ಕನ್ನಡಪ್ರಭ ವಾರ್ತೆ ಮಂಗಳೂರು
ನೆಲ, ಜಲ ಬಳಿಕ ಈಗ ವಾಯು ಮಾರ್ಗ ಮೂಲಕ ವಿದೇಶದಿಂದ ಭಾರತಕ್ಕೆ ಅಕ್ರಮವಾಗಿ ಅವ್ಯಾಹತವಾಗಿ ಕಳಪೆ ಗುಣಮಟ್ಟದ ಅಡಕೆ ಪ್ರವೇಶವಾಗುತ್ತಿರುವ ಬಗ್ಗೆ ಕರ್ನಾಟಕ-ಕೇರಳ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಗಂಭೀರ ಆರೋಪ ಮಾಡಿದೆ.ಇದರಿಂದ ದೇಶದ ಆರ್ಥಿಕತೆಗೆ ತೀವ್ರ ಹೊಡೆತ ಬೀಳುತ್ತಿದ್ದು, ಮಾತ್ರವಲ್ಲ ಅಡಕೆ ಬೆಳೆಗಾರರೂ ಧಾರಣೆ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಗಡಿ ಮೂಲಕ ಭಾರತಕ್ಕೆ ಅಕ್ರಮವಾಗಿ ಅಡಕೆ ಪ್ರವೇಶ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಶುಕ್ರವಾರ ಪತ್ರ ಬರೆದು ಒತ್ತಾಯಿಸಿದೆ.
ಈ ವಿಷಯದಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯ ಮಧ್ಯಪ್ರವೇಶಿಸಲು ನಿರ್ದೇಶನ ನೀಡಬೇಕು. ಭಾರತಕ್ಕೆ ತೆರಿಗೆ ವಂಚಿಸಿ ಅಡಕೆ ಅಕ್ರಮ ಪ್ರವೇಶ ತಡೆಗೆ ಹಾಗೂ ಅಡಕೆ ಬೆಳೆಗಾರರ ಹಿತ ಕಾಪಾಡುವ ಸಲುವಾಗಿ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ಪ್ರಧಾನಿಗೆ ಬರೆದ ಪತ್ರದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ವಿನಂತಿಸಿದ್ದಾರೆ.ವಾಯು ಮಾರ್ಗ ಮೂಲಕವೂ ಅಡಕೆ ಕಳ್ಳ ಸಾಗಣೆ!:
ಪ್ರಸಕ್ತ ವಿದೇಶದಿಂದ ಗಡಿ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸುವ ಅಡಕೆಯನ್ನು ಗಡಿ ಭಾಗದ ವಿಮಾನ ನಿಲ್ದಾಣಗಳ ಮೂಲಕ ದೇಶೀಯ ಮಾರುಕಟ್ಟೆಗೆ ತರಲಾಗುತ್ತಿದೆ. ತಮು ಗಡಿ ಮತ್ತು ಸಿಲ್ಚಾರ್ ಗಡಿ ಮೂಲಕ ಅಕ್ರಮವಾಗಿ ಒಳಗೆ ತಂದು ನಂತರ ಇಂಫಾಲ್, ದಿಮಾಪುರ್, ಕೋಲ್ಕತ್ತಾ ಮತ್ತು ಅಗರ್ತಲಾ ವಿಮಾನ ನಿಲ್ದಾಣಗಳಲ್ಲಿ ಲೋಡಿಂಗ್ ಪಾಯಿಂಟ್ಗಳಿಗೆ ಕಳುಹಿಸಲಾಗುತ್ತದೆ. ಬೆಂಗಳೂರು, ಹೈದರಾಬಾದ್, ನಾಗ್ಪುರ ಮತ್ತು ಅಹಮದಾಬಾದ್ಗಳಲ್ಲಿ ಕಾರ್ಗೋ ಏಜಂಟರು ಈ ಅಡಕೆಯನ್ನು ಸ್ವೀಕರಿಸುತ್ತಾರೆ. ಪ್ರತಿ ಕೇಜಿಗೆ 200 ರು. ಶುಲ್ಕ ವಿಧಿಸುತ್ತಿದ್ದು, ಪ್ರತಿ ಪಾರ್ಸೆಲ್ನಲ್ಲಿ ಸರಿಸುಮಾರು 30 ಕೇಜಿ ಅಡಕೆ ಇರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಬಂದರುಗಳಲ್ಲಿ ಅಕ್ರಮ ಪ್ಯಾಕೆಟ್: ಬಂದರುಗಳ ಮೂಲಕ ಅಡಕೆಯುಳ್ಳ ಸರಕಿನ ಹೆಸರನ್ನು ತಪ್ಪಾಗಿ ಹೇಳಿ ಆಮದು ಮಾಡಿಕೊಳ್ಳಲಾಗುತ್ತದೆ. ಹೆಚ್ಚಾಗಿ ಕಚ್ಚಾ ಗೋಡಂಬಿ ಹೆಸರಿನಲ್ಲಿ ಆಹಾರ ವಸ್ತುಗಳ ಪ್ಯಾಕೆಟ್ ಹಾಗೂ ಬಿಲ್ನಲ್ಲಿ ಸುಲಭದಲ್ಲಿ ಆಮದು ಮಾಡುತ್ತಾರೆ. ವಾಸ್ತವದಲ್ಲಿ ಅದು ಗೋಡಂಬಿಯಾಗಿರದೆ ಅಡಕೆ ಆಗಿರುತ್ತದೆ. ಮುಂದ್ರಾ, ತುಗಕಾಬಾದ್ ಐಸಿಡಿ ಮತ್ತು ಚೆನ್ನೈ ಬಂದರುಗಳಲ್ಲಿ ಈ ವಂಚನೆ ನಡೆಯುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ. ಆಮದುದಾರರು ಸುಂಕ ರಹಿತ ಅಥವಾ ಕಡಿಮೆ ಜಿಎಸ್ಟಿಯ ಲಾಭ ಪಡೆದು ಆಹಾರ ವಸ್ತು ಹೆಸರಿನಲ್ಲಿ ಅಡಕೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ದೇಶಗಳ ಇಂತಹ ಸರಕನ್ನು ಮೊದಲು ಶ್ರೀಲಂಕಾ ಅಥವಾ ಬಾಂಗ್ಲಾದೇಶಕ್ಕೆ ಕಳುಹಿಸುತ್ತಾರೆ, ಅಲ್ಲಿಂದ ಭಾರತಕ್ಕೆಕಳ್ಳಸಾಗಣೆ ಮಾಡುತ್ತಾರೆ ಎಂದು ಪತ್ರದಲ್ಲಿ ವಿಶದಪಡಿಸಲಾಗಿದೆ.
ಗಡಿ ಭಾಗಗಳಲ್ಲಿ ಅಕ್ರಮ ಪ್ರವೇಶ:ಭಾರತದ ಗಡಿಭಾಗಗಳಾದ ಚಂಪೈ (ಬರ್ಮಾ-ಮಿಜೋರಾಂ ಗಡಿ) ಬೈರಾಂಡಿಯಿಂದ (ಮಿಜೋರಾಂ-ಅಸ್ಸಾಂ ಗಡಿ) ಗುವಾಹಟಿಯಿಂದ ದೆಹಲಿ, ಕಾನ್ಪುರ ಮತ್ತು ಮೋರ್ (ಬರ್ಮಾ-ಮಣಿಪುರ ಗಡಿ) ದಿಮಾಪುರ್, ನಾಗಾಲ್ಯಾಂಡ್, ಗುವಾಹಟಿ ಮತ್ತು ಉತ್ತರ ಭಾರತಕ್ಕೆ ವಿವಿಧ ಗಡಿ ಮಾರ್ಗಗಳ ಮೂಲಕ ಅಡಕೆ ಅಕ್ರಮವಾಗಿ ಆಮದಾಗುತ್ತಿದೆ. ಮುಖ್ಯವಾಗಿ ಇಂಫಾಲ್, ಅಗರ್ತಲಾ ಮತ್ತು ಗುವಾಹಟಿಯಿಂದ ಪ್ರತಿದಿನ 10 ಟನ್ಗಳಷ್ಟು ಸರಕು ಅಕ್ರಮ ಭಾರತ ಪ್ರವೇಶಿಸುತ್ತಿರುವ ಬಗ್ಗೆ ಪತ್ರದಲ್ಲಿ ಹೇಳಲಾಗಿದೆ.