ಒಂದು ವಾರ ನಡೆಯಲಿರುವ ಧಾರ್ಮಿಕ ಆಚರಣೆ । ನ. 4 ರಂದು ಮಾಲಾಧಾರಣೆ । 10 ರಂದು ಚಿಕ್ಕಮಗಳೂರಿನಲ್ಲಿ ಶೋಭಾಯಾತ್ರೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರತಿ ವರ್ಷದಂತೆ ಈ ಬಾರಿ ಶ್ರೀರಾಮ ಸೇನೆ ನೇತೃತ್ವದಲ್ಲಿ ನವೆಂಬರ್ 4 ರಿಂದ 10 ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದ್ದಾರೆ.
ದತ್ತಪೀಠದಲ್ಲಿನ ಅತಿಕ್ರಮಣ ಮುಕ್ತಿಗಾಗಿ, ಹಿಂದುಗಳಿಗೆ ಸಂಪೂರ್ಣ ಪೀಠ ದೊರೆಯುವುದಕ್ಕಾಗಿ ಕಳೆದ 20 ವರ್ಷಗಳಿಂದ ಪ್ರತಿ ವರ್ಷ ದತ್ತಮಾಲಾ ಅಭಿಯಾನ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ನ. 4 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಶಂಕರಮಠದಲ್ಲಿ ದತ್ತಮಾಲಾ ಧಾರಣೆ ನಡೆಯಲಿದೆ. ಅದೇ ದಿನ ರಾಜ್ಯಾದ್ಯಂತ ದತ್ತ ಭಕ್ತರು ಮಾಲೆ ಧರಿಸಲಿದ್ದಾರೆ. ನ. 7 ರಂದು ಸಂಜೆ 7 ಗಂಟೆಗೆ ಶಂಕರಮಠದಲ್ಲಿ ದತ್ತ ದೀಪೋತ್ಸವ, 9 ರಂದು ಪಡಿ ಸಂಗ್ರಹ ನಡೆಯಲಿದೆ ಎಂದು ಹೇಳಿದರು.
ನ. 10 ರಂದು ಮಾಲಾ ಧಾರಿಗಳು ಚಿಕ್ಕಮಗಳೂರಿಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ 8 ಗಂಟೆಗೆ ಶಂಕರಮಠ ರಸ್ತೆಯಲ್ಲಿ ಧರ್ಮ ಸಭೆ ನಡೆಯ ಲಿದೆ. ಬಳಿಕ 10 ಗಂಟೆಗೆ ಶಂಕರಮಠದಿಂದ ಶೋಭಾಯಾತ್ರೆ ಹೊರಡಲಿದ್ದು, ಎಂ.ಜಿ. ರಸ್ತೆ ಮುಖಾಂತರ ಆಜಾದ್ ಪಾರ್ಕ್ ವೃತ್ತದವರೆಗೆ ಯಾತ್ರೆ ನಡೆಸಿ ನಂತರದ ದತ್ತಪೀಠಕ್ಕೆ ತೆರಳಲಾಗುವುದು ಎಂದರು.ಅದೇ ದಿನ ಮಧ್ಯಾಹ್ನ 12 ಗಂಟೆಗೆ ದತ್ತಪೀಠಕ್ಕೆ ದತ್ತ ಭಕ್ತರು ತೆರಳಲಿದ್ದು, ಪಾದುಕೆಗಳ ದರ್ಶನ, ಹೋಮ ಪೂರ್ಣಾಹುತಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖಂಡರಾದ ಮಹಾಲಿಂಗಣ್ಣ, ಆನಂದ್ಶೆಟ್ಟಿ ಅಡ್ಡಿಯಾರ್, ಅಮರ್ನಾಥ್, ಅರ್ಜುನ್ ಶೃಂಗೇರಿ, ಸುಂದ್ರೇಶ್ ನರ್ಗಲ್, ರಾಜು ಇದ್ದರು. 7 ಕೆಸಿಕೆಎಂ 5