ಗುರುಪೂರ್ಣಿಮೆ ನಿಮಿತ್ತ ಕೃಷ್ಣೆಗೆ ಬಾಗಿನ ಅರ್ಪಣೆ

KannadaprabhaNewsNetwork | Published : Jul 22, 2024 1:18 AM

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ ಮಹಾಬಲೇಶ್ವರ (ಮಹಾರಾಷ್ಟ್ರ)ದ ಕೃಷ್ಣೆ ಮೈದುಂಬಿ ಹರಿಯಲಿ, ರೈತರ ಬಾಳು ಸಮೃದ್ಧವಾಗಲಿ, ಎಲ್ಲೆಡೆ ಸುಖ ಶಾಂತಿ ನೆಲೆಸಲಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು. ನೆರೆಯ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾನುವಾರ ಬೆಳಗ್ಗೆ ಗುರುಪೂರ್ಣಿಮೆ ನಿಮಿತ್ತ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿ. ಅನ್ನದಾತರ ಪಾಲಿನ ದೇವತೆ. ರೈತರೊಂದಿಗೆ ಪ್ರತಿ ವರ್ಷ ಕೃಷ್ಣೆಯ ಉಗಮ ಸ್ಥಾನಕ್ಕೆ ಬಂದು ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ.

ಕನ್ನಡಪ್ರಭ ವಾರ್ತೆ ಕೊಲ್ಹಾರಮಹಾಬಲೇಶ್ವರ (ಮಹಾರಾಷ್ಟ್ರ)ದ ಕೃಷ್ಣೆ ಮೈದುಂಬಿ ಹರಿಯಲಿ, ರೈತರ ಬಾಳು ಸಮೃದ್ಧವಾಗಲಿ, ಎಲ್ಲೆಡೆ ಸುಖ ಶಾಂತಿ ನೆಲೆಸಲಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು. ನೆರೆಯ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೃಷ್ಣಾ ನದಿಯ ಉಗಮ ಸ್ಥಾನ ಮಹಾಬಲೇಶ್ವರದಲ್ಲಿ ಭಾನುವಾರ ಬೆಳಗ್ಗೆ ಗುರುಪೂರ್ಣಿಮೆ ನಿಮಿತ್ತ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕೃಷ್ಣಾ ನದಿ ಉತ್ತರ ಕರ್ನಾಟಕದ ಜೀವನದಿ. ಅನ್ನದಾತರ ಪಾಲಿನ ದೇವತೆ. ರೈತರೊಂದಿಗೆ ಪ್ರತಿ ವರ್ಷ ಕೃಷ್ಣೆಯ ಉಗಮ ಸ್ಥಾನಕ್ಕೆ ಬಂದು ಬಾಗಿನ ಅರ್ಪಿಸುವ ಸಂಪ್ರದಾಯವನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ ಉತ್ತಮ ಮಳೆಯಾಗಿದ್ದು, ರೈತರು ಸಂತಸಗೊಂಡಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ನಿರಂತರ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ನೂರಾರು ರೈತರು ಸ್ವಯಂ ಪ್ರೇರಣೆಯಿಂದ ನಮ್ಮೊಂದಿಗೆ ಬಂದು ಬಾಗಿನ ಅರ್ಪಿಸಿರುವುದು ಸಂತಸ ತಂದಿದೆ ಎಂದರು.ಬೆಳ್ಳುಬ್ಬಿ ಜನಪರ ಕಾರ್ಯ ಕುರಿತು ಕಿರುಚಿತ್ರ:

ಚಲನಚಿತ್ರ ನಿರ್ದೇಶಕ ಮಧುಸೂಧನ ಹವಾಲ್ದಾರ ಮಾತನಾಡಿ, ಗುರುಪೂರ್ಣಿಮೆ ಅತ್ಯಂತ ಮಹತ್ವದ ದಿನವಾಗಿದೆ. ನಮ್ಮ ಬದುಕಿಗೆ ಗುರುವಾದ ಎಲ್ಲರನ್ನೂ ಸ್ಮರಿಸುವ ಈ ದಿನದಂದು ಬಾಗಿನ ಸಮರ್ಪಣೆ ಸ್ತುತ್ಯಾರ್ಹ ಕಾರ್ಯ. ನಮ್ಮ ಮಾತಾಂಬುಜಾ ಮೂವೀಸ್‌ನಿಂದ ಮುಂದಿನ ದಿನಗಳಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಜನಪರ ಕಾರ್ಯಗಳ ಕುರಿತು ಸಾಧನೆ ಕಿರುಚಿತ್ರ ರೂಪಿಸಲಾಗುತ್ತಿದ್ದು, ಈ ಕಾರ್ಯಕ್ಕೂ ಈ ಪುಣ್ಯ ನೆಲದಲ್ಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಸಂಪ್ರದಾಯದಂತೆ ಬೆಳ್ಳುಬ್ಬಿ ದಂಪತಿ ನೂರಾರು ರೈತರೊಂದಿಗೆ ಪಂಚಗಂಗಾ ಸನ್ನಿಧಾನದಲ್ಲಿ ಬಾಗಿನ ಸಮರ್ಪಿಸಿ, ಗಾಯತ್ರಿ, ಸಾವಿತ್ರಿ, ಕೃಷ್ಣಾ, ಕೊಯ್ನಾ, ವೆಣ್ಣಾ ನದಿಗಳ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದಕ್ಕೂ ಮುನ್ನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಪ್ರದಾಯದಂತೆ ಸಾತಾರಾದ ಅಕ್ಷತಾ ಮಂಗಲ ಭವನದಲ್ಲಿ ಗುರುಪೂಜಾ ಉತ್ಸವ ಹಮ್ಮಿಕೊಂಡು ಭಗವಾಧ್ವಜಕ್ಕೆ ಗೌರವ ಸಮರ್ಪಿಸಿದರು.

ಚಲನಚಿತ್ರ ವಿತರಕ ರಾಮಚಂದ್ರರಾವ್ ಕುಲಕರ್ಣಿ, ಕೊಲ್ಹಾರದ ಕೈಲಾಸನಾಥ ಸ್ವಾಮೀಜಿ, ಚಿನ್ನಪ್ಪ ಗಿಡ್ಡಪ್ಪಗೋಳ, ಪಪಂ ಸದಸ್ಯ ಶ್ರೀಶೈಲ ಅಥಣಿ, ಬಾಬು ಭಜಂತ್ರಿ, ಅಪ್ಪಾಸಿ ಮಟ್ಟ್ಯಾಳ, ಕಲ್ಲಪ್ಪ ಸೊನ್ನದ, ಶೇಖಪ್ಪ ಗಾಣಿಗೇರ, ಶ್ರೀಕಾಂತ ಬರಗಿ, ಬಸಪ್ಪ ಗಾಜಿ, ಪರಶುರಾಮ ಗಣಿ, ನಾಮದೇವ ಪವಾರ, ನಿಂಗು ಬಿದರಿ, ಶ್ರೀಶೈಲ ಓಡಗಲ್ಲ, ಮುತ್ತು ಕೋಡಬಾಗಿ, ಕೊಲ್ಹಾರ, ಮಸೂತಿ, ಮಟ್ಟಿಹಾಳ, ಆಸಂಗಿ, ಗಣಿ ಗ್ರಾಮಗಳು ಹಾಗೂ ಅವಳಿ ಜಿಲ್ಲೆಯ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article