ಕನ್ನಡಪ್ರಭ ವಾರ್ತೆ ತುಮಕೂರುರೈತ, ಕೃಷಿಕಾರರ ಮನೆ ನಿವೇಶನ, ಭೂಮಿ ಹಕ್ಕಿಗಾಗಿ, ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ವಿರೋಧಿಸಿ, ಎಂ.ಎಸ್.ಪಿ, ಸಾಲಮನ್ನಾ ಹಕ್ಕಿಗಾಗಿ ಫೆ.10 ರಿಂದ ಬೃಹತ್ ವಿಧಾನಸೌಧ ಚಲೋ-ಅನಿರ್ಧಿಷ್ಠಾವದಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್. ಚನ್ನಬಸವಣ್ಣ ತಿಳಿಸಿದರು.ಇಲ್ಲಿನ ಜನಚಳವಳಿ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತ ಹಾಗೂ ಜನ ವಿರೋಧಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ವಿರೋಧಿಸಿ, ಮನೆ-ನಿವೇಶನ, ಬಗರ್ ಹುಕುಂ -ಅರಣ್ಯ ಸಾಗುವಳಿ ರೈತ-ಕೂಲಿಕಾರರ ಹಕ್ಕು ರಕ್ಷಣೆಗಾಗಿ, ಬಲವಂತದ ಭೂ ಸ್ವಾಧೀನ ಹಾಗೂ ಭೂ ಸಂಪತ್ತಿನ ಕಾರ್ಪೊರೇಟ್ ಲೂಟಿ ಹಿಮ್ಮೆಟ್ಟಿಸಲು ಈ ಆಂದೋಲನ ನಡೆಸಲಾಗುತ್ತಿದೆ ಎಂದರು.ಜಿಲ್ಲೆಯಾದ್ಯಂತ ೪೦೦೦ ರೈತ ಕೂಲಿಕಾರರು ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಬಗರ್ಹುಕುಂ ಸಾಗುವಳಿ ಸಕ್ರಮ ಕೋರಿ ಅರ್ಜಿ ಸಲ್ಲಿಸಿರುವ ರೈತರ ನ್ಯಾಯಬದ್ದ ಕೋರಿಕೆಯನ್ನು ಸಮರೋಪಾಧಿಯಲ್ಲಿ ತಿರಸ್ಕರಿಸಲಾಗಿದೆ ಎಂದರು.