ಕುಷ್ಟಗಿ: ಹಳ್ಳಿಗಾಡಿನ ಜಾನಪದ ಸೊಗಡು ಇಂದು ಕಳಾಹೀನವಾಗುತ್ತಿರುವುದು ಕಳವಳಕಾರಿಯಾದ ಸಂಗತಿ, ಅಶ್ಲೀಲ, ಅರ್ಥ ರಹಿತ, ದ್ವಂದ್ವಾರ್ಥದ ಹಾಡು ಜನಪದ ಎಂದು ಭಾವಿಸಿ ಕೇಳುತ್ತಿರುವುದು ಮೂಲ ದಾಟಿಯ ಜನಪದ ಕಲೆಗಳಿಗೆ ಮಾಡುವ ಅಪಮಾನವಾಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಡಾ.ಜೀವನಸಾಬ್ ಬಿನ್ನಾಳ ಅಭಿಪ್ರಾಯಪಟ್ಟರು.
ಹಳ್ಳಿಗಾಡಿನ ಊಟ, ಜಾತ್ರೆ,ಹಬ್ಬ, ಉತ್ಸವ ಆಚರಣೆಗಳು ಯಾಂತ್ರಿಕ ಬದುಕಿನ ಭಾಗವಾಗಿ ನೀರಸವಾಗಿವೆ, ಆಧುನಿಕ ಸಂದರ್ಭದಲ್ಲಿ ಭಾದಿಸುತ್ತಿರುವ ಹಲವು ಆರೋಗ್ಯ ಸಂಬಂಧಿತ ಬಾಧೆಗಳಿಗೆ ನಾವು ಅಳವಡಿಸಿಕೊಂಡಿರುವ ಇಂದಿನ ಅನಾರೋಗ್ಯಕರ ಆಹಾರವೇ ಕಾರಣ, ಮತ್ತೆ ಮರಳಿ ಜಾನಪದ ಕಡೆಗೆ ನಾವು ಹಿನ್ನೋಟ ಬೀರಬೇಕಾಗಿದೆ. ಗ್ರಾಮೀಣ ಕಲೆ ಸಂಗೀತ ಸಂಸ್ಕೃತಿಗಳು ಶ್ರೀಮಂತವಾಗಿದ್ದು ಅವುಗಳನ್ನ ಪೋಷಿಸಿಕೊಂಡು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಗ್ರಾಮದ ಹಿರಿಯರ ಮೇಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿ, ಗ್ರಾಮೀಣ ಜನಪದ ಕಲೆಗಳಿಗೆ ಪ್ರೋತ್ಸಾಹ ಅಗತ್ಯ, ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರ್ನಾಟಕ ಜಾನಪದ ಅಕಾಡೆಮಿಯು ಜನಪದ ಕಲೆಗಳಿಗೆ ಸಾಕಷ್ಟು ಉತ್ತೇಜಿನ ನೀಡುತ್ತಿದ್ದು ಈ ದಿಸೆಯಲ್ಲಿ ಸರ್ಕಾರೇತರ ಸಂಸ್ಥೆಗಳು, ಜನಸಾಮಾನ್ಯರು ತಮ್ಮ ತಮ್ಮ ಕಲೆ ಉಳಿಸಿ ಬೆಳೆಸಿಕೊಳ್ಳುವಲ್ಲಿ ಜಾಗೃತಿ ಅಭಿಯಾನದ ಮೂಲಕ ಸಾಧ್ಯವಾಗಿಸಬೇಕು ಎಂದರು .ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಮಾತನಾಡಿ, ಜನಪದ ಕಲೆಗಳು ಉಳಿದರೆ ಮಾತ್ರ ನಮ್ಮ ಕನ್ನಡ ಭಾಷೆ ಸಮೃದ್ಧಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಮ್ಮ ಕಲೆ ಸಂಸ್ಕೃತಿ ನಾವೇ ಪೋಷಿಸಿಕೊಂಡು ಬೆಳೆಸಿಕೊಂಡು ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಮಣ್ಣ ಬೊದೂರು, ಅಮರಪ್ಪ ವನಕೇರಿ, ವೀರಭದ್ರಗೌಡ ಪೊಲೀಸ್ ಪಾಟೀಲ್, ಬಾಳಪ್ಪ ಮುತ್ತಣ್ಣ ಹನಕುಂಟಿ, ಬಸನಗೌಡ ಹನಕುಂಟಿ, ಶಿವರಾಯಪ್ಪ ಚೌಡಕಿ, ನಾಗನಗೌಡ ಹನುಕುಂಟಿ, ದೊಡ್ಡಪ್ಪ ತೆಂಗಿನಮನಿ, ಚೆನ್ನಪ್ಪ ಗಡಧರ್, ಬಸವರಾಜ ಕರಡಿ,ನಾಗನಗೌಡ ಪೊಲೀಸ್ ಪಾಟೀಲ್ ಹೊಳೆಯಪ್ಪ ಗೌಂಡಿ, ಚಿದಾನಂದ ಗೌಂಡಿ, ಹನುಮಪ್ಪ ಬೋದೂರ್, ಹನುಮಂತ್ ಹಂಡೆಲಿ, ಬಸಪ್ಪ ಗೋತಗಿ, ಬಸವಂತ ನಾಡಗೌಡ್, ಸುಭಾಷ್ ಚಂದ್ರ ಲಿಂಗ್ಸುರ್, ಪರಸಪ್ಪ ಚೌಡ್ಕಿ,ಪಾಂಡಪ್ಪ ಚಲವಾದಿ ಸೇರಿದಂತೆ ಅನೇಕರು ಇದ್ದರು.