ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ

KannadaprabhaNewsNetwork |  
Published : Oct 29, 2025, 01:45 AM IST
ಕೊಟ್ಟೂರಿನಲ್ಲಿ  ನಡೆದ ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯತೋತ್ಸವವನ್ನು ಜಿಪಂ ಮಾಜಿ ಸದಸ್ಯ ಉದ್ಟಾಟಿಸಿದರು ಜಗದ್ಗುರು ರಾಜನಹಳ್ಳಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಮತ್ತಿತರರು ಇದ್ದರು  | Kannada Prabha

ಸಾರಾಂಶ

ಕೆಳವರ್ಗದವರನ್ನು ಸಮಾನತೆಯಲ್ಲಿ ಕಾಣಲು ಹಿಂದೇಟು ಹಾಕುವ ಸಮಾಜ ವಾಲ್ಮೀಕಿಯಂತಹ ಮಹರ್ಷಿಗಳನ್ನು ಈ ರೀತಿ ಬಳಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ

ಕೊಟ್ಟೂರು: ಶ್ರೀರಾಮಚಂದ್ರನನ್ನು ದೇವರು ಎಂದು ಪೂಜಿಸಿ ದೇವಾಲಯವನ್ನು ಕಟ್ಟಿದ ಸಮಾಜ ರಾಮಾಯಣದ ಬೃಹತ್ ಗ್ರಂಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರನ್ನು ದೇವರೆಂದು ಒಪ್ಪಿಕೊಳ್ಳಲು ಮುಂದಾಗದಿರುವುದು ದೊಡ್ಡ ದುರಂತ ಎಂದು ಬಳ್ಳಾರಿ ವಿಎಸ್ ಕೆಎ ಅಸಿಸ್ಟೆಂಟ್ ರಿಜಿಸ್ಟರ್ ಡಾ.ಗೋಪಾಲ ಎನ್. ಖೇದ ವ್ಯಕ್ತಪಡಿಸಿದರು.ಪಟ್ಟಣದ ಚಿರಿಬಿ ರಸ್ತೆಯ ಗದ್ದುಗೆಮಠದ ಆವರಣದಲ್ಲಿ ವಾಲ್ಮೀಕಿ ನವ ಯುವಕ ಸಮಾಜದ ಸೇವ ಸಂಘ ಮಂಗಳವಾರ ಆಯೋಜಿಸಿದ್ದ ಕೊಟ್ಟೂರು ತಾಲೂಕು ಮಟ್ಟದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಕೆಳವರ್ಗದವರನ್ನು ಸಮಾನತೆಯಲ್ಲಿ ಕಾಣಲು ಹಿಂದೇಟು ಹಾಕುವ ಸಮಾಜ ವಾಲ್ಮೀಕಿಯಂತಹ ಮಹರ್ಷಿಗಳನ್ನು ಈ ರೀತಿ ಬಳಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದ ಅವರು, ಜಾತಿ ಸಂಘಟನೆ ಬಡ ಮತ್ತು ಹಿಂದುಳಿದವರ ಸೌಲಭ್ಯ ಉಪಯೋಗಗಳನ್ನು ಪಡೆಯುವುದಕ್ಕೆ ಬೇಕೇ ಹೊರತು ಇನ್ನೊಂದು ಜಾತಿಯನ್ನು ದ್ವೇಷಿಸಲು ಸಂಘಟನೆಗಳು ಹುಟ್ಟಿಕೊಳ್ಳಬಾರದು ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಶ್ರೀ, ನೀತಿ ನಿಲುವುಗಳ ಕಾರಣಕ್ಕಾಗಿ ಜಾತಿ ಶ್ರೇಷ್ಠವಾಗಿರಬೇಕು. ಜಾತಿ ಹೆಸರಿನಲ್ಲಿ ಅಸಮಾನತೆ ಮತ್ತು ಮೌಢ್ಯತೆ ಬೆಳೆಸಿಕೊಳ್ಳಲು ಬಳಸಿಕೊಳ್ಳಬಾರದು ಎಂದರು.

ಮನುಷ್ಯ ಸಂಬಂಧಗಳು ಇತ್ತೀಚೆಗೆ ಕೇವಲ ಕಾರಣಕ್ಕಾಗಿ ದೂರಾಗುತ್ತಿವೆ. ಪ್ರತಿ ಸಂಬಂಧಗಳು ಸಡಿಲವಾಗದೇ ಗಟ್ಟಿಯಾಗಿರಬೇಕು. ಲೋಕ ಕಲ್ಯಾಣಾರ್ಥ ಮತ್ತು ಸರ್ವರಲ್ಲಿ ಮಾನವೀಯ ಉತ್ತಮ ಗುಣಗಳು ಮೈಗೂಡಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಮಹರ್ಷಿ ವಾಲ್ಮೀಕಿ ರಾಮಾಯಣದಂತಹ ಬೃಹತ್ ಗ್ರಂಥ ಬರೆದರು ಎಂದರು.

