ಒಂದು ವಾರ ನಡೆಯಲಿರುವ ಧಾರ್ಮಿಕ ಆಚರಣೆ । ನ. 4 ರಂದು ಮಾಲಾಧಾರಣೆ । 10 ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ
ಪ್ರತಿ ವರ್ಷದಂತೆ ಈ ಬಾರಿ ಶ್ರೀರಾಮ ಸೇನೆ ನೇತೃತ್ವದಲ್ಲಿ ನವೆಂಬರ್ 4 ರಿಂದ 10 ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದ್ದಾರೆ.
ದತ್ತಪೀಠದಲ್ಲಿನ ಅತಿಕ್ರಮಣ ಮುಕ್ತಿಗಾಗಿ, ಹಿಂದುಗಳಿಗೆ ಸಂಪೂರ್ಣ ಪೀಠ ದೊರೆಯುವುದಕ್ಕಾಗಿ ಕಳೆದ 20 ವರ್ಷಗಳಿಂದ ಪ್ರತಿ ವರ್ಷ ದತ್ತಮಾಲಾ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನ. 4 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಶಂಕರಮಠದಲ್ಲಿ ದತ್ತಮಾಲಾ ಧಾರಣೆ ನಡೆಯಲಿದೆ. ಅದೇ ದಿನ ರಾಜ್ಯಾದ್ಯಂತ ದತ್ತ ಭಕ್ತರು ಮಾಲೆ ಧರಿಸಲಿದ್ದಾರೆ. ನ. 7 ರಂದು ಸಂಜೆ 7 ಗಂಟೆಗೆ ಶಂಕರಮಠದಲ್ಲಿ ದತ್ತ ದೀಪೋತ್ಸವ, 9 ರಂದು ಪಡಿ ಸಂಗ್ರಹ ನಡೆಯಲಿದೆ ಎಂದು ಹೇಳಿದರು.
ಅದೇ ದಿನ ಮಧ್ಯಾಹ್ನ 12 ಗಂಟೆಗೆ ದತ್ತಪೀಠಕ್ಕೆ ದತ್ತ ಭಕ್ತರು ತೆರಳಲಿದ್ದು, ಪಾದುಕೆಗಳ ದರ್ಶನ, ಹೋಮ ಪೂರ್ಣಾಹುತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖಂಡರಾದ ಮಹಾಲಿಂಗಣ್ಣ, ಆನಂದ್ಶೆಟ್ಟಿ ಅಡ್ಡಿಯಾರ್, ಅಮರ್ನಾಥ್, ಅರ್ಜುನ್ ಶೃಂಗೇರಿ, ಸುಂದ್ರೇಶ್ ನರ್ಗಲ್, ರಾಜು ಇದ್ದರು. 7 ಕೆಸಿಕೆಎಂ 5