ವೃತ್ತಿ ರಂಗಭೂಮಿಯ ಕಲಾವಿದರನ್ನು ಉತ್ತರ ಕರ್ನಾಟಕ ಜನರು ಸದಾ ಕೈಹಿಡಿಯುವ ಕಾರ್ಯ ಮಾಡುತ್ತಿದ್ದು, ಇಡೀ ರಾಜ್ಯದ ಜನರು ರಂಗಭೂಮಿ ಕಲಾವಿದರನ್ನು ನಿರಂತರ ಪ್ರೋತ್ಸಾಹಿಸಬೇಕು.
ಕನ್ನಡಪ್ರಭ ವಾರ್ತೆ ಕೊಟ್ಟೂರು
ವೃತ್ತಿ ರಂಗಭೂಮಿಯ ಕಲಾವಿದರನ್ನು ಉತ್ತರ ಕರ್ನಾಟಕ ಜನರು ಸದಾ ಕೈಹಿಡಿಯುವ ಕಾರ್ಯ ಮಾಡುತ್ತಿದ್ದು, ಇಡೀ ರಾಜ್ಯದ ಜನರು ರಂಗಭೂಮಿ ಕಲಾವಿದರನ್ನು ನಿರಂತರ ಪ್ರೋತ್ಸಾಹಿಸಬೇಕು ಎಂದು ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದಲ್ಲಿರುವ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘ ಜೇವರ್ಗಿ ಕಂಪನಿಯವರ ನಾಟಕ ಪ್ರದರ್ಶನದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾದ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡು-ನುಡಿಗೆ ಸಂಸ್ಕೃತಿ, ಸಂಸ್ಕಾರಗಳ ಕೊಡುಗೆ ಅಪಾರವಾಗಿದೆ. ಹೊಸ ಅಲೆಯ ನಾಟಕಗಳನ್ನು ಮಾತ್ರ ನೋಡುತ್ತಿದ್ದ ನಾಡಿನ ಜನತೆ ತಮ್ಮ ಪ್ರತಿಭೆ ಮತ್ತು ಕಲೆಯ ಚತುರತೆಯಿಂದ ಗಮನ ಸೆಳೆದಿರುವ ವೃತ್ತಿ ರಂಗಭೂಮಿಯ ಬೆಳವಣಿಗೆಗೆ ಮುಂದಾಗಬೇಕು ಎಂದರು.
ಕಲಾವಿದರ ಬದುಕು ಮತ್ತು ಬವಣೆ ತಮ್ಮ ಕಲೆಗಳ ಮೂಲಕ ಮರೆತು ಪ್ರೇಕ್ಷಕರನ್ನು ಸದಾ ನಗಿಸುವ ವೃತ್ತಿ ರಂಗಭೂಮಿಯ ನಾಟಕಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಎಂದೂ ಈ ಕಲೆಗೆ ಅವಸಾನ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದರು.
ಕಲಾವಿದರಾದ ದಯಾನಂದ ಬೀಳಗಿ, ರಾಜಣ್ಣ ಜೇವರ್ಗಿ, ಮೂಡಗೆರೆ ಪ್ರಕಾಶ, ಮಾರುತಿ ಶೆಟ್ಟೆ, ನಾಗರಾಜ ಕಲ್ಲೂರು, ನೀಲಾ ಜೇವರ್ಗಿ, ಸುಜಾತ ಗುಬ್ಬಿ ಅನ್ನಪೂರ್ಣ, ಶ್ವೇತ ಬೀಳಗಿ ಮಂಜುನಾಥ ಜಾಲಿಹಾಳ್ ಮತ್ತು ಇತರರ ಕಲಾವಿದರನ್ನು ಶಾಸಕರು ಸನ್ಮಾನಿಸಿದರು.
ರಾಜ್ಯ ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಮತ್ತು ಜೇವರ್ಗಿ ರಾಜಣ್ಣ ಮಾತನಾಡಿದರು.
ಡಿವೈಎಸ್ಪಿ ಡಾ. ವೆಂಕಟಪ್ಪ ನಾಯ್ಕ, ಮುಖಂಡ ಪಿ.ಎಚ್. ದೊಡ್ಡರಾಮಣ್ಣ, ರೇಖಾ ರಮೇಶ ಬದ್ದಿ, ಮರಿಸ್ವಾಮಿ, ಭಾರತೀ ಮಲ್ಲಿಕಾರ್ಜುನ್, ಪ್ರದೀಪ ಕನ್ನಕಟ್ಟೆ, ಮತ್ತೂರು ಬಸವರಾಜ ಮತ್ತು ಇತರರು ಇದ್ದರು. ನಾಟಕ ಅಕಾಡೆಮಿಯ ಸಂಚಾಲಕ ಪ್ರಕಾಶ ಅಂಗಡಿ ಮತ್ತಿಹಳ್ಳಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.