ವಾಲ್ಮೀಕಿ ಜನಾಂಗದ ಯುವಕರು ಕುಡಿತದಿಂದ ದೂರ ಸರಿದು ರಚನಾತ್ಮಕ ಸಮಾಜಮುಖಿ ಕಾರ್ಯದತ್ತ ಸದಾ ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ್ ಮಾತನಾಡಿ, ಕೊಟ್ಟೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹರಿಜನ ಸೇರಿದಂತೆ ಸಮಾಜದ ಎಲ್ಲ ಜಾತಿಯವರು ಭಾಗವಹಿಸಿ ಪರಸ್ಪರ ಅನ್ಯೋನ್ಯತೆ ಮೆರೆದಿರುವುದು ಸಮಾಜಕ್ಕೆ ಮಾದರಿ ಸಂದೇಶವಾಗಿದೆ ಎಂದರು.

ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ಯೋಗಿರಾಜೇಂದ್ರ ಶಿವಾಚಾರ್ಯರು, ಬಿಎಸ್‌ ಎಸ್ ಮುಖಂಡ ಬಿ.ಮರಿಸ್ವಾಮಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ.ದಾರುಕೇಶ್, ವಾಲ್ಮೀಕಿ ಸಮಾಜದ ಸೂರ್ಯ ಪಾಪಣ್ಣ ಮಾತನಾಡಿದರು.

ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಕೂಡ್ಲಿಗಿ ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ಬದ್ದಿ ರೇಖಾ ರಮೇಶ್ ಉಪಾಧ್ಯಕ್ಷ ಜಿ.ಸಿದ್ದಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಿನಮ್ಮ ವಿರೂಪಾಕ್ಷ, ಪಪಂ ಸದಸ್ಯರಾದ ಟಿ.ರಾಮಣ್ಣ, ಕೆಂಗ್ಗರಾಜ್, ಪಂಚಮಸಾಲಿ ಸಮಾದ ಅಧ್ಯಕ್ಷ ಚಾಪೆ ಚಂದ್ರಪ್ಪ, ಪಪಂ ಮುಖ್ಯಾಧಿಕಾರಿ ಎ.ನಸುರುಲ್ಲಾ, ಎಪಿಎಂಸಿ ಮಾಜಿ ಅಧ್ಯಕ್ಷ , ಬೂದಿ ಶಿವಕುಮಾರ್, ವಾಲ್ಮೀಕಿ ಸಮಾಜದ ಡಾ ಎಚ್.ಕೊಟ್ರೇಶ್, ಬಿ.ಪಿ. ತಿಪ್ಪೇಸ್ವಾಮಿ, ಬೆಣ್ಣೆಹಳ್ಳಿ ಅಂಜಿನಪ್ಪ, ಬಿಆರ್ ವಿಕ್ರಮ್, ಶ್ರೀನಿವಾಸ್ ಬುಲ್, ಉಜ್ಜಿನಿ ರುದ್ರಪ್ಪ, ಸೆರಗಾರ ಅಂಜಿನಪ್ಪ, ಮೂಗಪ್ಪ ಇದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ವಿ.ಕೆಂಚಮ್ಮ, ರಾಜೋತ್ಸವ ಪ್ರಶಸ್ತಿ ವಿಜೀತ ಉಚ್ಚೆಂಗಪ್ಪ, ಡಾ.ಎಚ್.ಕೊಟ್ರೇಶ್, ಕನ್ನಾಕಟ್ಟಿ ಕೆಂಚಪ್ಪ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕ ಮತ್ತಿಹಳ್ಳಿ ನಾಗರಾಜ್ ಸ್ವಾಗತಿಸಿದರು. ಮತ್ತೊಬ್ಬ ಶಿಕ್ಷಕ ಜಾತಪ್ಪ ವಂದಿಸಿದರು. ಶಿಕ್ಷಕ ರವೀಂದ್ರ ನಿರೂಪಿಸಿದರು.

PREV

Recommended Stories

ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ
ಜನಸಾಗರದ ಮಧ್ಯೆ ತಾಯವ್ವ ದೇವಸ್ಥಾನ ರಥೋತ್ಸವ