ಹೂವಿನಹಡಗಲಿ: ತಾಲೂಕಿನ ಮಾಗಳ- ವಿಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ಯಾಂತ್ರೀಕೃತ ನಾಡದೋಣಿಗೆ ರಂಧ್ರ ಬಿದ್ದು ತಿಂಗಳು ಕಳೆದರೂ ದುರಸ್ತಿ ಮಾಡಲು ಅಧಿಕಾರಿಗಳು, ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಮೈಲಾರ ಜಾತ್ರೆಗೆ ಬರುವ ಭಕ್ತರು ಕೊಂಕಣ ಸುತ್ತಿ ಮೈಲಾರಕ್ಕೆ ಬರುವಂತಾಗಿದೆ.
ನಾಡಿನ 2ನೇ ಅತಿ ದೊಡ್ಡ ಮೈಲಾರಲಿಂಗೇಶ್ವರ ಜಾತ್ರೆಗೆ ಉತ್ತರ ಕರ್ನಾಟಕ ಭಾಗದ ಭಕ್ತರು, ಮೈಲಾರಕ್ಕೆ ಬರಲು ಈ ಯಾಂತ್ರೀಕೃತ ನಾಡದೋಣಿ ಮೂಲಕ ಮಾಗಳ, ಹಿರೇಹಡಗಲಿ ಹೊಳಲು ಮೂಲಕ ಮೈಲಾರಕ್ಕೆ ಬರುತ್ತಿದ್ದರು. ಆದರೆ ಈಗ ಈ ನಾಡದೋಣಿ ದುರಸ್ತಿಗೆ ಬಂದ ಪರಿಣಾಮ ಸಾವಿರಾರು ಭಕ್ತರು, ಕೊಂಕಣ ಸುತ್ತಿ ಮೈಲಾರ ಎಂಬ ಗಾದೆ ಮಾತಿನಂತೆ, 40 ರಿಂದ 45 ಕಿಮೀ ದೂರ, ನದಿ ಸುತ್ತುವರೆದು ಮೈಲಾರಕ್ಕೆ ಹೋಗುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಸಾರ್ವಜನಿಕರು.
ನಾಡದೋಣಿ ದುರಸ್ತ ಮಾಡಲು ಕ್ರಮಕ್ಕೆ ಮುಂದಾಗಬೇಕೆಂದು ಇಲ್ಲಿನ ತಹಸೀಲ್ದಾರ್, ವಿಜಯನಗರ ಜಿಲ್ಲಾಧಿಕಾರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಜತೆಗೆ ಈ ಕುರಿತು ವಿಜಯನಗರ ಜಿಲ್ಲಾಧಿಕಾರಿ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಂದು ತಿಳಿದು ಬಂದಿದೆ.ಹೂವಿನಹಡಗಲಿ ತಾಲೂಕಿನ ಮಾಗಳ-ವಿಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ಯಾಂತ್ರೀಕೃತ ನಾಡದೋಣಿ ದುರಸ್ತಿ ಮಾಡುವಂತೆ ಈಗಾಗಲೇ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ.
ತುಂಗಭದ್ರಾ ನದಿ ತೀರದ ಮಾಗಳ ವಿಠಲಾಪುರ ಮಧ್ಯೆ ಸಂಚರಿಸುತ್ತಿದ್ದ ಯಾತ್ರೀಕೃತ ನಾಡದೋಣಿ ದುರಸ್ತಿ ಕುರಿತು ಪತ್ರ ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎನ್ನುತ್ತಾರೆ ಬಂದರು ಒಳನಾಡು ಜಲಸಾರಿಗೆ ಇಲಾಖೆಯ ಮೇರಿನ್ ಎಂಜಿನಿಯರಿಂಗ್ ಆಫೀಸರ್ ದೀಪಕ್.