ನೋಂದಣಿಯಾಗದ ತೋಟ, ರೆಸಾರ್ಟ್‌ಗಳಿಗೆ ನೋಟಿಸ್‌: ರವಿಕುಮಾರ್‌

KannadaprabhaNewsNetwork | Published : Sep 18, 2024 1:52 AM

ಸಾರಾಂಶ

ಚಿಕ್ಕಮಗಳೂರು, ಕಾರ್ಮಿಕರು ಕೆಲಸ ಮಾಡುವ ಉದ್ದಿಮೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಜಿಲ್ಲೆಯ 27 ಕಾಫಿ ತೋಟಗಳು ಹಾಗೂ ರೆಸಾರ್ಟ್‌ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಕೆಲವು ನೋಂದಣಿಯಾಗದಿರುವುದು ಗಮನಕ್ಕೆ ಬಂದಿದೆ. ನಾಲ್ಕೈದು ರೆಸಾರ್ಟ್‌ ಗಳಿಗೆ ನೋಟಿಸ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ರವಿಕುಮಾರ್‌ ಹೇಳಿದ್ದಾರೆ.

27 ತೋಟ, ರೆಸಾರ್ಟ್‌ ಪರಿಶೀಲನೆ । ಸದ್ಯದಲ್ಲೇ ನಾಲ್ಕೈದು ರೆಸಾರ್ಟ್‌ಗಳಿಗೆ ನೋಟೀಸ್ ಜಾರಿ । ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸಂವಾದ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾರ್ಮಿಕರು ಕೆಲಸ ಮಾಡುವ ಉದ್ದಿಮೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಜಿಲ್ಲೆಯ 27 ಕಾಫಿ ತೋಟಗಳು ಹಾಗೂ ರೆಸಾರ್ಟ್‌ ಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಕೆಲವು ನೋಂದಣಿಯಾಗದಿರುವುದು ಗಮನಕ್ಕೆ ಬಂದಿದೆ. ನಾಲ್ಕೈದು ರೆಸಾರ್ಟ್‌ ಗಳಿಗೆ ನೋಟಿಸ್‌ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತ ರವಿಕುಮಾರ್‌ ಹೇಳಿದ್ದಾರೆ.

ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಶನಿವಾರ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೋಟಗಳು, ರೇಸಾರ್ಟ್‌ಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆ ಮಾಹಿತಿಯನ್ನು ಇಲಾಖೆಗೆ ನೀಡಬೇಕು. ಆದರೆ, ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ ಎಂದರು.

ಪೊಲೀಸ್‌ ಇಲಾಖೆಗೆ ಸೇರಿರುವ ವೆಬ್‌ ಸೈಟ್‌ನಲ್ಲಿ 203 ಎಸ್ಟೇಟ್‌ಗಳು ಮಾತ್ರ ನೋಂದಣಿಯಾಗಿವೆ. 1843 ವಲಸೆ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಮಾಲೀಕರ ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಇಲಾಖೆ ನಿಯಮವನ್ನು ಎಲ್ಲರೂ ಪಾಲನೆ ಮಾಡಬೇಕು. ಈ ಕುರಿತು ಬೆಳೆಗಾರರ ಸಂಘದ ಸಭೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್‌ ಇಲಾಖೆ, ಬೆಳೆಗಾರರ ಸಂಘದ ಸಹಕಾರದೊಂದಿಗೆ ಕಾರ್ಮಿಕ ಇಲಾಖೆ ಸಿಬ್ಬಂದಿ ಕಾಫಿ ತೋಟ ಹಾಗೂ ರೆಸಾರ್ಟ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಈವರೆಗೆ 27 ತೋಟ ಹಾಗೂ ರೆಸಾರ್ಟ್‌ಗಳಿಗೆ ಭೇಟಿ ನೀಡಿದ್ದು, ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳದೆ ಇರುವುದು ಕೆಲವೆಡೆ ಗಮನಕ್ಕೆ ಬಂದಿದೆ. ಅಂತಹವರಿಗೆ ನೋಟಿಸ್‌ ನೀಡಲಾಗುವುದು ಎಂದ ಅವರು, ಈ ಪ್ರಕ್ರಿಯೆ ಮುಂದುವರೆಸಿಕೊಂಡು ಹೋಗ ಲಾಗು ವುದು. ಡಿಸೆಂಬರ್‌ ಮಾಹೆಯಲ್ಲಿ ತೋಟಗಳಲ್ಲಿ ಕಾಫಿ ಕೊಯ್ಲು ನಡೆಯಲಿದೆ. ಹಾಗಾಗಿ ತೋಟಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.1.47 ಲಕ್ಷ ಕಾರ್ಮಿಕರು:

