ಮಾತ್ರ ಅರ್ಜಿ ಹಾಕಿದರು. ಆದರೆ, ಅದರಲ್ಲಿ 412 ಮಂದಿ ಮಾತ್ರ ಬಂದರು. ಆದರೆ, ಸರ್ಕಾರ ನಿರುದ್ಯೋಗಿ ಪದವೀಧರರಿಗೆ 3 ಸಾವಿರ ಕೊಡುತ್ತೇವೆ ಎಂದಾಗ ಅದಕ್ಕೆ ಅರ್ಜಿ ಹಾಕಿದ್ದು 2 ಲಕ್ಷಕ್ಕೂ ಅಧಿಕ ಮಂದಿ ಎಂದು ಬೇಸರಿಸಿದರು.

ನೀವು ಹೇಗೆ ಆಲೋಚಿಸುತ್ತಿರೋ ಹಾಗೆ ಬದುಕಿ ಇಲ್ಲವಾದರೆ ಕಾಲಾಂತರದಲ್ಲಿ ನೀವು ಹೇಗೆ ಬದುಕಿದ್ದಿರೋ ಹಾಗೆ ಆಲೋಚಿಸುತ್ತೀರಿ. ಅಮೇರಿಕಾ ಸಂಪತ್ತು ಭರಿತ ರಾಷ್ಟ್ರ. ಜಗತ್ತಿನ ದೊಡ್ಡಣನಂತೆ ನಡೆದುಕೊಳ್ಳುತ್ತಿದೆ. ಕರ್ನಾಟಕ ರಾಜ್ಯದಷ್ಟೆ ಇರುವ ಕೇವಲ 3 ಕೋಟಿ ಜನಸಂಖ್ಯೆ ಹೊಂದಿದ್ದ ಇಂಗ್ಲೆಂಡ್ ಪ್ರಪಂಚದ ಶೇ. 60ರಷ್ಟು ಭೂ ಭಾಗವನ್ನು ಆಳಿದೆ ಎಂದರು.

ವಿಕೇಂಡ್ ಕಲ್ಚರ್ ನಮ್ಮಲ್ಲಿ ಈಗ ಶುರುವಾಗಿದೆ. ಆದರೆ, ಅಮೆರಿಕಾದಲ್ಲಿ ಬಹಳ ಹಿಂದಿನ ಕಾಲದಿಂದಲೇ ಶುರುವಾಗಿದೆ. ಸಮುದ್ರದ ತೀರಗಳಲ್ಲಿ ಕುಳಿತುಕೊಂಡು ಕುಡಿಯುವುದು, ಡ್ರಗ್ಸ್ ತೆಗೆದುಕೊಳ್ಳುವುದು ಸೇರಿದಂತೆ ಅನೇಕ ಅಕ್ರಮ ಕೆಲಸಗಳಲ್ಲಿ ತೊಡಗಿದ್ದಾರೆ ಎಂದರು.

ಅಮೆರಿಕಾದ ಅತಿ ಶ್ರೀಮಂತಿಕೆಯಿಂದ ಅಲ್ಲಿನ ಯುವಕರ ಬದಲಾವಣೆಯಿಂದ ಒಂದು ತಲೆಮಾರು ನಾಶವಾಯಿತು. ಈ ಸಂದರ್ಭದಲ್ಲೇ ಭಾರತದಿಂದ, ಚೀನಾದಿಂದ, ಯೂರೋಪ್ ದೇಶಗಳಿಂದ ಅಮೆರಿಕಾಕ್ಕೆ ವಲಸೆ ಹೋದರು. ಅವರಿಗೆ ಅಗತ್ಯ ಮೂಲಸೌಕರ್ಯ ನೀಡುವುದರ ಜತೆಗೆ ಅವರು ಕೇಳಿದಷ್ಟು ವೇತನ ಕೊಟ್ಟು ಅಮೇರಿಕ ಪೋಷಿಸಿ ಬೆಳೆಸಿ ತನ್ನಲ್ಲೇ ಉಳಿಸಿಕೊಂಡಿತು ಎಂದು ಹೇಳಿದರು.

ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹಾದೇವಮೂರ್ತಿ, ಆಡಳಿತಾಧಿಕಾರಿ ಪ್ರೊ. ಎಚ್.ಎಸ್. ಜಯಂತ್, ಪ್ರೊ. ರೂಬಿ ಸ್ಟೆಲೆಸಿನ, ಪ್ರೊ.ಸಿ.ಡಿ. ಪರಶುರಾಮ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಫೇಸಿ ಕಾಯ್ದೆ ಕುರಿತು ದಿನಕ್ಕೊಂದು ಸುಳ್ಳು: ಆಕ್ರೋಶ
ಸಿಇಟಿ: ನಗರದ 8 ಕೇಂದ್ರಗಳಲ್ಲಿ ಇಂದು ಪರೀಕ್ಷೆ