ನೆಟ್‌ವರ್ಕ್‌ ಸಂಪರ್ಕದಿಂದ ವಂಚಿತಗೊಂಡ ಒಳತಾಂಡಾ

KannadaprabhaNewsNetwork | Published : Feb 24, 2025 12:33 AM

ಸಾರಾಂಶ

ತಾಲೂಕಿನ ಹಲುವಾಗಲು ಗ್ರಾಪಂ ವ್ಯಾಪ್ತಿಯ ಒಳತಾಂಡಾ ಗ್ರಾಮವು ಆಧುನಿಕ ಸೌಲಭ್ಯ, ಸಂಪರ್ಕದಿಂದ ವಂಚಿತವಾಗಿದೆ.

ನಿತ್ಯ ಸಮಸ್ಯೆ ಅನುಭವಿಸುತ್ತಿರುವ ಗ್ರಾಮಸ್ಥರುಬಿ. ರಾಮಪ್ರಸಾದ್‌ ಗಾಂಧಿ

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ತಾಲೂಕಿನ ಹಲುವಾಗಲು ಗ್ರಾಪಂ ವ್ಯಾಪ್ತಿಯ ಒಳತಾಂಡಾ ಗ್ರಾಮವು ಆಧುನಿಕ ಸೌಲಭ್ಯ, ಸಂಪರ್ಕದಿಂದ ವಂಚಿತವಾಗಿದೆ.

ಎರಡು ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಒಳತಾಂಡಾ ಗ್ರಾಮವು ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿದ್ದು, 160ಕ್ಕೂ ಹೆಚ್ಚು ಮನೆಗಳಿವೆ. ಕೃಷಿ, ಕೂಲಿ ಕೆಲಸದಿಂದ ಜನ ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿ ನೆಟ್‌ವರ್ಕ್ ಸಂಪರ್ಕವಿಲ್ಲದೇ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಆಸ್ಪತ್ರೆ, ಅಪಘಾತದಂತಹ ತುರ್ತು ಸಂದರ್ಭದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳು ಸೇರಿದಂತೆ ಆಗತ್ಯ ಸೇವೆ ಪಡೆಯಲು ಬೇರೆಡೆ ಹೋಗಬೇಕು. ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎನ್ನುತ್ತಾರೆ ಪೋಷಕರು.

ಗ್ರಾಮದ ಜನರು ಮೊಬೈಲ್‌ ಸಂಪರ್ಕಕ್ಕಾಗಿ ಗ್ರಾಮದಿಂದ ಸುಮಾರು 300 ಮೀಟರ್ ದೂರಹೋಗಬೇಕಾಗಿದೆ. ಇನ್ನು ಕೆಲವರು ಗುಡ್ಡ ಏರುತ್ತಾರೆ. ತುರ್ತು ಸಂದರ್ಭದಲ್ಲಿ ಸಂಪರ್ಕ ಕಷ್ಟವಾಗುತ್ತಿದೆ ಎಂದು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.

ಗ್ರಾಮಕ್ಕೆ ಮೊಬೈಲ್ ಟವರ್ ಸೌಲಭ್ಯ ಕಲ್ಪಿಸಿಕೊಡುವಂತೆ ಬಿಎಸ್‌ಎನ್‌ಎಲ್ ಅಧಿಕಾರಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಅವರ ಪುತ್ರ ಸಮರ್ಥ್ ಅವರು ಮೊಬೈಲ್ ಟವರ್ ಅಳವಡಿಸುವ ಭರವಸೆ ನೀಡಿದ್ದರು. ಚುನಾವಣೆ ಮುಗಿದು 10 ತಿಂಗಳು ಪೂರ್ಣಗೊಳ್ಳುತ್ತಾ ಬಂದರೂ ಇನ್ನು ಕೆಲಸ ಆಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ನೆಟ್‌ವರ್ಕ್ ಸಮಸ್ಯೆ ಜತೆಗೆ ಗ್ರಾಮದಲ್ಲಿ ವಿದ್ಯುತ್, ರಸ್ತೆ, ಚರಂಡಿ, ಸಾರಿಗೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆ ಕಾಡುತ್ತಿದೆ. ಆದರೆ ಅಧಿಕಾರಿಗಳು ಮಾತ್ರ ಈ ಕಡೆ ಗಮನ ಹರಿಸುತ್ತಿಲ್ಲ. ಕೂಡಲೇ ಗ್ರಾಮಕ್ಕೆ ಮೊಬೈಲ್ ಟವರ್ ಅಳವಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಒಳತಾಂಡಾ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆ ಕುರಿತು ಈಗಾಗಲೇ ಬಿಎಸ್‌ಎಲ್‌ಎಲ್ ಎಂಜಿನಿಯರ್‌ಗಳ ಜತೆ ಮಾತನಾಡಿದ್ದೇನೆ, ಅದಷ್ಟು ಬೇಗ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್.

Share this article