ಚುನಾವಣಾ ಕರ್ತವ್ಯಕ್ಕೆ ಗೈರಾದ ಸಿಬ್ಬಂದಿಗೆ ನೋಟಿಸ್‌!

KannadaprabhaNewsNetwork |  
Published : Mar 19, 2024, 12:53 AM ISTUpdated : Mar 19, 2024, 12:54 AM IST
18ಡಿಡಬ್ಲೂಡಿ9ಲೋಕಸಭೆ ಚುನಾವಣೆ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆರಂಭಸಿರುವ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರಿಕೃತ ನಿಯಂತ್ರಣ ಕೊಠಡಿಗೆ ಸೋಮವಾರ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ ನೀಡಿ ಪರಿಶೀಲಿಸಿದರು. | Kannada Prabha

ಸಾರಾಂಶ

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದರೂ ಕೆಲವು ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಂಡಿಲ್ಲ. ಗೈರು ಹಾಜರಾಗಿರುವ ಅಧಿಕಾರಿ, ಸಿಬ್ಬಂದಿಗಳಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಆದೇಶ.

ಧಾರವಾಡ:ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದರೂ ಕೆಲವು ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಂಡಿಲ್ಲ. ಗೈರು ಹಾಜರಾಗಿರುವ ಅಧಿಕಾರಿ, ಸಿಬ್ಬಂದಿಗಳಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ನೋಡಲ್ ಅಧಿಕಾರಿಗಳು ಜಿಲ್ಲಾ ಚುನಾವಣಾ ಕಾರ್ಯಾಲಯಕ್ಕೆ ವರದಿ ಸಲ್ಲಿಸಲು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ನಿರ್ದೇಶಿಸಿದರು.ಲೋಕಸಭೆ ಚುನಾವಣೆ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆರಂಭಿಸಿರುವ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರಿಕೃತ ನಿಯಂತ್ರಣ ಕೊಠಡಿಗೆ ಸೋಮವಾರ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗಳ ಸಭೆ ಜರುಗಿಸಿದ ಅವರು, ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿಗಳು ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.ಮಾದರಿ ನೀತಿ ಸಂಹಿತೆ ಜಾರಿಯಾಗಿ ಎರಡು ದಿನಗಳು ಕಳೆದರೂ ಕೆಲವು ಅಧಿಕಾರಿ, ಸಿಬ್ಬಂದಿ ತಮ್ಮ ಕರ್ತವ್ಯಕ್ಕೆ ಇನ್ನೂ ಹಾಜರಾಗದಿರುವುದು ಗೊತ್ತಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರತಿ ನೋಡಲ್ ಅಧಿಕಾರಿ ತನ್ನ ಅಧೀನದ ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತವಾಗಿರುವ ಸಿಬ್ಬಂದಿಗಳು ಹಾಜರಾಗಿ, ವರದಿ ಮಾಡಿಕೊಂಡಿರದಿದ್ದಲ್ಲಿ ಅವರಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು ಎಂದು ಸೂಚಿಸಿದರು.ಪ್ರತಿ ತಂಡಕ್ಕೆ ಪಾಳೆಯ ಪ್ರಕಾರ ನಿಯೋಜಿಸಲಾಗಿದೆ. ದಿನದ 24 ಗಂಟೆ ನಿಯೋಜಿತರು ಇರಬೇಕು. ಎಂಸಿಎಂಸಿ, ಎಂ.ಎಂ.ಸಿ, ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ ಮತ್ತು ಜಿಪಿಎಸ್, ಸಿ-ವಿಜಿಲ್, ಸಹಾಯವಾಣಿ ಮತ್ತು ಸಿಸಿಟಿವಿ ಉಸ್ತುವಾರಿ ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿರುವ ಕಾರ್ಯಗಳನ್ನು ನಿರಂತರವಾಗಿ ತೀವ್ರ ನಿಗಾವಹಿಸಿ ನಿರ್ವಹಿಸಬೇಕು. ನೋಡಲ್ ಅಧಿಕಾರಿಗಳಾದ ಡಾ. ಸಂತೋಷ ಬಿರಾದಾರ, ಮಂಜುನಾಥ ಸುಳ್ಳೊಳ್ಳಿ ಹಾಗೂ ಗೋಪಾಲ ಲಮಾಣಿ ಈ ತಂಡಗಳಿಗೆ ಸೂಕ್ತ ಮಾಹಿತಿ ಮತ್ತು ತರಬೇತಿ ನೀಡಬೇಕೆಂದರು.ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಿಗೆ ಸಂಬಂಧಿಸಿದ ತಂಡಗಳು ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ರಾಜಕೀಯ ಪಕ್ಷ, ಮುಖಂಡರು, ಬೆಂಬಲಿಗರು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳಿಗೆ ಸಂಬಂಧಿಸಿದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ , ಇನ್‌ಸ್ಟಾಗ್ರಾಂ ದಂತಹ ಎಲ್ಲ ಸೋಶಿಯಲ್ ಮಿಡಿಯಾಗಳನ್ನು ನಿರಂತರವಾಗಿ ಪರಿಶೀಲಿಸಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಆಯಾ ನೋಡಲ್ ಅಧಿಕಾರಿಗಳ ಗಮನಕ್ಕೆ ತಕ್ಷಣ ತರಬೇಕೆಂದು ಮತ್ತು ಅದನ್ನು ಸರಿಯಾಗಿ ದಾಖಲಿಸಬೇಕೆಂದು ತಿಳಿಸಿದರು.ನೋಡಲ್ ಅಧಿಕಾರಿಗಳಾದ ಮೋನಾ ರಾವುತ್, ರೇಷ್ಮಾ ತಾಳಿಕೋಟಿ, ಡಾ. ಸಂತೋಷ ಬಿರಾದಾರ, ಗೋಪಾಲ ಲಮಾಣಿ, ಮೀನಾಕುಮಾರಿ, ಮಂಜುನಾಥ ಸುಳ್ಳೊಳ್ಳಿ, ಸುರೇಶ ಹಿರೇಮಠ ಹಾಗೂ ಎಸ್.ಎಂ. ಹುಡೇದಮನಿ ಇದ್ದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಸೀಲ್ದಾರ್‌ ಡಾ. ಡಿ.ಎಚ್. ಹೂಗಾರ, ಹೆಸ್ಕಾಂನ ಎಂ. ನದಾಫ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ನೀರು ದರ ಶೇ.3 ಹೆಚ್ಚಳ
ಇಂದು ವರ್ಣರಂಜಿತ ಬೆಂಗಳೂರು ಕರಗ