ರಾಮನಗರ: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕನ್ನಡ ಭವನವಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಕದಂಬೋತ್ಸವ, ಹಂಪಿ ಉತ್ಸವ, ಬಾದಾಮಿ, ಗಡಿನಾಡ ಸೇರಿದಂತೆ ಇನ್ನಿತರೆ ಉತ್ಸವಗಳಂತೆ ಗಂಗರ ಮೂಲ ಪ್ರದೇಶಗಳಲ್ಲಿ ಒಂದಾದ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಗಂಗೋತ್ಸವ ಕಾರ್ಯಕ್ರಮವನ್ನು ಪ್ರತೀ ವರ್ಷ ಆಯೋಜಿಸಲು ಆದೇಶಿಸುವಂತೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. 2022-23ನೇ ಸಾಲಿನಲ್ಲಿ ಕನಕಪುರ ತಾಲ್ಲೂಕಿನಲ್ಲಿ ಗಡಿನಾಡ ಉತ್ಸವ ಆಯೋಜಿಸಲು ಸರ್ಕಾರದಿಂದ ಜಿಲ್ಲಾಧಿಕಾರಿಗಳ ಖಾತೆಗೆ ಒಂದು ಲಕ್ಷ ಹಣವನ್ನು ಬಿಡುಗಡೆಯಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಕಾರ್ಯಕ್ರಮ ನಡೆದಿಲ್ಲ. ಗಡಿನಾಡ ಉತ್ಸವ ನಡೆಸಲು ಕ್ರಮ ವಹಿಸಬೇಕೆಂದು ತಿಳಿಸಿದರು.
2022ರ ಸಮಗ್ರ ಕನ್ನಡ ಭಾಷೆ ಅಧಿನಿಯಮವು ಮುಂದಿನ ಮೂರು-ನಾಲ್ಕು ತಿಂಗಳುಗಳಲ್ಲಿ ಕಾನೂನಾಗಿ ಜಾರಿಗೆ ಬರಲಿದೆ. ಕರ್ನಾಟಕ ಏಕೀಕರಣದ ನಂತರ ರಾಜ್ಯದಲ್ಲಿ 3 ಸಾವಿರಕ್ಕೂ ಹೆಚ್ಚು ಆದೇಶಗಳು ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಇದೂವರೆಗೂ ಈ ಆದೇಶಗಳ ಅನುಷ್ಠಾನ ಸರಿಯಾಗಿ ಪಾಲನೆಯಾಗುತ್ತಿಲ್ಲ. ಕನ್ನಡ ಬಳಕೆಯಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಸಮಗ್ರ ಕನ್ನಡ ಭಾಷೆ ಕಾನೂನು ಅಧಿನಿಯಮದಂತೆ ಶಿಕ್ಷೆಗೆ ಒಳಗಾಗಿದ್ದಾರೆ ಎಂದರು.ಜಿಲ್ಲೆಯಲ್ಲಿ ಬಿಡದಿ, ಹಾರೋಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ನಾಮ ಫಲಕಗಳಲ್ಲಿ ಸರ್ಕಾರದ ಆದೇಶದನ್ವಯ 60:40 ಅನುಪಾತದಲ್ಲಿ ಕನ್ನಡ ನಾಮಫಲಕಗಳು ಪ್ರದರ್ಶಿಸಬೇಕು. ಈ ಆದೇಶ ಸರಿಯಾಗಿ ಪಾಲನೆಯಾಗಿಲ್ಲ. ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಕನ್ನಡ ಬಲ್ಲವ ಒಬ್ಬರನ್ನಾದರೂ ನೇಮಕ ಮಾಡುವಂತೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಕೆಡಿಪಿ ಸಭೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳು ಸಭೆಯ ಕೊನೆಯಲ್ಲಿ ಚರ್ಚಿತವಾಗದೇ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಬೇಕು. ರಾಜ್ಯದ ಭಾಷೆ ಉಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಬೇಜವಾಬ್ದಾರಿಯಿಂದ ಕನ್ನಡ ಭಾಷೆಯನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದರು.
13ಕೆಆರ್ ಎಂಎನ್ 10.ಜೆಪಿಜಿ