ಕಿಕ್ಕೇರಿ: ವಿದ್ಯಾರ್ಥಿ ದಿಸೆಯಿಂದಲೇ ಸದ್ಗುಣಗಳ ಜತೆ ಒಗ್ಗಟ್ಟು, ಸಾಮರಸ್ಯ, ನಾಯಕತ್ವ ಗುಣ ಬೆಳೆಸಲು ಎನ್ಎಸ್ಎಸ್ ಶಿಬಿರ ಸಹಕಾರಿಯಾಗಲಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ ಹೇಳಿದರು.
ಯುವಕರು ಕೃಷಿ ಪರಿಕರಗಳ ಪರಿಚಯ ಮಾಡಿಕೊಳ್ಳುವ ಜೊತೆ ಕೃಷಿ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಗೋವುಗಳನ್ನು ಪೂಜಿಸಿ ಆರಾಧಿಸಬೇಕು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮೀಣ ಪ್ರದೇಶದ ಜನತೆಗೆ ಕನಿಷ್ಠ ಮೂಲ ಸೌಲಭ್ಯ ನೀಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ವಕೀಲ ಎನ್.ಆರ್.ರವಿಶಂಕರ್ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ನಿಲ್ಲಬೇಕಿದೆ. ಕಾನೂನು ಅರಿವಿಗೆ ಸಹಕಾರ ನೀಡುವೆ ಎಂದು ತಿಳಿಸಿದರು.ತಾಲೂಕು ಅಗ್ನಿಶಾಮಕ ಠಾಣೆ ಅಧಿಕಾರಿ ಚಂದ್ರಶೇಖರ್ ಅಗ್ನಿ ಅವಘಡ ಕುರಿತು ಮಾಹಿತಿ ನೀಡಿದರು. ಶಿಬಿರಾರ್ಥಿಗಳು ಗ್ರಾಮ ನೈರ್ಮಲ್ಯಕ್ಕೆ ಶ್ರಮದಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ರಂಜಿಸಿದರು.