ಹೊಸಕೋಟೆ: 1993ರಲ್ಲಿ ದಲಿತ ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ತಾಲೂಕು ಆಡಳಿತಾಧಿಕಾರಿಗಳು ಖಾತೆ ಮಾಡಿಕೊಡದೆ ಕ್ಯಾತೆ ತೆಗೆಯುತಿದ್ದಾರೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಅಧ್ಯಕ್ಷ ಡಾ ಕೆ.ಎಂ.ಸಂದೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹೊಸಕೋಟೆ: 1993ರಲ್ಲಿ ದಲಿತ ರೈತರಿಗೆ ಸಾಗುವಳಿ ಚೀಟಿ ನೀಡಿದ್ದರೂ ತಾಲೂಕು ಆಡಳಿತಾಧಿಕಾರಿಗಳು ಖಾತೆ ಮಾಡಿಕೊಡದೆ ಕ್ಯಾತೆ ತೆಗೆಯುತಿದ್ದಾರೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಅಧ್ಯಕ್ಷ ಡಾ ಕೆ.ಎಂ.ಸಂದೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ತಾಲೂಕಿನ ದೇವನಗುಂದಿ ಗ್ರಾಮದ ಸರ್ವೆ ನಂ.142ರಲ್ಲಿ ಸರ್ಕಾರಿ ಆದೇಶದಂತೆ ಗ್ರಾಮದ 11 ರೈತರಿಗೆ ಜಮೀನು ಮಂಜೂರಾತಿ ನೀಡಿತ್ತು. ಆ 11 ಫಲಾನುಭವಿಗಳಲ್ಲಿ 7 ಜನ ಅನ್ಯ ಜಾತಿಯವರಿಗೆ ಎಲ್ಲಾ ರೀತಿಯ ಕಂದಾಯ ದಾಖಲೆಗಳನ್ನು ಒದಗಿಸಿದೆ. ರಾಜಸ್ವನಿರೀಕ್ಷಕರು ಎರಡು ಬಾರಿ ಸ್ಥಳ ಪರಿಶೀಲಿಸಿ ಗ್ರಾಮಸ್ಥರ ಸಹಿ ಪಡೆದು ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದರು. ಅದರಂತೆ 3430 ರು.ಗಳ ತೆರಿಗೆ ಕಟ್ಟಿಸಿಕೊಂಡು 2023ರಲ್ಲಿ ಬಾಕಿ ಇದ್ದ ನಾಲ್ವರಿಗೆ ಸಾಗುವಳಿ ಚೀಟಿ ವಿತರಿಸಿದ್ದರು. ಆದರೆ ಮೂವರಿಗೆ ಖಾತೆ ಮಾಡಿಕೊಟ್ಟಿರುವ ತಾಲೂಕು ಆಡಳಿತ ಚಂದ್ರಮ್ಮರಿಗೆ ಮಾತ್ರ ಖಾತೆ ಮಾಡಿಕೊಡದೆ ಖ್ಯಾತೆ ತೆಗೆಯುತ್ತಿದ್ದು, ಕೂಡಲೆ ಖಾತೆ ನೀಡಬೇಕೆಂದು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರು.
ದೇವನಗುಂದಿಯ ಸಂತ್ರಸ್ಥೆ ಚಂದ್ರಮ್ಮ ಮಾತನಾಡಿ, ನನ್ನ ಗಂಡ ರಂಗಪ್ಪ ಮೃತಪಟ್ಟಿದ್ದು ನಾನು ಒಬ್ಬಂಟಿ. ಈ ಇಳಿ ವಯಸ್ಸಿನಲ್ಲಿ ಕಚೇರಿಗೆ ಅಲೆದಾಡುವ ಶಕ್ತಿ ನನಗಿಲ್ಲ. ಈ ಸಂಬಂಧ ಹೈಕೋರ್ಟ್ನಲ್ಲಿ ದಾವೆ ಹೂಡಿ, ಅಲ್ಲಿಯೂ ಖಾತೆ ಮಾಡಿಕೊಡುವಂತೆ ಆದೇಶ ನೀಡಿದ್ದರೂ ಇಲ್ಲಿಯವರೆಗೆ ಖಾತೆ ಮಾಡಿಕೊಟ್ಟಿಲ್ಲವೆಂದು ಆರೋಪಿಸಿದರು.
ಧರಣಿಯಲ್ಲಿ ಸಂಘಟನೆಯ ಅನಿಲ್, ರಾಮು, ನಾರಾಯಣಪ್ಪ, ಸುಬ್ರಹ್ಮಣಿ, ಪ್ರಕಾಶ್ ಕೃಷ್ಣಪ್ಪ, ಸುರೇಶ್, ಅನಿಲ್, ರವಿ ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಫೋಟೋ: 5 ಹೆಚ್ಎಸ್ ಕೆ 2
ಹೊಸಕೋಟೆಯ ತಾಲೂಕು ಕಚೇರಿ ಮುಂದೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸಾಗುವಳಿ ಚೀಟಿ ವಿತರಿಸುತ್ತಿಲ್ಲವೆಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಧರಣಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.