ಚಳ್ಳಕೆರೆ: ಚಳ್ಳಕೆರೆ ನಗರದಾದ್ಯಂತ ವೃದ್ದಾಪ್ಯ, ವಿಧವವೇತನ ಸೇರಿದಂತೆ ಸರ್ಕಾರದಿಂದ ಬರುವ ಮಾಸಾಶನವನ್ನು ತ್ಯಾಗರಾಜ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿತ್ತು. ನಗರದ ವಿವಿಧೆಡೆಗಳಿಂದ ಬಂದ ವಯೋವೃದ್ದರಿಗೆ ಅಂಚೆ ಕಚೇರಿಯ ಒಳಗೆ ಪ್ರವೇಶಿಸಿ ತಮ್ಮ ಹಣವನ್ನು ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.
ಇದರಿಂದ ವಯೋವೃದ್ದರು, ಅಂಗವಿಕಲರು ಬಿಸಿಲು, ಮಳೆಯಲ್ಲೇ ಗಂಟೆಗಟ್ಟಲೆ ನಿಂತು ತಮ್ಮ ಪಾಲಿನ ಮಾಸಾಶನವನ್ನು ಪಡೆಯುವ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆ ಮನನೊಂದ ಗಂಗಮ್ಮ, ಸುಲೋಚನ, ಬೋರಣ್ಣ, ಸುರೇಶ್ ಮುಂತಾದವರು ಅಂಚೆ ಕಚೇರಿಯ ಈ ದಿಢೀರ್ ಬದಲಾವಣೆಗೆ ಅಸಮದಾನವನ್ನು ವ್ಯಕ್ತಪಡಿಸಿದ್ದಾರೆ.
ವಿಶೇಷವೆಂದರೆ ಯಾರಿಗೆ ಶಕ್ತಿ ಇದೆಯೋ ಅವರು ಮುಂದೆ ಬಂದು ಇಲ್ಲಿ ಹಣ ಪಡೆಯಬಹುದಾಗಿದೆ. ಸರದಿ ಸಾಲಿನಲ್ಲಿ ನಿಲ್ಲಿಸಿ ಹಣ ಕೊಡಿಸುವ ವ್ಯವಸ್ಥೆ ಇಲ್ಲಿ ಇಲ್ಲ. ಆದ್ದರಿಂದ ಅಂಚೆ ಕಚೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿ ತಿಂಗಳ ಮಾಸಾಶವನ್ನು ಕಚೇರಿಯ ಒಳ ಆವರಣದಲ್ಲೇ ಪಡೆಯುವ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದ್ದಾರೆ.