ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬ ಆಚರಣೆಗೆ ಸೂಚನೆ

KannadaprabhaNewsNetwork | Published : Jun 5, 2025 1:39 AM
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಸೌಹಾರ್ದ ಸಭೆಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಮುಂಬರಲಿರುವ ಬಕ್ರೀದ್ ಹಬ್ಬವನ್ನು ಈ ಹಿಂದಿನಂತೆಯೇ ಶಾಂತಿ ಸೌಹಾರ್ದತೆಯಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಡೆದ ಜಿಲ್ಲಾಮಟ್ಟದ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಸಾಮರಸ್ಯದಿಂದ ಎಲ್ಲ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶಾಂತಿ ಸಹಬಾಳ್ವೆಯಿಮದ ಜಿಲ್ಲೆಯ ಜನರು ಬದುಕುತ್ತಿದ್ದಾರೆ. ಈ ಬಾರಿಯೂ ಸಹ ಈ ಹಿಂದೆ ನಡೆದುಕೊಂಡ ಬಂದ ಮಾದರಿಯಲ್ಲಿಯೇ ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಹಬ್ಬದ ಆಚರಣೆಯಾಗಲಿ ಇದಕ್ಕಾಗಿ ಸರ್ವರು ಸಹಕರಿಸಲಿದ್ದಾರೆ ಎಂದರು.

ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು, ಸ್ವಚ್ಛತೆ, ತ್ಯಾಜ್ಯಗಳ ನಿರ್ವಹಣೆ, ನಿರಂತರ ವಿದ್ಯುತ್, ಇನ್ನಿತರ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಒಳ್ಳೆಯ ವಾತಾವರಣದಲ್ಲಿ ಹಬ್ಬ ಆಚರಣೆಯಾಗಲಿ ಎಂದು ಹೇಳಿದರು. ಎಸ್ಪಿ ಡಾ.ಕವಿತಾ ಮಾತನಾಡಿ ಜಿಲ್ಲೆಯಲ್ಲಿ ಎಲ್ಲರೂ ಸಹೋದರರಂತೆ ಇದ್ದಾರೆ. ಶಾಂತಿಯುತವಾಗಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ಮಾದರಿಯಲ್ಲಿ ಈ ಬಾರಿಯೂ ಬಕ್ರೀದ್ ಹಬ್ಬ ಸಾಂಗವಾಗಿ ನಡೆಯಲಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಬಂದೋ ಬಸ್ತ್ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಜಿಲ್ಲೆಯಲ್ಲಿ ಅಣ್ಣ ತಮ್ಮಂದಿರಂತೆ ಪರಸ್ಪರ ಎಲ್ಲರು ಇದ್ದೇವೆ. ಬಕ್ರೀದ್ ಹಬ್ಬವನ್ನು ಸಾಮರಸ್ಯದಿಂದ ಆಚರಿಸಲಾಗುತ್ತಿದೆ. ಎಲ್ಲರು ಸಹಕರಿಸುತ್ತಿದ್ದಾರೆ. ಹಬ್ಬದ ವೇಳೆ ಸ್ವಚ್ಛತೆ, ಕುಡಿಯುವ ನೀರು ಮತ್ತಿತ್ತರ ಸೌಲಭ್ಯಗಳು ಸಮರ್ಪಕವಾಗಿ ಒದಗಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿವಿಧ ಕೋಮಿನ ಮುಖಂಡರು ಮಾತನಾಡಿ ಹಬ್ಬದ ಸಂದರ್ಭದಲ್ಲಿ ಈ ಹಿಂದೆಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸೌಹಾರ್ದತೆಯಿಂದ ಹಬ್ಬ ಆಚರಣೆಗೆ ಪರಸ್ಪರ ಸಹಕಾರ ನೀಡಲಾಗುತ್ತಿದೆ. ಈ ಉತ್ತಮ ಬಾಂಧವ್ಯ ನಡೆ ಮುಂದುವರೆಯಲಿದೆ ಎಂದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್‌ಪಿ ಲಕ್ಷ್ಮಯ್ಯ, ಧಮೇಂದ್ರ, ಜಿಪಂ ಮುಖ್ಯ ಯೋಜನಾಧಿಕಾರಿ ದೀಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಧಾ, ಪಶುಪಾಲನಾ ಇಲಾಖೆಯ ಉಪನಿರ್ದೆಶಕ ಹನುಮೇಗೌಡ, ಮುಖಂಡರಾದ ಮಹಮ್ಮದ್ ಜಿಯಾವುಲ್ಲಾ, ನಗರಸಭಾ ಸದ್ಯರಾದ ಅಬ್ರಾರ್ ಅಹಮದ್, ಸುರೇಶ್ ವಾಜಪೇಯಿ, ಶಿವಣ್ಣ, ಮಹಮ್ಮದ್ ಜಸೀಂ ಪಾಷ, ಇತರೆ ಮುಖಂಡು, ತಹಶೀಲ್ದಾರರಾದ ಗಿರಿಜಾ, ಬಸವರಾಜು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಮುಖ್ಯಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.