ಜಿಲ್ಲೆಯಲ್ಲಿ ನೋಂದಣಿಯಾಗಿರುವ ಪ್ರಕಾರ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಖ್ಯೆ 1,47,899 ಇದೆ. ಇವರಿಗೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ಸವಲತ್ತು ನೀಡಲಾಗುತ್ತಿದೆ ಎಂದು ಹೇಳಿದರು.

2014-15ನೇ ಸಾಲಿನಿಂದ 2024ರ ಜೂನ್‌ 30 ರವರೆಗೆ 5272 ಜನರಿಗೆ ಮದುವೆ ಸಹಾಯಧನದಡಿ 27.59 ಕೋಟಿ ರು. ನೀಡಲಾಗಿದೆ. 23242 ಫಲಾನುಭವಿಗಳಿಗೆ 19.95 ಕೋಟಿ ರು. ಶೈಕ್ಷಣಿಕ ಸಹಾಯಧನ ನೀಡಲಾಗಿದೆ. 335 ಮಂದಿಗೆ 1.31 ಕೋಟಿ ರು. ವೈದ್ಯಕೀಯ ಸಹಾಯಧನ ನೀಡಲಾಗಿದೆ. ತಾಯಿ- ಮಗು ಸಹಾಯಹಸ್ತ ಧನ ಸಹಾಯವನ್ನು 400 ಫಲಾನುಭವಿಗಳಿಗೆ 24 ಲಕ್ಷ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

18 ಜನರಿಗೆ 69 ಲಕ್ಷ ರು. ಅಪಘಾತ ಪರಿಹಾರ ಧನ ಸಹಾಯ ಮಂಜೂರು ಮಾಡಲಾಗಿದೆ. 963 ಜನರಿಗೆ ಅಂತ್ಯಕ್ರಿಯೆ ವೆಚ್ಚ 5.22 ಲಕ್ಷ, 93 ಜನರಿಗೆ ಮಾಹೆಯಾನ 3 ಸಾವಿರದಂತೆ ಪಿಂಚಣಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಕಾರ್ಮಿಕ ಇಲಾಖೆಯಲ್ಲಿ ತುಟ್ಟಿ ಭತ್ಯೆಗೆ ಸಂಬಂಧಿಸಿದಂತೆ 217 ಹಾಗೂ ವೇತನಕ್ಕೆ ಸಂಬಂಧಿಸಿದಂತೆ 65 ಕೇಸ್‌ಗಳು ನಡೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ. ರಾಜೇಶ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಅಧಿಕಾರಿ ಸುರೇಶ್‌ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಭಾಕರ್‌ ಉಪಸ್ಥಿತರಿದ್ದರು. ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌ ಸ್ವಾಗತಿಸಿದರು. ಹಿರಿಯ ಉಪಾಧ್ಯಕ್ಷ ಸಿ.ಡಿ. ಚಂದ್ರೇಗೌಡ ವಂದಿಸಿದರು. 17 ಕೆಸಿಕೆಎಂ 5ಚಿಕ್ಕಮಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಶನಿವಾರ ನಡೆದ ತಿಂಗಳ ಅತಿಥಿ ಕಾರ್ಯಕ್ರಮವನ್ನು ಸಹಾಯಕ ಕಾರ್ಮಿಕ ಆಯುಕ್ತ ರವಿಕುಮಾರ್ ಉದ್ಘಾಟಿಸಿದರು. ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಸುರೇಶ್‌, ಪ್ರಭಾಕರ್‌, ಅಧ್ಯಕ್ಷ ರಾಜೇಶ್‌, ಪ್ರಧಾನ ಕಾರ್ಯದರ್ಶಿ ಆರ್‌. ತಾರಾನಾಥ್‌ ಇದ್ದರು.

Share this article