ರಟ್ಟಿಹಳ್ಳಿ: ಪವಿತ್ರ ಶ್ರಾವಣ ಮಾಸದಲ್ಲಿ ನಮ್ಮ ಜೀವನಾಡಿಗಳಾದ ನದಿ-ಕೆರೆ ಜಲಸಂಪತ್ತಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ಪರಂಪರೆಯ ಪ್ರತೀಕವಾಗಿ ತಾಲೂಕು ಪಂಚಮಸಾಲಿ ಘಟಕದ ವತಿಯಿಂದ ಮದಗದ ಕೆಂಚಮ್ಮದೇವಿಗೆ ಬಾಗಿನ ಅರ್ಪಣೆ ಮಾಡಿರುವುದು ಅತ್ಯಂತ ಸಮಯೋಚಿತವಾದದ್ದು ಎಂದು ಪಂಚಮಸಾಲಿ ಜಗದ್ಗುರು ಹರಿಹರ ಪೀಠದ ವಚನಾನಂದ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸ್ತುತ ವರ್ಷ ಸಕಾಲದಲ್ಲಿ ಮಳೆಯಾಗದೇ ರೈತ ಸಮುದಾಯ ಸಂಕಷ್ಟದಲ್ಲಿದ್ದು, ನಮ್ಮನ್ನಾಳುವ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕಾದದ್ದು ಮನೋಧರ್ಮ. ಆ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ ನೇತೃತ್ವದ ಸರಕಾರ ಈ ಕೂಡಲೇ ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೆರೆ-ಕಟ್ಟೆಗಳು ತುಂಬಿದರೆ ರೈತರ ಬದುಕು ಹಸಿರಾಗುವುದು, ನಾಡಿನ ಹೊಲಗಳು ಸಮೃದ್ಧಿಯಾದರೆ ಪ್ರತಿಯೊಂದು ಮನ-ಮನೆಗಳಲ್ಲಿ ಸಂತೋಷ ಶಾಂತಿ ನೆಲೆಸುವುದು. ಜಲವನ್ನು ಪೂಜಿಸಿದರೆ ಜೀವನವನ್ನೇ ಪೂಜಿಸುವಂತಾಗುವುದು, ಕೆರೆ ಉಳಿದರೆ ಕೃಷಿ ಉಳಿಯುತ್ತದೆ, ಕೃಷಿ ಉಳಿದರೆ ಗ್ರಾಮ ಉಳಿಯುತ್ತದೆ. ಗ್ರಾಮ ಉಳಿದರೆ ನಾಡು ಸಮೃದ್ದಿಯಾಗಲಿದೆ ಎಂಬ ಮನೋಭಾವದಿಂದ ಇಂದು ವೀರಶೈವ ಲಿಂಗಾಯತ್ ಪಂಚಮಸಾಲಿ ವತಿಯಿಂದ ಬಾಗಿನ ಅರ್ಪಣೆ ಮಾಡಿ ಮದಗದ ಕೆಂಚಮ್ಮನಲ್ಲಿ ನಾಡು ನುಡಿ ಸಮೃದ್ಧವಾಗಲಿ ಎಂದು ಪ್ರಾರ್ಥನೆ ಮಾಡಲಾಯಿತು ಎಂದರು.ಅಸಮರ್ಪಕ ಮಳೆಯಿಂದಾಗಿ ಕೈಗೆ ಬಂದ ಬೆಳೆಗಳು ಬಿಸಿಲಿನ ತಾಪಮಾನಕ್ಕೆ ಒಣಗುತ್ತಿದ್ದು, ತಾಲೂಕಿನ ಕೆರೆ-ಕಟ್ಟೆಗಳು ಬರಿದಾಗುತ್ತಿವೆ. ಆದ್ದರಿಂದ ಸರಕಾರ ತಕ್ಷಣ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.