ಕನ್ನಡಪ್ರಭ ವಾರ್ತೆ ಸಾಗರ
ಈ ಸಂಬಂಧ ಪಟ್ಟಣದ ಎಪಿಎಂಸಿ ಬೆಳೆಗಾರರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹಿರಿಯ ಸಹಕಾರಿ ಧುರೀಣ ಎಚ್.ಎಸ್.ಮಂಜಪ್ಪ ಮಾತನಾಡಿ, ಸಮಾವೇಶ ವೊಂದು ಸಮರ್ಪಕವಾಗಿ ರೂಪಗೊಳ್ಳಲು ಕನಿಷ್ಠ ೧೫ ಜನರ ತಂಡ ೫ ತಿಂಗಳ ಕಾಲ ಇದಕ್ಕಾಗಿಯೇ ದುಡಿಯಬೇಕಾದ ಅಗತ್ಯವಿದೆ. ಇಂತಹ ಸಕ್ರಿಯ ಕಾರ್ಯಕರ್ತರನ್ನು ಒಳಗೊಂಡು ಕೇವಲ ತಾಂತ್ರಿಕ ಸಮಾವೇಶವಾಗಿಸದೆ ಬೆಳೆಗಾರರ ಸಮಾವೇಶವಾಗಿಸುವ ನಿಟ್ಟಿನಲ್ಲಿ ದುಡಿಯೋಣ ಎಂದರು.
ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸರಿ ಸುಮಾರು ಎರಡು ದಶಕಗಳ ಹಿಂದಿನ ಗೋರಖ್ಸಿಂಗ್ ವರದಿಯ ಜಾರಿ ಇವತ್ತಿಗೂ ನನೆಗುದಿಗೆ ಬಿದ್ದಿದೆ. ಅದರ ಶಿಫಾರಸ್ಸುಗಳನ್ನು ಸರ್ಕಾರ ಜಾರಿಗೆ ತಂದರೆ ಅಡಕೆ ಬೆಳೆಗಾರರ ಹತ್ತಾರು ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ ಎಂದು ಪ್ರತಿಪಾದಿಸಿದರು.ಆಪ್ಸ್ಕೋಸ್ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ ಮಾತನಾಡಿ, ಸಾಗರ, ಸೊರಬ, ಹೊಸನಗರಗಳ ಅಡಕೆ ಬೆಳೆಗಾರರ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಗಳಾಗಲು, ಬೆಳೆಗಾರರ ಬಲ ಸಂವರ್ಧನೆಗಾಗಿ ಸಮಾವೇಶ ನಡೆಯುವುದು ಅತ್ಯಗತ್ಯ ಎಂದರು. ವಕೀಲ ರವೀಶ್ ಕುಮಾರ್, ಸಮಾವೇಶಕ್ಕೆ ಕೇಂದ್ರ ಸಚಿವರನ್ನು ಕರೆಸಿ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲವೆಂದು ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮಾವೇಶದ ರೂಪರೇಷೆ ಕುರಿತು ನಿವೃತ್ತ ವಿಜ್ಞಾನಿ ಡಾ.ಬಿ.ವಿ.ನರಹರಿ ಬನದಕೊಪ್ಪ ಮಾಹಿತಿ ನೀಡಿದರು. ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಂದ್ರ ಖಂಡಿಕಾ ಸ್ವಾಗತಿಸಿದರು. ನಾಗಾನಂದ ವಂದಿಸಿದರು.