ಧಾರವಾಡ: ಸಾರ್ವಜನಿಕ ಕೆಲಸಗಳಲ್ಲಿ ಪಾರದರ್ಶಕತೆ ತರಲು ಮತ್ತು ಸಕಾಲಕ್ಕೆ ಸೇವೆಗಳು ತಲುಪುವಂತೆ ಮಾಡುವಲ್ಲಿ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರಿ ನೌಕರರಿಗೆ ಆರ್.ಟಿ.ಐ. ಕಾಯ್ದೆಯ ಬಗ್ಗೆ ಭಯ ಬೇಡ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಪ್ರತಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆರ್.ಟಿ.ಐ. ಕಾಯ್ದೆಯ ಕುರಿತು ಅಗತ್ಯ ಮಾಹಿತಿ ಮತ್ತು ತಿಳಿವಳಿಕೆ ಪಡೆಯುವುದು ಅಗತ್ಯ. ಸರ್ಕಾರ ಪ್ರತಿ ನೌಕರನನ್ನೂ ಮಾಹಿತಿಯುಕ್ತ ಅಧಿಕಾರಿಯಾಗಿ ರೂಪಿಸುವ ಉದ್ದೇಶದಿಂದ ಇಂತಹ ಮಾಹಿತಿ ಹಕ್ಕು ಅಧಿನಿಯಮ ಕುರಿತು ಕಾರ್ಯಾಗಾರ ಏರ್ಪಡಿಸಿ, ತರಬೇತಿ ನೀಡಲು ನಿರ್ದೇಶಿಸಿದೆ ಎಂದರು.
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ವಿಶ್ರಾಂತ ಆಯುಕ್ತ ಡಾ. ಶೇಖರ ಸಜ್ಜನ, ಅಧಿನಿಯಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಅನೇಕರು ತೊಂದರೆಗೆ ಒಳಗಾಗುತ್ತಾರೆ. ಅಧಿನಿಯಮದಲ್ಲಿ ಆರ್.ಟಿ.ಐ. ಅರ್ಜಿಯ ಪ್ರತಿ ಹಂತದ ವಿಲೇವಾರಿ ಬಗ್ಗೆ ಹಾಗೂ ತಿರ್ಮಾನಗಳ ಬಗ್ಗೆ ಸೆಕ್ಷೆನ್ಗಳ ಪ್ರಕಾರ ವಿವರವಾಗಿ ತಿಳಿಸಲಾಗಿದೆ. ಅನೇಕರು ಮಾಹಿತಿ ದುರಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಮಾಹಿತಿ ಆಯೋಗವು ಈಗಾಗಲೇ ಸುಮಾರು 22 ಜನ ಮಾಹಿತಿ ಹಕ್ಕು ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಆದೇಶಿಸಿದೆ ಎಂದರು.ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ ವೇದಿಕೆಯಲ್ಲಿದ್ದರು. ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಸ್ವಾಗತಿಸಿದರು. ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ವಂದಿಸಿದರು. ಶಿರಸ್ತೇದಾರ ಮಲ್ಲಿಕಾರ್ಜುನ ಸೊಲಗಿ ನಿರೂಪಿಸಿದರು.